ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಲ್ಲಾಪುರ | ಸಿದ್ದಿ ಯುವಕನ ಕೊಲೆ: ಮುಖಂಡರ ಆಕ್ರೋಶ

ಆರೋಪಿಗಳ ಬಂಧಿಸುವವರೆಗೂ ಶವ ಸ್ವೀಕರಿಸಲ್ಲ
Published 25 ಫೆಬ್ರುವರಿ 2024, 13:49 IST
Last Updated 25 ಫೆಬ್ರುವರಿ 2024, 13:49 IST
ಅಕ್ಷರ ಗಾತ್ರ

ಯಲ್ಲಾಪುರ: ಹುಣಶೆಟ್ಟಿಕೊಪ್ಪ ಜಾತ್ರೆಗೆ ಬಂದ ಸಿದ್ದಿ ಜನಾಂಗದ ಯುವಕ ಪ್ರಜ್ವಲನ ಕೊಲೆ ಮಾಡಿದ ಆರೋಪಿಗಳನ್ನು ತಕ್ಷಣ ಬಂಧಿಸಬೇಕು. ಅವರ ಬಂಧನ ಆಗುವವರೆಗೂ ಶವ ಸ್ವೀಕರಿಸುವುದಿಲ್ಲ ಎಂದು ಪಟ್ಟಣದ ಪೊಲೀಸ್ ಠಾಣೆ ಎದುರು ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಸಿದ್ದಿ ಸಮುದಾಯದ ಪ್ರಮುಖರು ತಿಳಿಸಿದ್ದಾರೆ.

ಸಿದ್ದಿ ಬುಡಕಟ್ಟು ಜನಪರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬೆನಿತ್ ಸಿದ್ದಿ ಮಾತನಾಡಿ, ಸಿದ್ದಿ ಜನಾಂಗದ ಮೇಲೆ ನಿರಂತರ ಶೋಷಣೆ ನಡೆಯುತ್ತಿದೆ. ಈ ಸಮುದಾಯದ ಮೇಲೆ ಏನು ಮಾಡಿದರೂ ನಡೆಯುತ್ತದೆ. ಇವರಿಗೆ ಹೇಳುವವರು ಕೇಳುವವರು ಯಾರೂ ಇಲ್ಲ ಎಂಬಂತ ವಾತಾವರಣ ನಿರ್ಮಾಣವಾಗುತ್ತಿದೆ. ಈ ಹಿಂದೆ ಓರ್ವ ಸಿದ್ದಿ ಯುವಕನನ್ನು ಗುಂಡಿಟ್ಟು ಕೊಲ್ಲಲಾಗಿತ್ತು. ಈಗ ಬೈಕ್ ಓವರ್ ಟೇಕ್ ಮಾಡಿದ ಘಟನೆಯನ್ನೇ ನೆಪಮಾಡಿಕೊಂಡು ಅಮಾಯಕ ಸಿದ್ದಿ ಯುವಕನನ್ನು ಕೊಲ್ಲಲಾಗಿದೆ. ಆರೋಪಿಗಳ ಬಂಧನ ಆಗುವವರೆಗೂ ಯಾವುದೇ ಕಾರಣಕ್ಕೂ ಶವ ಸ್ವೀಕರಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೃತ ಪ್ರಜ್ವಲನ ತಂದೆ ಪ್ರಕಾಶ ಕಕ್ಕೇರಿಕರ ಮಾತನಾಡಿ, ನನ್ನ ಮಗ ಯಾರ ತಂಟೆಗೂ ಹೋಗದ ಅಮಾಯಕ ಎಂದು ದುಃಖಿಸಿದರು.

ರಾಜ್ಯ ಸಿದ್ದಿ ಬುಡಕಟ್ಟು ಜನಪರ ಸಂಘದ ಗೌರವಾಧ್ಯಕ್ಷ ಜಾನ್ ಕೋಸ್ತಾ ಸಿದ್ದಿ, ಸಿದ್ದಿ ಬುಡಕಟ್ಟು ಜನಪರ ಸಂಘದ ಜಿಲ್ಲಾ ಕಾರ್ಯದರ್ಶಿ ಹಳಿಯಾಳದ ಮೇರಿ ಗರೀಬಾಚೆ ಮಾತನಾಡಿದರು.

ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಘಟಕದ ಅಧ್ಯಕ್ಷ ಜುಜೆ ಪಿದಾಲ್ ಸಿದ್ದಿ, ಪ್ರಮುಖರಾದ ಶರೀಪ್ ಸಾಬ್ ಮೊದಿನ್ ಸಾಬ್ ಮುಜಾವರ್, ಬಾಬು ತಂಗಪ್ಪ ಸಿದ್ದಿ, ಸಂತೋಷ ಜುಜೆ ಸಿದ್ದಿ, ಸಂತಾನ್ ಸಿದ್ದಿ, ವಿಲ್ಸನ್ ಫರ್ನಾಂಡೀಸ್, ಇಸ್ಮಾಯಿಲ್ ಜಮಾದಾರ, ವಿಲ್ಸನ್ ಸಿದ್ದಿ, ದೇವೇಂದ್ರ ಸಿದ್ದಿ, ಜುಲಿಯಾನಾ ಸಿದ್ದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT