ನಿಡಗುಂದಿ: ‘ರಾಜ್ಯದ ಪ್ರತಿಯೊಬ್ಬರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು, ಹಸಿವು ಮುಕ್ತ ರಾಜ್ಯವಾಗಬೇಕು ಎಂಬ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ’ ಎಂದು ಎಪಿಎಂಸಿ, ಜವಳಿ ಸಚಿವ ಶಿವಾನಂದ ಪಾಟೀಲ ಅಭಿಪ್ರಾಯಪಟ್ಟರು.
ಪಟ್ಟಣದ ಜಿವಿವಿಎಸ್ ಕಾಲೇಜ್ ಮೈದಾನದಲ್ಲಿ ಬುಧವಾರ ಜರುಗಿದ ನಿಡಗುಂದಿ, ಕೊಲ್ಹಾರ, ಬಸವನಬಾಗೇವಾಡಿ ತಾಲ್ಲೂಕಿನ ಪಂಚ ಗ್ಯಾರಂಟಿಗಳ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
‘ದೇಶದಲ್ಲಿಯೇ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿ, ಒಂದು ಕುಟುಂಬ ತನ್ನ ಕಾಲ ಮೇಲೆ ನಿಲ್ಲುವಂತೆ ಮಾಡಿದ್ದು, ಹಸಿದ ಹೊಟ್ಟೆಯನ್ನು ತಣಿಸಿದ್ದು, ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ’ ಎಂದರು.
ಫಲಾನುಭವಿಗಳಾದ ಚಂದ್ರು ಹಳೇಮನಿ, ಸವಿತಾ ಹಿರೇಮಠ, ಉಮಾ ಸಾಲಿಮಠ, ಬೇಬಿ ಹುಲ್ಲೂರ ಖುಷಿ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಟಿ.ಭೂಬಾಲನ್, ವಿಜಯಪುರ ಲೋಕಸಭಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಜು ಆಲಗೂರ, ಜಿಲ್ಲಾ ಪಂಚಾಯ್ತಿ ಸಿಇಒ ರಿಷಿ ಆನಂದ್, ಎಸ್.ಪಿ. ಋಷಿಕೇಶ ಸೋನಾವಣೆ, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ಕೆ.ಕೆ. ಚವ್ಹಾಣ, ನೀಲಪ್ರಭಾ, ಬಿಇಒ ವಸಂತ ರಾಠೋಡ, ಎಸ್.ಎಸ್. ನಾಯ್ಕಲಮಠ, ಎನ್.ಎಚ್. ಸುರಪುರ, ವೈ.ಎಸ್. ಸೋಮನಕಟ್ಟಿ, ಪ್ರಕಶಾ ದೇಸಾಯಿ, ವಿ.ಎಸ್. ಹಿರೇಮಠ, ರವಿಕುಮಾರ ಹುಕ್ಕೇರಿ, ಡಿ.ಎ. ಬಿರಾದಾರ, ಮಹೇಶ ಗಾಳಪ್ಪಗೋಳ ಇದ್ದರು.