ಮುಂಡಗೋಡ: ಜಿಲ್ಲೆಯಲ್ಲಿ ಬಿಜೆಪಿಗೆ ಉತ್ತಮ ವಾತಾವರಣ ಇದ್ದು, ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅಮದಾಜು 3ಲಕ್ಷಕ್ಕೂ ಅಧಿಕ ಮತಗಳಿಂದ ಆಯ್ಕೆಯಾಗಲಿದ್ದಾರೆ. ಶಿರಸಿಗೆ ಮೋದಿ ಅವರು ಬಂದು ಹೋದ ಮೇಲೆ, ಬಿಜೆಪಿ ಕಾರ್ಯಕರ್ತರ ಉತ್ಸಾಹ ಇಮ್ಮಡಿಯಾಗಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಹೇಳಿದರು.
ಇಲ್ಲಿನ ಪಕ್ಷದ ಕಾರ್ಯಾಲಯದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಮಾಜದ ಕಟ್ಟ ಕಡೆಯ ಮನುಷ್ಯನಿಗೂ ಸಿಗುತ್ತಿರುವ ಸೌಲಭ್ಯಗಳು ಹಾಗೂ ದೇಶದ ರಕ್ಷಣೆಯ ವಿಚಾರವಾಗಿ ಜನರು ಮೋದಿ ಅವರನ್ನು ಮತ್ತೆ ಆಯ್ಕೆ ಮಾಡಲು ನಿರ್ಧರಿಸಿದ್ದಾರೆ ಎಂದರು.
ಅಯೋಧ್ಯೆಯಲ್ಲಿ ಸೀತೆ, ಹನುಮಂತ ಮೂರ್ತಿಗಳಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಹೋದಲೆಲ್ಲ ಹೇಳುತ್ತಿದ್ದಾರೆ. ಆದರೆ, ಅಯೋಧ್ಯೆಯಲ್ಲಿ ಬಾಲರಾಮನ ಮೂರ್ತಿ ಪ್ರತಿಷ್ಠಾಪಣೆ ಮಾಡಲಾಗಿದೆ ಎಂಬುದನ್ನು ಅವರು ಮೊದಲು ತಿಳಿದುಕೊಳ್ಳಬೇಕು. ಯಲ್ಲಾಪುರ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಯಾರಿಗೂ ಹೆದರುವ ಅವಶ್ಯಕತೆಯಿಲ್ಲ. ನಿಮ್ಮ ರಕ್ಷಣೆಗೆ ನಾವಿದ್ದೇವೆ. ಯಾರೋ ಬಂದರು, ಹೋದರು ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳಬಾರದು. ಕಾರ್ಯಕರ್ತರು ಹಣದ ಆಮಿಷಕ್ಕಾಗಿ ಆಸೆ ಪಡುವುದಿಲ್ಲ. ಆದರೆ, ಅಧಿಕಾರದ ಆಸೆಗಾಗಿ ಕೆಲವು ಮುಖಂಡರು ಪಕ್ಷದಿಂದ ಕಾಂಗ್ರೆಸ್ಗೆ ಹೋಗುವ ನಾಟಕ ಮಾಡುತ್ತಿದ್ದಾರೆ ಎಂದು ಖಾರವಾಗಿ ಹೇಳಿದರು.
ಶಾಸಕ ಹೆಬ್ಬಾರ್ ಅವರು ಒಂದು ಕಾಲನ್ನು ಕಾಂಗ್ರೆಸ್ ಪಕ್ಷಕ್ಕೆ ಇಟ್ಟಿದ್ದಾರೆ. ಬಿಜೆಪಿ ಪರವಾಗಿ ಇಲ್ಲಿಯವರೆಗೂ ಪ್ರಚಾರದಲ್ಲಿ ಪಾಲ್ಗೊಂಡಿಲ್ಲ. ಮೋದಿ ಅವರು ಶಿರಸಿಗೆ ಬಂದಾಗಲೂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿಲ್ಲ. ಅವರ ಮಗ ಈಗಾಗಲೇ ಕಾಂಗ್ರೆಸ್ ಸೇರಿದ್ದಾರೆ. ಸಂಸದ ಅನಂತಕುಮಾರ ಹೆಗಡೆ ಅವರಿಗೆ ಸ್ವಲ್ಪ ಬೇಜಾರಾಗಿದೆ. ಆದರೆ, ಅವರ ಅಭಿಮಾನಿಗಳು ಬಿಜೆಪಿ ಅಭ್ಯರ್ಥಿ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ಬಿಜೆಪಿಯ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ಮಂಡಲ ಅಧ್ಯಕ್ಷ ಮಂಜುನಾಥ ಪಾಟೀಲ, ಜಿಲ್ಲಾ ಉಪಾಧ್ಯಕ್ಷ ಎಲ್.ಟಿ.ಪಾಟೀಲ, ಜಿ.ಎನ್.ಗಾಂವಕರ, ಜೆಡಿಎಸ್ ಪಕ್ಷದ ಮುತ್ತು ಸಂಗೂರಮಠ, ಅಶೋಕ ಚಲವಾದಿ, ಬಸವರಾಜ ತನಖೆದಾರ, ವಿಠ್ಠಲ ಬಾಳಂಬೀಡ, ಭರತರಾಜ ಹದಳಗಿ, ವೀಣಾ ಓಶೀಮಠ ಇದ್ದರು.