ಮುದ್ದೇಬಿಹಾಳ: ಕೋವಿಡ್ ನಿಯಂತ್ರಣಕ್ಕೆ ದೇಶದ ಕೋಟ್ಯಂತರ ಯುವಕರಿಗೆ ನೀಡಿರುವ ಕೋವಿಶಿಲ್ಡ್ ಲಸಿಕೆ ಹೃದಯಾಘಾತ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿದೆ ಎಂಬ ವರದಿಗಳು ತೀವ್ರ ಆತಂಕಕಾರಿಯಾಗಿದ್ದು, ಕೇಂದ್ರದ ಬಿಜೆಪಿ ಸರ್ಕಾರ ಯುವಕರ ಜೀವದೊಂದಿಗೆ ಚೆಲ್ಲಾಟವಾಡಿದೆ ಎಂದು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಆರೋಪಿಸಿದರು.
ಪಟ್ಟಣದ ಹುಡ್ಕೊದಲ್ಲಿರುವ ಶಾಸಕರ ನಿವಾಸದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಚಿತ್ರನಟ ಪುನೀತ್ ರಾಜ್ಕುಮಾರ್ ಸಣ್ಣ ವಯಸ್ಸಿನಲ್ಲಿಯೇ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿರುವುದರ ಹಿಂದೆ ಕೇಂದ್ರ ಸರ್ಕಾರ ಕೊಟ್ಟಿರುವ ಕೋವಿಶಿಲ್ಡ್ ಲಸಿಕೆಯ ಪರಿಣಾಮ ಎಂಬುದು ಈಗ ಬಯಲಾಗಿದೆ. ಇಂತಹ ಅದೆಷ್ಟೋ ಅಸಂಖ್ಯಾತ ಯುವಕರ ಜೀವಕ್ಕೆ ಈ ಲಸಿಕೆ ಮಾರಕವಾಗಿ ಎಂಬುದನ್ನು ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಇಂತಹ ಅವೈಜ್ಞಾನಿಕ ಲಸಿಕೆ ಅಭಿವೃದ್ಧಿಪಡಿಸಿರುವ ಕೇಂದ್ರ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.
ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಮಾತನಾಡಿ, ಮೇ 3ರಂದು ಬೆಳಗ್ಗೆ 11ಕ್ಕೆ ಮುದ್ದೇಬಿಹಾಳದ ಮದರಿ ಕಲ್ಯಾಣ ಮಂಟಪದಲ್ಲಿ ಸಚಿವರಾದ ಭೈರತಿ ಸುರೇಶ ಅವರು ಭಾಷಣ ಮಾಡಲಿದ್ದಾರೆ ಎಂದರು.
ಕಾಂಗ್ರೆಸ್ ಮುಖಂಡರಾದ ಸಿ.ಬಿ.ಅಸ್ಕಿ, ನಿವೃತ್ತ ಡಿವೈಎಸ್ಪಿ ಎಸ್.ಎಸ್.ಹುಲ್ಲೂರ, ಕೆಪಿಸಿಸಿ ಸದಸ್ಯ ಬಾಪುರಾವ ದೇಸಾಯಿ, ಪ್ರಥಮ ದರ್ಜೆ ಗುತ್ತಿಗೆದಾರ ಶಾಮ್ ಪಾತ್ರದ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅಬ್ದುಲಗಫೂರ ಮಕಾನದಾರ, ಚೆನ್ನಪ್ಪ ವಿಜಯಕರ್, ಲಕ್ಷ್ಮಣ ವಡ್ಡರ, ಮಲ್ಲಿಕಾರ್ಜುನ ನಾಡಗೌಡ ಇದ್ದರು.