ಶಿರಸಿ: ಅಧಿಕಾರದ ಮದದಲ್ಲಿ ದೇಶದ ಬೆನ್ನೆಲುಬು ರೈತರ ಹಿತಕ್ಕೆ ವಿರುದ್ಧವಾಗಿ ಹೊರಟಿದ್ದ ಕೇಂದ್ರ ಸರ್ಕಾರದ ಅಹಂಕಾರಕ್ಕೆ ಪಟ್ಟು ಬಿದ್ದಿದೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಹೇಳಿದರು.
ಕೇಂದ್ರ ಸರ್ಕಾರ ಪ್ರಮುಖ ಮೂರು ಕೃಷಿ ಮಸೂದೆ ಹಿಂಪಡೆದ ಹಿನ್ನೆಲೆಯಲ್ಲಿ ಶುಕ್ರವಾರ ಕಾಂಗ್ರೆಸ್ ಪಕ್ಷದ ವತಿಯಿಂದ ನಗರದಲ್ಲಿ ಹಮ್ಮಿಕೊಂಡಿದ್ದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ರೈತರ ಪ್ರಬಲ ವಿರೋಧವಿದ್ದರೂ ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡಲು ಸರ್ಕಾರ ಮಸೂದೆ ಜಾರಿಗೆ ತಂದಿತ್ತು. ಛಲ ಬಿಡದೆ ರೈತರು, ವಿರೋಧ ಪಕ್ಷಗಳು ನಡೆಸಿದ ಹೋರಾಟಕ್ಕೆ ಮಣಿದು ಮಸೂದೆ ಹಿಂಪಡೆಯಿತು’ ಎಂದರು.
ಕಾಂಗ್ರೆಸ್ ಕಿಸಾನ್ ವಿಭಾಗದ ತಾಲ್ಲೂಕು ಘಟಕದ ಸದಸ್ಯರು, ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿದರು. ರೈತರು, ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು.
ಶಿರಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಗೌಡ, ಬನವಾಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಫ್.ನಾಯ್ಕ, ಪ್ರಮುಖರಾದ ದೀಪಕ ದೊಡ್ಡೂರು, ಬಸವರಾಜ ದೊಡ್ಮನಿ, ಶ್ರೀಪಾದ ಹೆಗಡೆ ಕಡವೆ, ಪ್ರವೀಣ ಹೆಗಡೆ ಮಣ್ಮನೆ, ಅರುಣ ಪ್ರಭು, ಖಾದರ ಅನವಟ್ಟಿ ಇತರರು ಇದ್ದರು.