ಶಿರಸಿ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸತತ ನಾಲ್ಕನೇ ದಿನ ಇಲ್ಲಿನ ನಗರಸಭೆ ಕಚೇರಿ ಎದುರು ಧರಣಿ ನಡೆಸುತ್ತಿರುವ ಮುನ್ಸಿಪಲ್ ನೌಕರರ ಸಂಘಕ್ಕೆ ಕಾಂಗ್ರೆಸ್ ಬೆಂಬಲ ವ್ಯಕ್ತಪಡಿಸಿದೆ. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ನೇತೃತ್ವದಲ್ಲಿ ಮುಖಂಡರು ಧರಣಿಯಲ್ಲಿ ಪಾಲ್ಗೊಂಡರು.
ಧರಣಿನಿರತರನ್ನು ಉದ್ದೇಶಿಸಿ ಮಾತನಾಡಿದ ಭೀಮಣ್ಣ ನಾಯ್ಕ, ‘ಬಿಜೆಪಿ ಸರ್ಕಾರ ಕಾರ್ಮಿಕರ ಶೋಷಣೆ ಮಾಡುತ್ತಿದೆ. ಕೇವಲ ಬಂಡವಾಳ ಶಾಹಿಗಳ ಪರ ನಿಲ್ಲುವ ಯೋಚನೆಯಲ್ಲಿರುವ ಸರ್ಕಾರಕ್ಕೆ ಪೌರಕಾರ್ಮಿಕರ ಸಮಸ್ಯೆಗಳು ಅರ್ಥವಾಗುತ್ತಿಲ್ಲ’ ಎಂದು ಆರೋಪಿಸಿದರು.
‘ಏಕರೂಪದ ವೇತನ, ನೇಮಕಾತಿ ಸೇರಿದಂತೆ ಪೌರಕಾರ್ಮಿಕರು ಸರ್ಕಾರದ ಮುಂದಿಟ್ಟಿರುವ ಬೇಡಿಕೆಗಳು ನ್ಯಾಯ ಸಮ್ಮತವಾಗಿದೆ. ಅವುಗಳ ಈಡೇರಿಕೆಗೆ ಸರ್ಕಾರ ಕ್ರಮ ವಹಿಸಬೇಕು. ಕೆಳಹಂತದಲ್ಲಿ ದುಡಿಯುವ ನೌಕರರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುವ ಕೆಲಸ ಆಗಬಾರದು’ ಎಂದರು.
ನಗರಸಭೆ ಸದಸ್ಯ ಪ್ರದೀಪ ಶೆಟ್ಟಿ ಮಾತನಾಡಿ, ‘ಪೌರಕಾರ್ಮಿಕರಲ್ಲಿ ನೇರ ಪಾವತಿ, ಹೊರಗುತ್ತಿಗೆ ಎಂಬವಿಂಗಡಣೆ ಇರುವುದು ಸೂಕ್ತವಲ್ಲ. ಸ್ವಚ್ಛತೆಗೆಹಗಲಿರುಳು ಶ್ರಮಿಸುವ ನೌಕರ ವರ್ಗಕ್ಕೆ ನ್ಯಾಯ ಒದಗಿಸಲು ಬದ್ಧರಾಗಿಹೋರಾಟಕ್ಕೆ ಕೈಜೋಡಿಸುತ್ತೇವೆ’ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಗೌಡ, ನಗರಸಭೆ ಸದಸ್ಯರಾದ ಶಮೀಮ ಬಾನು, ವನಿತಾ ಶೆಟ್ಟಿ, ರುಬೇಕಾ ಫರ್ನಾಂಡಿಸ್, ಖಾದರ್ ಆನವಟ್ಟಿ, ಮುನ್ಸಿಪಲ್ ನೌಕರರ ಸಂಘಟನೆಯ ಹರೀಶ ನಾಯ್ಕ, ಗಣಪತಿ ಹರಿಜನ ಇದ್ದರು.