ಕುಣಿಗಲ್: ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ರಾಗಿ ಖರೀದಿ ಕೇಂದ್ರದ ಅವ್ಯವಸ್ಥೆಯಿಂದಾಗಿ ರೈತರು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ವ್ಯವಸ್ಥಿತ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಕೇಂದ್ರದಲ್ಲಿ ರೈತರಿಗೆ ಅನುಮತಿ ನೀಡಿರುವ ದಿನದಂದೇ ರಾಗಿಯನ್ನು ತಂದು ಎಪಿಎಂಸಿ ಪ್ರಾಂಗಣದಲ್ಲಿ ಹಾಕಿದ್ದರು. ಸ್ವೀಕರಿಸಲು ಅಧಿಕಾರಿಗಳು ನಿರಾಕರಣೆ ಮಾಡುತ್ತಿದ್ದಾರೆ. ಇದರಿಂದಾಗ ವಾರಗಟ್ಟಲೆ ಪ್ರಾಂಗಣದಲ್ಲಿ ಉಳಿಯುವ ಸ್ಥಿತಿ ಬಂದಿದೆ ಎಂದು ಅಮೃತೂರು ಹೋಬಳಿಯ ಪುಟ್ಟರಾಜು, ಚಿಕ್ಕಣ್ಣ ಸ್ವಾಮಿ, ಚಂದು, ಶಂಭುಗೌಡ, ಚಿಕ್ಕಪಾಪಾ, ತಿಮ್ಮಮ್ಮ ದೂರಿದರು.
ಕೇಂದ್ರದಲ್ಲಿ ಕುಡಿಯುವ ನೀರಿನ ಸೌಕರ್ಯವಿಲ್ಲ. ಸಾರ್ವಜನಿಕ ಶೌಚಾಲಯ ಇಲ್ಲ, ರಾತ್ರಿ ಹೊತ್ತು ನರಕಯಾತನೆಯಾದರೆ, ಬೆಳಗಿನ ಹೊತ್ತು ಬಿಸಿಲಿನ ಝಳ ಹೆಚ್ಚಾಗಿ ಸುಸ್ತು ಸಂಕಟ ಅನುಭವಿಸುವಂತಾಗಿದೆ ಎಂದು ದೂರಿದ್ದಾರೆ.
25ರಂದು ರಾಗಿ ಪಡೆಯುವ ದಿನಾಂಕವಿದ್ದು, 24ರ ರಾತ್ರಿ ತಂದಿರುವೆ. ಇದುವರೆಗೂ ರಾಗಿ ಪಡೆದಿಲ್ಲ ಎಂದು ಮಾದಪ್ಪನಹಳ್ಳಿಯ ಮುದ್ದಯ್ಯ ದೂರಿದ್ದಾರೆ.
28ಕ್ಕೆ ದಿನಾಂಕ ನಿಗದಿಪಡಿಸಿದ್ದು, 27 ಸಂಜೆ ರಾಗಿ ತಂದಿರುವೆ. ರಾಗಿ ಪಡೆಯಲು ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ಚಿಕ್ಕಮಳಲವಾಡಿಯ ರಂಗಸ್ವಾಮಿ ದೂರಿದರು.
ರಾಗಿ ಕಳವಿನ ಘಟನೆ ನಡೆಯುತ್ತಿದ್ದು, ರೈತರು ಅನಿವಾರ್ಯವಾಗಿ ಹೊರ ಹೋದ ಸಮಯದಲ್ಲಿ ರಾಗಿ ಕಳವುಮಾಡಿ ಬೇರೆ ಚೀಲಗಳಿಗೆ ತುಂಬಿ ಖಾಲಿ ಚೀಲಗಳನ್ನು ಎಸೆದು ಹೋಗುತ್ತಿದ್ದಾರೆ. ಒಂದೆಡೆ ಕಷ್ಟಪಟ್ಟು ಬೆಳೆದ ರಾಗಿ ಸುರಕ್ಷತೆ ಜತೆಗೆ ಮನೆಗಳಿಂದ ದೂರುವಿರುವುದರಿಂದ ಹೊಲ ಮನೆ ಜಾನುವಾರುಗಳನ್ನು ನೋಡಿಕೊಳ್ಳಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ನಾಗನಹೊಸೂರು ತಿಮ್ಮಮ್ಮ ಹೇಳಿದರು.
ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಚುನಾವಣೆಯ ಕೆಲಸದಲ್ಲಿರುವುದರಿಂದ ರಾಗಿ ಖರೀದಿ ಕೇಂದ್ರದ ಅವ್ಯವಸ್ಥೆ ಬಗ್ಗೆ ಗಮನ ಹರಿಸುತ್ತಿಲ್ಲ. ಚುನಾವಣೆ ಮುಖ್ಯವಾಗಿದೆ ಹೊರತು ರೈತರ ಬವಣೆ ಬೇಕಾಗಿಲ್ಲ ಎಂದು ರೈತರು ದೂರಿದರು.
ಕೇಂದ್ರದ ವ್ಯವಸ್ಥಾಪಕ ಕೃಷ್ಣಪ್ಪ ಮಾತನಾಡಿ, ರಜಾ ದಿನ ಹೊರತುಪಡಿಸಿ ರಾಗಿ ಖರೀದಿ ಮಾಡಲಾಗುತ್ತಿದೆ. ಸಿಬ್ಬಂದಿಯನ್ನು ಚುನಾವಣೆಗೆ ನಿಯೋಜನೆ ಮಾಡಿರುವ ಕಾರಣ ಸಮಸ್ಯೆ ಹೆಚ್ಚಾಗಿದೆ. ಅದರೂ ನಿತ್ಯ 4 ಸಾವಿರ ಕ್ವಿಂಟಲ್ ರಾಗಿ ಪಡೆಯಲಾಗುತ್ತಿದೆ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.