ಕುಂದಾಪುರ: ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅನುಮತಿ ನೀಡುವ ಮೂಲಕ ವಿದೇಶಿ ದೈತ್ಯ ಕಂಪೆನಿಗಳಿಗೆ ಸ್ವಾಗತ ಕೋರುವ ಸರ್ಕಾರದ ಜನವಿರೋಧಿ ನೀತಿಯಿಂದಾಗಿ ಇಲ್ಲಿನ ರೈತರು ಕಂಗಾಲಾಗಿದ್ದಾರೆ ಎಂದು ಅಖಿಲ ಭಾರತ ರಸ್ತೆ ಮತ್ತು ಸಾರಿಗೆ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೇರಳದ ಶಾಸಕ ಕೆ.ಕೆ.ದಿವಾಕರನ್ ಹೇಳಿದರು.
ನಗರದಲ್ಲಿ ಎರಡು ದಿನಗಳ ಕಾಲ ನಡೆದ ಉಡುಪಿ ಜಿಲ್ಲಾ ಸಿಐಟಿಯುನ 4ನೇ ಸಮ್ಮೇಳನದ ಸಮಾರೋಪದ ಪ್ರಯುಕ್ತ ಸೋಮವಾರ ಸಂಜೆ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
ಎರಡು ದಿನಗಳ ಕಾಲ ನಡೆದ ಸಮ್ಮೇಳನದಲ್ಲಿ ಮುಂಬರುವ ಪುರಸಭೆ ಹಾಗೂ ವಿಧಾನ ಸಭಾ ಚುನಾವಣೆಗಳು ಸೇರಿದಂತೆ ಯಾವುದೇ ಚುನಾವಣೆಗಳಿಗೆ ಎಡಪಕ್ಷಗಳನ್ನು ಬೆಂಬಲಿಸುವುದು. ಬೆಲೆ ಏರಿಕೆ ವಿರುದ್ಧ ಸಂಘಟಿತ ಹೋರಾಟ. ಕನಿಷ್ಠ ವೇತನ 10 ಸಾವಿರ ರೂ. ನಿಗದಿಗಾಗಿ ಒತ್ತಾಯ.
ಕೆ.ಜಿ.ಗೆ 2 ರೂ. ಗಳಂತೆ ಪಡಿತರ ವಿತರಣೆಗೆ ಆಗ್ರಹ. ದೇವಸ್ಥಾನಗಳಲ್ಲಿ ಪಂಕ್ತಿ ಬೇಧ ನಡೆಸುತ್ತಿರುವುದರ ವಿರುದ್ಧ ಹೋರಾಟ. ಕಾರ್ಮಿಕರಿಗೆ ವಾರ ಪೂರ್ತಿ ಕೆಲಸಕ್ಕೆ ಒತ್ತಾಯ. ವಿದೇಶೀ ಬಂಡವಾಳ ಹೂಡಿಕೆಯ ಬಹಿಷ್ಕಾರ. ಕಾರ್ಮಿಕರ ವಿರುದ್ಧದ ದೌರ್ಜನ್ಯವನ್ನು ಸಂಘಟಿತವಾಗಿ ಎದುರಿಸುವುದು ಸೇರಿದಂತೆ ಪ್ರಮುಖ 10 ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಸಿಐಟಿಯು ಜಿಲ್ಲಾಧ್ಯಕ್ಷ ಕೆ.ಶಂಕರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಿಐಟಿಯು ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್. ಪ್ರಸನ್ನಕುಮಾರ್, ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಪಿ. ವಿಶ್ವನಾಥ ರೈ, ಜಿಲ್ಲಾ ಸಮಿತಿಯ ಉಪಾಧ್ಯಕ್ಷರಾದ ದೋಗು ಸುವರ್ಣ, ಕಾರ್ಯದರ್ಶಿಗಳಾದ ಕೆ. ಲಕ್ಷ್ಮಣ, ಬಲ್ಕೀಸ್ ಭಾನು. ಸುರೇಶ್ ಕಲ್ಲಾಗರ, ಹೆಚ್.ನರಸಿಂಹ, ಕೋಶಾಧಿಕಾರಿ ಶಶಿಧರ ಗೊಲ್ಲ ಇದ್ದರು.ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು, ಮಹಾಬಲ ವಡೇರ ಹೋಬಳಿ ನಿರೂಪಿಸಿದರು.