ಇಂಡಿ: ಶಿಕ್ಷಣದಿಂದಲೇ ಸಮಾಜದ ಅಭಿವೃದ್ಧಿ ಸಾಧ್ಯ ಎನ್ನುವುದನ್ನು ಅರಿತು, 2013ರಿಂದ ಇಲ್ಲಿಯವರೆಗೆ ಇಂಡಿ ಮತಕ್ಷೇತ್ರದಲ್ಲಿ ಶೈಕ್ಷಣಿಕ ಅಭಿವೃದ್ಧಿಗಾಗಿ ₹28.25 ಕೋಟಿ ವೆಚ್ಚ ಮಾಡಲಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಪಟ್ಟಣದ ರೈಲು ನಿಲ್ದಾಣ ಬಳಿಯಿರುವ ಜ್ಞಾನಗಂಗೋತ್ರಿ ಶಿಕ್ಷಣ ಸಂಸ್ಥೆಯ ಪ್ರೌಢ ಶಾಲೆಯ ವಾರ್ಷಿಕೋತ್ಸವವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ಇಂಡಿ ಪಟ್ಟಣದಲ್ಲಿ ಒಂದೇ ಕಡೆಗೆ ಪದವಿ ಕಾಲೇಜಿಗೆ ಸ್ವಂತ ಕಟ್ಟಡ, ಪಿಯು ಕಾಲೇಜಿಗೆ ಕಟ್ಟಡ, ಐಟಿಐ ಕಾಲೇಜಿನ ಕಟ್ಟಡ, ಆದರ್ಶ ಮಗಹಾವಿದ್ಯಾಲಯಕ್ಕೆ ಕಟ್ಟಡಗಳನ್ನು ನಿರ್ಮಿಸಿದ್ದಲ್ಲದೇ ವಿದ್ಯಾರ್ಥಿಗಳಿಗಾಗಿ ವಸತಿ ನಿಲಯಗಳನ್ನು ನಿರ್ಮಿಸಿ, ಪಟ್ಟಣದ ವಿಜಯಪುರ ರಸ್ತೆಯನ್ನು ವಿದ್ಯಾ ಕಾಶಿಯನ್ನಾಗಿ ಮಾಡಲಾಗಿದೆ. ಝಳಕಿ ಗ್ರಾಮದಲ್ಲಿರುವ ಡಿಪ್ಲೊಮಾ ಕಾಲೇಜಿಗೆ ಕಟ್ಟಡ, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗೆ ಕಟ್ಟಡ, ವಿವಿಧ ಕಾಲೇಜುಗಳ ವಸತಿ ನಿಲಯಗಳ ಕಟ್ಟಡ ಸೇರಿದಂತೆ ಶೈಕ್ಷಣಿಕ ಅಭಿವೃದ್ಧಿ ಮಾಡಲಾಗಿದೆ ಎಂದರು.
ಗಡಿನಾಡಿನಲ್ಲಿ ತೆರೆದಿರುವ ಎಲ್ಲ ಶೈಕ್ಷಣಿಕ ಸಂಸ್ಥೆಗಳು ಕನ್ನಡ ಭಾಷೆಯಲ್ಲಿ ಶಿಕ್ಷಣ ನೀಡುತ್ತಿರುವುದು, ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ತಾಲ್ಲೂಕಿನಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಅನೇಕ ಸಂಸ್ಥೆಗಳು ಸರ್ಕಾರದಿಂದ ಅನುದಾನ ವಂಚಿತವಾಗಿ, ಸಂಕಷ್ಟದಲ್ಲಿವೆ. ಸರ್ಕಾರ ಇಂತಹ ಗುಣಮಟ್ಟದ ಶಿಕ್ಷಣ ಸಂಸ್ಥೆಗಳಿಗೆ ಹಾಗೂ ಮೂಲ ಸೌಲಭ್ಯ ಹೊಂದಿದ ಶಾಲೆಗಳಿಗೆ ಅನುದಾನ ನೀಡಬೇಕು. ಮುಂದಿನ ದಿನಗಳಲ್ಲಿ ಈ ಬಗ್ಗೆ ಸರ್ಕಾರದ ಗಮನ ಸೆಳೆಯುವೆ ಎಂದು ಭರವಸೆ ನೀಡಿದರು.
ತಾಲ್ಲೂಕು ಕ.ಸಾ.ಪ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ, ಅರಣ್ಯಾಧಿಕಾರಿ ಧನರಾಜ ಮುಜಗೊಂಡ ಮಾತನಾಡಿದರು.
ತಡವಲಗಾ ಗ್ರಾಮದ ಶ್ರೀಮಠದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು.
ಉಪವಿಭಾಗಾಧಿಕಾರಿ ಅಬೀದ ಗದ್ಯಾಳ, ಡಯಟ್ ಉಪನ್ಯಾಸಕ ಎ.ಆರ್ ಮುಜಾವರ, ಚಿಕ್ಕಬೇವನೂರ ಗ್ರಾ.ಪಂ ಅಧ್ಯಕ್ಷ ಸುನೀಲ ಚವ್ಹಾಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವೀದ ಮೋಮಿನ, ಜಟ್ಟಪ್ಪ ರವಳಿ, ಭೀಮಣ್ಣ ಕವಲಗಿ, ಇಲಿಯಾಸ ಬೋರಾಮಣಿ, ಶ್ರೀಮಂತ ಅಂಗಡಿ, ಇತರರು ಉಪಸ್ಥಿತರಿದ್ದರು.