ತೈಲ ದರ ಏರಿಕೆ ಖಂಡಿಸಿ ಸೈಕಲ್ ರ್ಯಾಲಿ

ವಿಜಯಪುರ: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ(ಎಲ್ಪಿಜಿ ಸಿಲಿಂಡರ್) ಹಾಗೂ ಅಡುಗೆ ಎಣ್ಣೆ ಸೇರಿದಂತೆ ದಿನ ಬಳಕೆ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಜಿಲ್ಲಾ ಘಟಕದ ನೇತೃತ್ವದಲ್ಲಿ ಬುಧವಾರ ಸೈಕಲ್ ರ್ಯಾಲಿ ನಡೆಸಿದರು.
ನಗರದ ಸಿದ್ದೇಶ್ವರ ಗುಡಿಯಿಂದ ಆರಂಭವಾದ ಸೈಕಲ್ ರ್ಯಾಲಿ ಗಾಂಧಿ ಚೌಕ, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತದ ವರೆಗೆ ನಡೆಯಿತು.
ಕೇಂದ್ರ ಸರ್ಕಾರದ ಬೆಲೆ ಏರಿಕೆ ಹಾಗೂ ಜನವಿರೋಧಿ ನೀತಿಗಳ ವಿರುದ್ಧ ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಪೆಟ್ರೋಲ್, ಡಿಸೇಲ್, ಗ್ಯಾಸ್ ಹಾಗೂ ದಿನ ನಿತ್ಯದ ಅಗತ್ಯ ವಸ್ತುಗಳ ದರ ಕಡಿಮೆ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಆಗ್ರಹಿಸಿದರು.
ಎಐಸಿಸಿ ವಕ್ತಾರ, ರಾಜ್ಯಸಭಾ ಸದಸ್ಯ ಸೈಯ್ಯದ್ ನಾಸೀರ್ ಹುಸೇನ್ ಮಾತನಾಡಿ, ದೇಶದಲ್ಲಿ ಕೋವಿಡ್ ಸಂಕಷ್ಟದ ನಡುವೆಯೂ ಪೆಟ್ರೋಲ್, ಡೀಸೆಲ್, ಎಲ್ಪಿಜಿ ಅಡುಗೆ ಅನಿಲದ ದರ ಹೆಚ್ಚಳ ಮಾಡುತ್ತಿರುವ ಕೇಂದ್ರ ಸರ್ಕಾರದ ಕ್ರಮ ಖಂಡನೀಯ ಎಂದರು.
ದೇಶದ ಪ್ರತಿಷ್ಟಿತ ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವ ಮೂಲಕ ಕೇಂದ್ರ ಬಿಜೆಪಿ ಸರ್ಕಾರ ಉದ್ಯಮಿಗಳ ಪರವಾಗಿದೆ. ಬಡವರ, ಕಾರ್ಮಿಕರ, ರೈತರ ಬಗ್ಗೆ ಎಳ್ಳಷ್ಟು ಕಾಳಜಿ ಇಲ್ಲವಾಗಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಆರ್.ಬಿ.ತಿಮ್ಮಾಪೂರ ಮಾತನಾಡಿ, ಅಚ್ಛೇ ದಿನ್ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಜನವಿರೋಧಿಯಾಗಿದ್ದು, ಜನರ ರಕ್ತ ಹೀರುವ ಕೆಲಸದಲ್ಲಿ ನಿರತವಾಗಿದೆ ಎಂದು ಆರೋಪಿಸಿದರು.
ರಾಜ್ಯ ಬಿಜೆಪಿ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ. ಅನಗತ್ಯವಾಗಿ ಜನರ ಮೇಲೆ ತೆರಿಗೆ ಬಾರವನ್ನು ಹೊರಿಸಿದೆ. ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದು ಅಂಬಾನಿ, ಅದಾನಿ ಅವರಿಗೆ ದೇಶವನ್ನು ಮಾರಾಟ ಮಾಡಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ರಾಜು ಅಲಗೂರ, ಅಧಿಕಾರಕ್ಕೆ ಬಂದಾಗಿನಿಂದ ಜನ ವಿರೋಧಿ ಆರ್ಥಿಕ ನೀತಿಗಳನ್ನು ಜಾರಿಗೆ ತಂದು ದೇಶ ಅದೋಗತಿಯಲ್ಲಿ ಸಾಗಲು ಕಾರಣೀಭೂತರಾಗಿದ್ದಾರೆ ಎಂದು ದೂರಿದರು.
ಕಾಂಗ್ರೆಸ್ ಮುಖಂಡರಾದ ಅಬ್ದುಲ್ ಹಮೀದ್ ಮುಶ್ರೀಫ್ ಮಾತನಾಡಿ, ಬಿಜೆಪಿಯ ಆಡಳಿತಾವಧಿಯಲ್ಲಿ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ತುಟ್ಟಿಯಾಗಿದೆ. ಮೋದಿ ಅವರ ಅಚ್ಛೆ ದಿನ್ ಎಂದರೆ ಇದೇನಾ? ಎಂದು ಪ್ರಶ್ನಿಸಿದರು.
