ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಐವರಿಗೆ ‘ಗೋಪಾಲ ಗೌರವ’ ಪ್ರಶಸ್ತಿ ಪ್ರದಾನ

Published 11 ಮೇ 2024, 14:16 IST
Last Updated 11 ಮೇ 2024, 14:16 IST
ಅಕ್ಷರ ಗಾತ್ರ

ಸಿದ್ದಾಪುರ: ‘ಗೋವುಗಳೆಂದರೆ ಒಂದು ದೃಷ್ಟಿಯಲ್ಲಿ ಚಲಿಸುವ ವಿಶ್ವವಿದ್ಯಾಲಯಗಳೆಂದು ಪರಿಗಣಿಸಬೇಕು. ಗೋವುಗಳು ಮೌನದಲ್ಲಿ ಮಾಡುವ ಬೋಧನೆ ಮನುಷ್ಯರನ್ನು ಸರಿದಾರಿಯಲ್ಲಿ ಹಚ್ಚುವ ದಾರಿದೀಪವಾಗಿದೆ’ ಎಂದು ರಾಮಚಂದ್ರಾಪುರಮಠ ಮಹಾಸಂಸ್ಥಾನದ ರಾಘವೇಶ್ವರಭಾರತೀ ಶ್ರೀ ಹೇಳಿದರು.

ತಾಲ್ಲೂಕಿನ ಭಾನ್ಕುಳಿಯ ರಾಮದೇವಮಠದಲ್ಲಿ ನಡೆಯುತ್ತಿರುವ ಶಂಕರಪಂಚಮಿ ಉತ್ಸವದಲ್ಲಿ ಗೋ ಸೇವೆ ಸಲ್ಲಿಸುತ್ತಿರುವ ಐವರಿಗೆ ಕಾಮದುಘಾ ಟ್ರಸ್ಟ್ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಗೋಪಾಲ ಗೌರವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.

‘ಗೋಸೇವೆ ಮಾಡಿದರೆ ಬುದ್ಧಿಶಕ್ತಿ ಚುರುಕಾಗುತ್ತದೆ ಎಂಬ ಕಾರಣಕ್ಕೆ ಬಹುಶಃ ಹಿಂದಿನವರು ದನ ಕಾಯಲು ಕಳಿಸುತ್ತಿದ್ದರು ಎಂದು ತರ್ಕಿಸಲೂ ಅವಕಾಶವಿದೆ. ಇಂತಹ ಗೋವುಗಳ ವಿಚಾರದಲ್ಲಿ ಹಲವು ನಿಟ್ಟಿನಲ್ಲಿ ಸೇವೆ ಸಲ್ಲಿಸುತ್ತಿರುವ ಈ ಐವರೂ ಸಾಧಕರು ಸಮಾಜದ ಆಸ್ತಿ’ ಎಂದರು.

ಗೋಪಾಲಗೌರವ ಕಾರ್ಯಕ್ರಮದಲ್ಲಿ ಸಹಯೋಗ ನೀಡಿದ ಮುಂಬೈನ ದಿನೇಶ ಶಹರಾ ಫೌಂಡೇಷನ್ ಸಂಸ್ಥಾಪಕ ಉದ್ಯಮಿ ದಿನೇಶ ಶಹರಾ  ಮಾತನಾಡಿ, ‘ನಮ್ಮದು ಸನಾತನ ಧರ್ಮ. ನಾವು ವಸುದೈವ ಕುಟುಂಬಕಂ ಎಂಬ ಧ್ಯೇಯವನ್ನು ಹೊಂದಿದವರು. ಹೀಗಾಗಿಯೇ ನಮ್ಮ ಫೌಂಡೇಶನ್ ಮೂಲಕ ಅಂಗವಿಕರಿಗೆ, ಜನಸಾಮಾನ್ಯರಿಗೆ, ಗೋವುಗಳಿಗೆ, ಆರೋಗ್ಯ ತಪಾಸಣೆ, ಚಿಕಿತ್ಸೆ, ಉಚಿತ ಔಷಧೋಪಚಾರ ನೀಡಲು ಮುಂದಾಗಿದ್ದೇವೆ’ ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಗೋವಿನ ಕುರಿತಾಗಿ ಸತ್ಕಾರ್ಯ ಮಾಡುತ್ತಿರುವ ಕೇರಳ ಕಾಸರಗೋಡಿನ ಪೆರಿಯದ ನಾಗರತ್ನಾ ವಿಷ್ಣು ಹೆಬ್ಬಾರ, ಹುಬ್ಬಳ್ಳಿಯ ಸಮಾಜಸೇವಕ ಮಹೇಂದ್ರ ಸಿಂಘಿ, ಕಾಸರಗೋಡಿನ ನೆಕ್ಕಲಕೆರೆಯ ಸುಬ್ರಹ್ಮಣ್ಯಪ್ರಸಾದ, ದೊಡ್ಡಬಳ್ಳಾಪುರ ಘಾಟಿಸುಬ್ರಹ್ಮಣ್ಯದ ಡಾ.ಜೀವನಕುಮಾರ, ಬೈಲಹೊಂಗಲದ ಬಾಬುರಾವ್ ಪಾಟೀಲ ಅವರಿಗೆ  ರಾಘವೇಶ್ವರಭಾರತೀ  ಸ್ವಾಮೀಜಿ ಗೋಪಾಲ ಗೌರವ ಪ್ರಶಸ್ತಿ ಪ್ರದಾನ ಮಾಡಿ ಆಶೀರ್ವದಿಸಿದರು. ವೇದಿಕೆಯಲ್ಲಿ ದಿನೇಶ ಶಹರಾ ಫೌಂಡೇಷನ್‍ನ ಮೀರಾಜಿ  ಇದ್ದರು.

ಜಾಹ್ನವಿ ಶಿರಸಿ ಪ್ರಾರ್ಥಿಸಿದರು ಕಾಮದುಘಾ ಟ್ರಸ್ಟ್‌ನ ಡಾ.ವೈ.ವಿ.ಕೃಷ್ಣಮೂರ್ತಿ ಪ್ರಾಸ್ತಾವಿಕ ಮಾತನಾಡಿದರು. ಗಣಪತಿ ಹೆಗಡೆ ಗುಂಜಗೋಡ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT