ಪಾವಗಡ: ಶಾಲಾ ಹಂತದಿಂದಲೇ ಕಾನೂನಿನ ಬಗ್ಗೆ ಮಕ್ಕಳಿಗೆ ತಿಳುವಳಿಕೆ ಮೂಡಿಸಬೇಕು ಎಂದು ನ್ಯಾಯಾಧೀಶೆ ಎಂ.ಎಸ್. ಹರಿಣಿ ತಿಳಿಸಿದರು.
ಪಟ್ಟಣದ ವಿನಾಯಕ ಸರಸ್ವತಿ ಶಾಲೆಯಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಆಯೋಜಿಸಿದ್ದ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳಿಂದ ವೃದ್ಧರವರೆಗೆ ಪ್ರತಿಯೊಬ್ಬರೂ ಕಾನೂನಿನ ಚೌಕಟ್ಟಿಗೆ ಒಳಪಡುತ್ತಾರೆ. ಶಿಕ್ಷಕರು, ಪೋಷಕರು ಮಕ್ಕಳಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸಬೇಕು. ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆಯ ಅನ್ವಯ 18 ವರ್ಷಕ್ಕಿಂತ ಕಡಿಮೆ ವಯಸ್ಸಿಗಿಂತ ಕಡಿಮೆ ವಯಸ್ಸಿನವರು ತಪ್ಪು ಮಾಡಿದರೆ ಅಂತಹವರಿಗೆ ಬಾಲಾಪರಾಧಿ ಮಂಡಳಿಯಲ್ಲಿ ಶಿಕ್ಷೆ ವಿಧಿಸಲಾಗುತ್ತದೆ ಎಂದರು.
ಕಾನೂನು ಸೇವಾ ಪ್ರಾಧಿಕಾರದ ಮೂಲಕ ಬಡವರಿಗೆ ನ್ಯಾಯ ಕಲ್ಪಿಸಲಾಗುತ್ತಿದೆ. ಕಾನೂನಿನಲ್ಲಿನ ಪರಿಹಾರ ಕಲ್ಪಿಸುವ ಬಗ್ಗೆ, ಪ್ರತಿಯೊಬ್ಬರ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಗುರಿಯನ್ನು ಕಾನೂನು ಸೇವಾ ಪ್ರಾಧಿಕಾರ ಹೊಂದಿದೆ ಎಂದರು.
ನ್ಯಾಯಾಧೀಶೆ ವಿಸ್ಮಿತಾ ಮೂರ್ತಿ, ಕಾನೂನಿನ ದೃಷ್ಟಿಯಲ್ಲಿ ಪ್ರತಿಯೊಬ್ಬರು ಸಮಾನರು. ಕಾಯ್ದೆ, ಸೆಕ್ಷನ್ಗಳು ಎಲ್ಲರಿಗೂ ಸಮಾನವಾಗಿ ಅನ್ವಯವಾಗುತ್ತವೆ. ನ್ಯಾಯ ಪ್ರತಿಯೊಬ್ಬರಿಗೂ ಒಂದೇ ಎಂದರು.
ವಕೀಲೆ ಒ.ಎಲ್. ದಿವ್ಯ, ಬಾಲಪರಾಧ, ಬಾಲ ಕಾರ್ಮಿಕ, ಬಾಲ್ಯ ವಿವಾಹ ಪದ್ಧತಿಗಳು ಮಕ್ಕಳ ಮೇಲೆ ಹಾಗೂ ಸಮಾಜದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಪ್ರತಿಯೊಬ್ಬರೂ ಇಂತಹವುಗಳನ್ನು ನಿಯಂತ್ರಿಸಲು ಪಣ ತೊಡಬೇಕು. ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಸೇರಿಸಬೇಕು ಎಂದರು.
ವಕೀಲರ ಸಂಘದ ಅಧ್ಯಕ್ಷ ಶೇಷಾನಂದ್, ಕಾರ್ಯದರ್ಶಿ ಎಚ್.ಎ. ಪ್ರಭಾಕರ್, ವಕೀಲ ಎ.ಆರ್. ಚರಣ್, ಶಾಲೆ ಸಿಬ್ಬಂದಿ ಉಪಸ್ಥಿತರಿದ್ದರು.