ಗುಬ್ಬಿ: ತಾಲ್ಲೂಕಿನ ಜಿ.ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುದ್ದನಹಳ್ಳಿಯಲ್ಲಿ ಶನಿವಾರ ಬೆಳಗಿನ ಜಾವ ಕುರಿ ಹಿಂಡಿನ ಮೇಲೆ ಚಿರತೆ ದಾಳಿ ನಡೆಸಿ, 10 ಕುರಿಗಳನ್ನು ಕೊಂದು ಹಾಕಿದೆ.
ರೈತರಾದ ಲಕ್ಷ್ಮಮ್ಮ ಹಾಗೂ ಗಂಗಣ್ಣ ಅವರು ಕುರಿ ಮತ್ತು ಮೇಕೆಗಳನ್ನು ಸಾಕಿ ಬದುಕು ಕಟ್ಟಿಕೊಂಡಿದ್ದರು. ಚಿರತೆಯ ದಾಳಿಯಿಂದ ಕುಟುಂಬ ಕಂಗಾಲಾಗಿದ್ದು, ಬದುಕಿನ ಚಿಂತೆ ಕಾಡುತ್ತಿದೆ. ವಿಷಯ ತಿಳಿದ ತಕ್ಷಣ ವಲಯ ಅರಣ್ಯಾಧಿಕಾರಿ ದುಗ್ಗಪ್ಪ ಹಾಗೂ ತಂಡ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಇತ್ತೀಚಿನ ದಿನಗಳಲ್ಲಿ ಈ ಭಾಗದಲ್ಲಿ ಚಿರತೆಯ ಹಾವಳಿ ಹೆಚ್ಚಾಗಿದ್ದು, ಚಿರತೆ ಹಿಡಿಯಲು ಅರಣ್ಯಾಧಿಕಾರಿಗಳು ಮುಂದಾಗಬೇಕು ಎಂದು ಮುದ್ದನಹಳ್ಳಿಯ ಗ್ರಾಮಸ್ಥರು ಒತ್ತಾಯಿಸಿದರು.