ಮಾಜಿ ಶಾಸಕರಾದ ಶರಣಪ್ಪ ಸುಣಗಾರ, ವಿಠಲ ಕಟಕದೊಂಡ, ಮುಖಂಡರಾದ ಸಂಗಮೇಶ ಬಬಲೇಶ್ವರ, ರಾಜಶೇಖರ ಮೆಣಸಿನಕಾಯಿ, ರಾಜು ಗಣದಾಳ, ಜಮೀರ್ ಅಹ್ಮದ್ ಬಕ್ಷಿ, ಆರತಿ ಶಹಾಪೂರ, ಶಬ್ಬೀರ ಜಾಗೀರದಾರ, ವೈಜನಾಥ ಕರ್ಪೂರಮಠ, ಚಾಂದಸಾಬ ಗಡಗಲಾವ, ಶ್ರೀದೇವಿ ಉತ್ಲಾಸಕರ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ವಿದ್ಯಾರಾಣಿ ತುಂಗಳ, ಜಿಲ್ಲಾ ಯುವ ಅಧ್ಯಕ್ಷ ಶ್ರೀಕಾಂತ ಛಾಯಾಗೋಳ, ಗುರನಗೌಡ ಪಾಟೀಲ, ಸಾಹೇಬಗೌಡ ಬಿರಾದಾರ, ಇರ್ಫಾನ್ ಶೇಖ್, ಮೋಹಿನ್ ಶೇಖ್, ಸುನೀಲ ಉಕ್ಕಲಿ, ಸುರೇಶ ಘೋಣಸಗಿ, ವಸಂತ ಹೊನಮೊಡೆ, ಪರ್ವೇಜ್ ಚಟ್ಟರಕಿ, ಐ.ಎಂ.ಇಂಡೀಕರ, ಅಬ್ದುಲ್ ಖಾದರ್ ಖಾದೀಮ್, ವಿಜಯಕುಮಾರ ಘಾಟಗೆ, ಈರಪ್ಪ ಜಕ್ಕಣ್ಣನವರ, ಚನ್ನಬಸಪ್ಪ ನಂದರಗಿ, ಶರಣಪ್ಪ ಯಕ್ಕುಂಡಿ, ಹಾಜಿಲಾಲ ದಳವಾಯಿ, ಅಬ್ದುಲ್ರಜಾಕ್ ಹೋರ್ತಿ, ರವೂಪ್ ಶೇಖ್, ಜಮೀರ್ ಬಾಂಗಿ, ಇದ್ರೂಷ್ ಬಕ್ಷೀ, ಅಜೀಂ ಇನಾಮದಾರ, ಇಲಿಯಾಸ್ ಸಿದ್ದಿಕಿ, ಅಕ್ಬರ್ ನಾಯಕ, ತಾಜುದ್ದೀನ್ ಕಲೀಪಾ, ಮಂಜುಳಾ ಜಾಧವ, ಬಿ.ಎಸ್.ಬ್ಯಾಳಿ, ಅಬೀದ್ ಸಂಗಮ, ಹೈದರ್ ನಧಾಪ್, ಧನರಾಜ.ಎ, ರವೀಂದ್ರ ಜಾಧವ, ಪ್ರಕಾಶ ಕಟ್ಟಿಮನಿ, ಜಬ್ಬಾರ್ ಕಲಾದಗಿ, ಸುಜಾತಾ ಶಿಂಧೆ, ಆಸ್ಮ ಕಾಲೇಬಾಗ, ಶಮೀಮ ಅಕ್ಕಲಕೋಟ, ಹಮೀದಾ ಪಟೇಲ, ಪ್ರಭಾವತಿ ನಾಟೀಕರ, ರೇಣುಕಾ ಲೋಹಗಾಂವಕರ, ಭಾರತಿ ಹೊಸಮನಿ, ಪೈರೋಜ ಶೇಖ್, ಜಾವೀದ್ ಶೇಖ್, ಆರೀಫ್ ಪುಂಗೀವಾಲೆ, ಕುಲದೀಪಸಿಂಗ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
***
ದೇಶದಲ್ಲಿ ತೈಲ ಬೆಲೆ ಏರಿಕೆಯಿಂದಾಗಿ ಪ್ರತಿ ಕುಟುಂಬ ಕಷ್ಟದಲ್ಲಿದ್ದು ಕೇಂದ್ರ ಬಿಜೆಪಿ ಸರ್ಕಾರ ಸ್ವಪ್ರತಿಷ್ಠೆಗಾಗಿ ಸಾರ್ವಜನಿಕರನ್ನು ಬಲಿಕೊಡುತ್ತಿದೆ
ಡಾ.ಸೈಯ್ಯದ್ ನಾಸೀರ್ ಹುಸೇನ್,
ರಾಜ್ಯ ಸಭಾ ಸದಸ್ಯ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.