ಕಾರವಾರ: ನೆಲದ ಮೇಲೆ ಇರುವಂತೆ ಸಾಗರದಲ್ಲಿಯೂ ಲಕ್ಷಾಂತರ ಜೀವಿಗಳು, ಸಸ್ಯ ಸಂಪತ್ತು ಇವೆ. ಅವು ಸುರಕ್ಷಿತವಾಗಿದ್ದರೆ ಭೂಮಿ ಸುರಕ್ಷಿತವಾಗಿರಲು ಸಾಧ್ಯ ಎಂದು ಕಾರವಾರ ಡಿಸಿಎಫ್ ರವಿಶಂಕರ ಹೇಳಿದರು.
ಇಲ್ಲಿನ ಅಲಿಗದ್ದಾ ಕಡಲತೀರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಸಾಗರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನೆಲದ ಮೇಲಿರುವುದು ಮಾತ್ರ ಪ್ರಾಕೃತಿಕ ಸಂಪತ್ತು ಎಂದು ಭಾವಿಸಬಾರದು. ನೀರಿನಲ್ಲಿರುವದೂ ಪರಿಸರದ ಅಮೂಲ್ಯ ಭಾಗ ಎಂದರು.
ಕಡಲಜೀವಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು, ಎನ್.ಸಿ.ಸಿ ಕ್ಯಾಡೆಟ್ಗಳು, ಅರಣ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ಒಗ್ಗೂಡಿ ಸ್ವಚ್ಛತಾ ಶ್ರಮದಾನ ನಡೆಸಿದರು. ಈ ವೇಳೆ ಅರ್ಧ ಕಿ.ಮೀನಷ್ಟು ಉದ್ದವಿರುವ ಅಲಿಗದ್ದಾ ಕಡಲತೀರದಲ್ಲಿ ಸುಮಾರು 397 ಕೆ.ಜಿಯಷ್ಟು ಪ್ಲಾಸ್ಟಿಕ್ ತ್ಯಾಜ್ಯ ದೊರೆಯಿತು. ಅವುಗಳಲ್ಲಿ 135 ಕೆ.ಜಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ಗಳು, 119 ಕೆ.ಜಿಯಷ್ಟು ಸ್ಯಾನಿಟರಿ, ಇತರೆ ಎಲೆಕ್ಟ್ರಾನಿಕ್ ತ್ಯಾಜ್ಯಗಳಿದ್ದವು.
ಎಸಿಎಫ್ ಕೆ.ಸಿ.ಜಯೇಶ್ ಪ್ಲಾಸ್ಟಿಕ್ ಬಳಕೆ ತಡೆಗಟ್ಟುವ ಕುರಿತು ವಿವರಿಸಿದರು. ಕಾರ್ಯಕ್ರಮದ ಸಂಯೋಜಕ, ಕಡಲಜೀವಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಆಡಳಿತಾಧಿಕಾರಿ ಜೆ.ಎಲ್.ರಾಠೋಡ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿಶ್ವ ಮಹಾಸಾಗರಗಳ ದಿನಾಚರಣೆ ಅಂಗವಾಗಿ ಹೊನ್ನಾವರ ತಾಲ್ಲೂಕಿನ ಕಾಸರಕೋಡ ಟೊಂಕ ಕಡಲತೀರದಲ್ಲಿ ಶನಿವಾರ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಕಾಳಿ ಹರಿಜನ ಮೀನುಗಾರ ಮುಖಂಡರಾದ ರಾಜೇಶ ತಾಂಡೇಲ ಭಾಸ್ಕರ ತಾಂಡೇಲ ರೇಣುಕಾ ತಾಂಡೇಲ ಕಡಲ ವಿಜ್ಞಾನಿ ಪ್ರಕಾಶ ಮೇಸ್ತ ಭಾಗವಹಿಸಿದ್ದರು