ಉಡುಪಿ: ಜಿಲ್ಲೆಯ ಅಜೇಕಾರು, ಕರ್ಜೆ, ಸೈಬರಕಟ್ಟೆ, ಶಂಕರ ನಾರಾಯಣ ಹಾಗೂಶಿರ್ವ ವ್ಯಾಪ್ತಿಯಲ್ಲಿ ಶುಕ್ರವಾರ 5 ಮಂಗಗಳ ಶವಗಳು ಪತ್ತೆಯಾಗಿವೆ ಎಂದುಜಿಲ್ಲಾ ನೋಡೆಲ್ ಅಧಿಕಾರಿ ಪ್ರಶಾಂತ್ ಭಟ್ ಮಾಹಿತಿ ನೀಡಿದರು.
ನಾಲ್ಕು ಮಂಗಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾದರೆ, ಒಂದು ಮಂಗ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಜಿಲ್ಲೆಯಲ್ಲಿ ಇದುವರೆಗೂ 75 ಮಂಗಗಳ ಶವ ಪತ್ತೆಯಾಗಿದೆ ಎಂದು ಅವರು ಮಾಹಿತಿ ನೀಡಿದರು.
ಬ್ರಹ್ಮಾವರದ ವ್ಯಕ್ತಿಯೊಬ್ಬರಲ್ಲಿ ಹಾಗೂ ಸಾಗರ ತಾಲ್ಲೂಕಿನಿಂದ ಉಡುಪಿ ಜಿಲ್ಲೆಗೆ ಜಾತ್ರೆಗೆ ಬಂದಿದ್ದ ಮಹಿಳೆಯೊಬ್ಬರಲ್ಲಿ ಶಂಕಿತ ಜ್ವರ ಕಾಣಿಸಿಕೊಂಡಿದ್ದು, ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಶನಿವಾರ ವರದಿ ಬರಲಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಇದುವರೆಗೂ 28 ಮಂಗನ ಶವಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, 23 ಪ್ರಕರಣಗಳ ವರದಿ ಬಂದಿದೆ. 12 ಮಂಗಗಳ ದೇಹದಲ್ಲಿ ಸೋಂಕು ಪತ್ತೆಯಾದರೆ, 11ರಲ್ಲಿ ಪತ್ತೆಯಾಗಿಲ್ಲ ಎಂದು ವಿವರ ನೀಡಿದರು.
ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ 49 ರೋಗಿಗಳಲ್ಲಿ ಮಂಗನ ಕಾಯಿಲೆ ಸೋಂಕು ದೃಢಪಟ್ಟಿದೆ. ಇದುವರೆಗೂ 121 ಶಂಕಿತರು ಚಿಕಿತ್ಸೆ ಪಡೆದಿದ್ದು, 73 ರೋಗಿಗಳಲ್ಲಿ ಸೋಂಕು ಕಂಡುಬಂದಿಲ್ಲ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.