ಕಾರವಾರ: 'ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನೆ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡಲು ಮುಂದಾಗಿರುವುದು ಸರಿಯಲ್ಲ. ಅವರಿಗೆ (ಬಿಜೆಪಿ) ನಿಜವಾದ ರಾಮಭಕ್ತಿ ಇದ್ದರೆ ಪಕ್ಷಾತೀತವಾಗಿ ಆಹ್ವಾನ ನೀಡಿ ಎಲ್ಲರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು' ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ ಒತ್ತಾಯಿಸಿದರು.
ಇಲ್ಲಿ ಮಂಗಳವಾರ ಮಾಧ್ಯಮದವರ ಜತೆ ಮಾತನಾಡಿದ ಅವರು, 'ನಾನೂ ರಾಮ ಭಕ್ತ. ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದೇನೆ. ಆಹ್ವಾನ ಬಂದರೂ ಬಾರದಿದ್ದರೂ ಅಯೋಧ್ಯೆಗೆ ತೆರಳುತ್ತೇನೆ. ಜ.22ಕ್ಕೆ ಹೋಗಲು ಪ್ರಯತ್ನಿಸುತ್ತಿದ್ದೇನೆ. ಆಗ ಆಗದಿದ್ದರೆ ನಂತರವಾದರೂ ತೆರಳಿ ರಾಮನ ದರ್ಶನ ಪಡೆಯುತ್ತೇನೆ' ಎಂದರು.
'ರಾಮನ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಳ್ಳುವವರನ್ನು ರಾಮನೇ ನೋಡಿಕೊಳ್ಳುತ್ತಾನೆ. ನಮಗೆ ಒಳ್ಳೆಯದನ್ನು ಮಾಡುವ ಪ್ರತಿಯೊಬ್ಬರಲ್ಲೂ ದೇವರನ್ನು ಕಾಣುವ ಸಂಸ್ಕೃತಿ ನಮ್ಮದು. ದೇವರ ಹೆಸರಿನಲ್ಲಿ ರಾಜಕೀಯ ಮಾಡುವುದು ಬಿಜೆಪಿಗರ ಸಂಸ್ಕೃತಿ' ಎಂದರು.