ಕಾರವಾರ: 'ಯಲ್ಲಾಪುರ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಕಾಂಗ್ರೆಸ್ ಮನೆಯ ಸದಸ್ಯರಾಗಿದ್ದವರು. ಅವರು ಮನೆಗೆ ಪುನಃ ಮರಳುವುದಕ್ಕೆ ಕಾಯುತ್ತಿದ್ದೇವೆ' ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ ಹೇಳಿದರು.
ಇಲ್ಲಿ ಬುಧವಾರ ಮಾಧ್ಯಮದವರ ಜತೆ ಮಾತನಾಡಿದ ಅವರು, 'ಯಾವುದೇ ಹುದ್ದೆ, ಅಧಿಕಾರ ಬಯಸಿ ಪಕ್ಷಕ್ಕೆ ಬರಬೇಡಿ. ಬಿಜೆಪಿಯಲ್ಲಿನ ಉಸಿರುಗಟ್ಟಿಸುವ ವಾತಾವರಣದಿಂದ ಹೊರಬರುವುದಾದರೆ ಬನ್ನಿ ಎಂದು ಶಿವರಾಮ ಹೆಬ್ಬಾರ್ ಅವರಿಗೆ ಹೇಳಿದ್ದೇನೆ' ಎಂದರು.
'ಯಾವಾಗ ಪಕ್ಷ ಸೇರುತ್ತಾರೆ ಎಂಬುದು ಗೊತ್ತಿಲ್ಲ. ಆದರೆ ಅವರು ಕಾಂಗ್ರೆಸ್ ಗೃಹ ಪ್ರವೇಶಿಸುವುದಕ್ಕೆ ಕಾತರರಾಗಿದ್ದೇವೆ. ಮುಹೂರ್ತ ಯಾವಾಗ ಎಂಬುದನ್ನು ಅವರೇ ನಿರ್ಧರಿಸುತ್ತಾರೆ' ಎಂದು ಸೂಚ್ಯವಾಗಿ ಹೇಳಿದರು.