ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಣಿಗಲ್: ಮೇವು ಬಂದರೂ, ಬರದ ಅಧಿಕಾರಿಗಳು

Published 16 ಮೇ 2024, 6:01 IST
Last Updated 16 ಮೇ 2024, 6:01 IST
ಅಕ್ಷರ ಗಾತ್ರ

ಕುಣಿಗಲ್: ತಾಲ್ಲೂಕಿನ ಟಿ.ಹೊಸಹಳ್ಳಿ ಗ್ರಾಮದಲ್ಲಿ ಬುಧವಾರ ಮೇವು ಬ್ಯಾಂಕ್ ಪ್ರಾರಂಭಿಸಿ, ಮೇವು ವಿತರಣೆ ಮಾಡುವುದಾಗಿ ತಿಳಿಸಿದ್ದ ಅಧಿಕಾರಗಳ ಸೂಚನೆ ಮೇರೆಗೆ ಬಂದಿದ್ದ ರೈತರಿಗೆ ಮೇವು ಬಂದಿದ್ದರೂ ಅಧಿಕಾರಿಗಳು ಕಾರ್ಯಕ್ರಮವನ್ನು ಮುಂದೂಡಿದ ಕಾರಣ ಮೇವಿಗಾಗಿ ಬಂದವರು ಬರಿಗೈಲಿ ಹಿಂತಿರುಗಿದರು.

ತಾಲ್ಲೂಕು ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದ್ದರೂ, ಜಾನುವಾರುಗಳಿಗೆ ಮೇವಿನ ಬ್ಯಾಂಕ್ ಪ್ರಾರಂಭಮಾಡುವಲ್ಲಿ ಮತ್ತು ಮೇವು ವಿತರಣೆ ಮಾಡುವಲ್ಲೂ ತಾಲ್ಲೂಕು ಮಟ್ಟದ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಮಳೆ ಬಂದು ಮೇವು ಕೊಳೆಯುವ ಮೊದಲು ಜಾನುವಾರುಗಳಿಗೆ ಮೇವು ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಟಿ.ಹೊಸಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ತರಿಕೆರೆ ಪ್ರಕಾಶ್ ಒತ್ತಾಯಿಸಿದರು.

ಜಿಲ್ಲೆಯ ಒಂಭತ್ತು ತಾಲ್ಲೂಕಿನಲ್ಲಿ ಮೇವು ಬ್ಯಾಂಕ್ ಪ್ರಾರಂಭವಾಗಿ ಮೇವು ವಿತರಣೆ ನಡೆಯುತ್ತಿದ್ದರೂ, ಕುಣಿಗಲ್ ತಾಲ್ಲೂಕಿನಲ್ಲಿ ಕಡೆಯದಾಗಿ ಮೇವಿನ ಬ್ಯಾಂಕ್ ಪ್ರಾರಂಭಕ್ಕೆ ದಿನ ನಿಗದಿಯಾಗಿತ್ತು. ಅಧಿಕಾರಿಗಳ ಸಮನ್ವಯತೆ ಕೊರತೆಯಿಂದ ನಿಗದಿಯಾದ ದಿನ ಪ್ರಾರಂಭವಾಗದೆ ಮುಂದೂಡಲಾಗಿರುವ ಬಗ್ಗೆ ತರಿಕೆರೆ ಗ್ರಾಮಸ್ಥ ಲೋಕೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಸಬ ಹೋಬಳಿಯಲ್ಲಿ ಮೇವಿನ ಕೊರತೆ ಕಾರಣ ಟಿ.ಹೊಸಹಳ್ಳಿಯಲ್ಲಿ ಮೇವು ಬ್ಯಾಂಕ್ ಪ್ರಾರಂಭಕ್ಕೆ ಸಿದ್ಧತೆ ಮಾಡಿಕೊಂಡಿದ್ದ ಪಶುಪಾಲನ ಇಲಾಖೆ ಅಧಿಕಾರಿಗಳು 750 ಮಾಲೀಕರನ್ನು ಗುರುತಿಸಿ, 250 ರೈತರಿಗೆ ಟೋಕನ್ ವಿತರಣೆ ಮಾಡಿ ಬುಧವಾರ ಬಂದು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮೇವು ಪಡೆದುಕೊಳ್ಳಲು ಸೂಚನೆ ನೀಡಿದ್ದರು.

ಅಧಿಕಾರಿಗಳ ಸೂಚನೆ ಮೇರೆಗೆ ಸ್ಥಳಕ್ಕೆ ಬಂದಿದ್ದ ರೈತರು ಮೇವಿನ ಲೋಡ್ ತುಂಬಿಕೊಂಡು ಬಂದಿದ್ದ ಲಾರಿಗಳನ್ನು ನೋಡಿ ಸಂತಸಪಟ್ಟಿದ್ದರು. ಕಾರ್ಯಕ್ರಮ ಮುಂದೂಡಿರುವ ಬಗ್ಗೆ ಕೆಳ ಹಂತದ ಸಿಬ್ಬಂದಿಗಳು ತಿಳಿಸಿದಾಗ ಬೇಸರದಿಂದ ಗ್ರಾಮಗಳಿಗೆ ಹಿಂತಿರುಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT