ವಿಜಯಪುರ: ನಗರದ ಡಾ.ಬಿದರಿಯವರ ಅಶ್ವಿನಿ ಆಸ್ಪತ್ರೆಯಲ್ಲಿ ವಿಶ್ವ ಶ್ರವಣ ದಿನದ ಅಂಗವಾಗಿ ಭಾರತೀಯ ರೆಡ್ ಕ್ರಾಸ್ ಜಿಲ್ಲಾ ಶಾಖೆ ಹಾಗೂ ಸುಭಾಸ ಬಿದರಿ ಮೆಮೋರಿಯಲ್ ಚೈಲ್ಡ್ ಡೆವೆಲಪ್ಮೆಂಟ್ ಸೆಂಟರ್ ಸಹಯೋಗದಲ್ಲಿ ಆಯೋಜಿಸಿದ್ದ ಎರಡು ದಿನಗಳ ಉಚಿತ ಶ್ರವಣ ದೋಷ ತಪಾಸಣಾ ಶಿಬಿರ ಯಶಸ್ವಿಯಾಗಿ ಜರುಗಿತು.
ಶಿಬಿರದಲ್ಲಿ ಸುಮಾರು 36 ಜನರಿಗೆ ಶ್ರವಣ ದೋಷ ತಪಾಸಣೆ ಮಾಡಲಾಯಿತು. ಅವರಲ್ಲಿ 8 ಮಕ್ಕಳಿಗೆ ದ್ವಿಪಕ್ಷೀಯ ಶ್ರವಣ ಸಾಧನಗಳು, ಹಾಗೂ 20 ಜನ ವಯಸ್ಕರಿಗೆ ಏಕಪಕ್ಷೀಯ ಶ್ರವಣ ಸಾಧನವನ್ನು ಒದಗಿಸಲು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆ ಮುಂದಾಗಿದೆ.
ಶ್ರವಣದೋಷ ಹೊಂದಿರುವವರಿಗೆ ‘ಡಿಜಿಟಲ್ ಶ್ರವಣ ಮಾದರಿಯ ಉತ್ತಮ ಮಾತಿನ ಸ್ಪಷ್ಟತೆ ಹಾಗೂ ಬಹುದಿನ ಬಾಳಿಕೆ ಬರುವ ಸ್ಟಾರ್ಕಿ ಕಂಪನಿಯ ‘ಮ್ಯೂಸ್ ಐಕ್ಯೂ 1000’ ಶ್ರವಣ ಸಾಧನಗಳನ್ನು ಫಲಾನುಭವಿಗಳಿಗೆ ಒದಗಿಸಲು ನಿರ್ಧರಿಸಲಾಯಿತು.
ಸಮಾರೋಪ ಸಮಾರಂಭದಲ್ಲಿ ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಮಾತನಾಡಿ, ರಾಜ್ಯದಲ್ಲಿ ಕೇವಲ ಬೆಂಗಳೂರು ಹಾಗೂ ಮಂಗಳೂರು ಬೃಹತ್ ನಗರಗಳಲ್ಲಿ ಸಿಗುವ ಚಿಕಿತ್ಸೆಗಳು ಇಂದು ಉತ್ತರ ಕರ್ನಾಟಕದ ಅದರಲ್ಲೂ ವಿಜಯಪುರದ ಡಾ.ಬಿದರಿಯವರ ಅಶ್ವಿನಿ ಆಸ್ಪತ್ರೆಯಲ್ಲಿ ದೊರೆಯುತ್ತಿದೆ ಎಂದರು.
ಡಾ.ಎಲ್.ಎಚ್.ಬಿದರಿ, ಶರದ ರೊಡಗಿ, ಪ್ರಕಾಶ ಮಠ, ವರಲಕ್ಷ್ಮಿ ಇದ್ದರು.