ನಿಡಗುಂದಿ: ರಸ್ತೆಯುದ್ದಕ್ಕೂ ತೋರಣ, ರಂಗೋಲಿಗಳ ಚಿತ್ತಾರ, 108 ಕುಂಭಹೊತ್ತ ಮುತ್ತೈದೆಯರು, ಮೆರವಣಿಗೆ ತುಂಬಾ ಭಕ್ತರ ಕಲರವ, ಡೊಳ್ಳುಗಳ, ಕರಡಿ ಮಜಲಿನ ನಿನಾದ...
ತಾಲ್ಲೂಕಿನ ಚಿಮ್ಮಲಗಿ ಭಾಗ-2 ರ ಅರಳೆಲೆಕಟ್ಟಿಮನಿ ಹಿರೇಮಠದ ಲಿಂ. ನೀಲಕಂಠ ಸ್ವಾಮೀಜಿಗಳ ಪ್ರಥಮ ಪುಣ್ಯಸ್ಮರಣೆ ಹಾಗೂ ಚಿಮ್ಮಲಗಿ ಜಾತ್ರೆಯಲ್ಲಿ ಗುರುವಾರ ನಡೆದ ಸಿದ್ಧರೇಣುಕ ಸ್ವಾಮೀಜಿ ಅಡ್ಡಪಲ್ಲಕ್ಕಿ ಮಹೋತ್ಸವದ ದೃಶ್ಯ.
ಬೆಳಿಗ್ಗೆಯಿಂದಲೇ ಲಿಂ. ಶ್ರೀಗಳ ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ ಪೂಜೆಯ ನಂತರ, ಗ್ರಾಮದ ತುಂಬೆಲ್ಲಾ ಅಡ್ಡಪಲ್ಲಕ್ಕಿ ಮಹೋತ್ಸವ ಅದ್ಧೂರಿಯಾಗಿ ಜರುಗಿತು. ಆನಂತರ ನಾಲ್ಕು ಜತೆ ಸಾಮೂಹಿಕ ವಿವಾಹಗಳು ಜರುಗಿದವು.
ಬಸನಬಾಗೇವಾಡಿ ಶಿವಪ್ರಕಾಶ ಸ್ವಾಮೀಜಿ ಮಾತನಾಡಿ, ಬದುಕಿನುದ್ದಕ್ಕೂ ಸವಾಲುಗಳನ್ನು ಎದುರಿಸಿ ಸತ್ಯ ಸಂಸ್ಕೃತಿ ಪುನರುತ್ಥಾನಕ್ಕಾಗಿ ಸದಾ ಶ್ರಮಿಸಿದವರು ನೀಲಕಂಠ ಶ್ರೀಗಳು. ಪರಮ ತಪಸ್ವಿ ಲಿಂ.ಶ್ರೀಮದ್ ರಂಭಾಪುರಿ ವೀರಗಂಗಾಧರ ಜಗದ್ಗುರುಗಳ ಗರಡಿಯಲ್ಲಿ ಪಳಗಿ ಗುರು ಕಾರುಣ್ಯ ಪಡೆದರು. ಪೂಜಾ ತಪಸ್ಸು ಧ್ಯಾನ ಮೂಲಕ ಭಕ್ತರ ಬಾಳ ಬದುಕನ್ನು ಹಸನಗೊಳಿಸಿದವರು. ಮಾನವ ಜೀವನ ತೆರೆದಿಟ್ಟ ಪುಸ್ತಕ. ಮೊದಲ ಪುಟದಲ್ಲಿ ಹುಟ್ಟು ಕೊನೆ ಪುಟದಲ್ಲಿ ಮೃತ್ಯು ಭಗವಂತ ಬರೆದಿಟ್ಟಿದ್ದಾನೆ ಎಂದರು.
ಇವೆರಡರ ಮಧ್ಯದ ಬದುಕನ್ನು ಸಮರ್ಥವಾಗಿ ಕಟ್ಟಿಕೊಂಡು ವೀರಶೈವ ಧರ್ಮ ಸಂಸ್ಕೃತಿಗೆ ಸದಾ ದುಡಿದವರು. ಹುಟ್ಟುವಾಗ ಉಸಿರು ಇರುತ್ತೆ. ಹೆಸರು ಇರುವುದಿಲ್ಲ. ಅಗಲಿದಾಗ ಉಸಿರು ಇರುವುದಿಲ್ಲ,. ಆದರೆ ಹೆಸರು ಉಳಿಯುವಂಥ ರೀತಿಯಲ್ಲಿ ಕಾರ್ಯ ನಿರ್ವಹಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ತಾವು ಸಶಕ್ತರಾಗಿರುವಾಗಲೇ ಉತ್ತರಾಧಿಕಾರಿಯನ್ನು ನಿಶ್ಚಯಿಸಿ ಶ್ರೀ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಸಿದ್ಧರೇಣುಕ ಶಿವಾಚಾರ್ಯ ಸ್ವಾಮಿಗಳಿಗೆ ಶ್ರೀ ಗುರು ಪಟ್ಟಾಧಿಕಾರ ನೆರವೇರಿಸಿದ ಶ್ರೇಯಸ್ಸು ಅವರದ್ದು ಎಂದರು.
ಶ್ರೀ ಮಠದ ಪೀಠಾಧೀಪತಿ ಸಿದ್ಧರೇಣುಕ ಸ್ವಾಮೀಜಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ನಿಡಗುಂದಿಯ ರುದ್ರಮುನಿ ಸ್ವಾಮೀಜಿ, ಮುತ್ತಗಿಯ ಗುರುಲಿಂಗ ಸ್ವಾಮೀಜಿ, ಇಟಗಿಯ ಗುರುಶಾಂತವೀರ ಸ್ವಾಮೀಜಿ, ಗುಂಡಕನಾಳ ಗುರುಲಿಂಗ ಸ್ವಾಮೀಜಿ, ಆಲಮೇಲದ ಚಂದ್ರಶೇಖರ ಸ್ವಾಮೀಜಿ, ಇಂಗಳೇಶ್ವರದ ಭೃಂಗೀಶ್ವರ ಸ್ವಾಮೀಜಿ, ಕೊಟ್ಟೂರಿನ ಡಾ ಸಿದ್ಧಲಿಂಗ ಸ್ವಾಮೀಜಿ, ತಡವಲಗಾದ ಅಭಿನವ ರಾಚೋಟೇಶ್ವರ ಸ್ವಾಮೀಜಿ, ಗಿರಿಸಾಗರದ ರುದ್ರಮುನಿ ಸ್ವಾಮೀಜಿ, ಮುಳವಾಡದ ಸಿದ್ಧಲಿಂಗ ಸ್ವಾಮೀಜಿ, ಬಿಲ್ ಕೆರೂರಿನ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಶಾಸಕ ರಾಜುಗೌಡ ಪಾಟೀಲ, ಅಪ್ಪುಗೌಡ ಪಾಟೀಲ ಮನಗೂಳಿ, ಸಂಯುಕ್ತಾ ಪಾಟೀಲ, ಅನ್ನಪೂರ್ಣ ಮನಗೂಳಿ, ಡಾ ವಿಜಯಕುಮಾರ ವಾರದ, ಮನೋಜ ವಾರದ, ಬ್ರಿಷಭೂಷಣ ಖಂಡಾಲ, ಜಯೇಂದ್ರ ಶರ್ಮ ಮತ್ತೀತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.