ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಾವಳಿ | ಇಷ್ಟಾರ್ಥ ಸಿದ್ಧಿಗಾಗಿ ಉಪವಾಸ ವ್ರತಾಚರಣೆ

ತಾಂಬಾ ಗ್ರಾಮದ ಗವಿಸಿದ್ಧೇಶ್ವರನಿಗೆ ಸರ್ವ ಧರ್ಮದವರಿಂದ ಹರಕೆ
Published 12 ನವೆಂಬರ್ 2023, 6:17 IST
Last Updated 12 ನವೆಂಬರ್ 2023, 6:17 IST
ಅಕ್ಷರ ಗಾತ್ರ

ತಾಂಬಾ: ಗ್ರಾಮದ ಗವಿಸಿದ್ಧೇಶ್ವರನಿಗೆ ತನ್ನದೇ ಆದ ಧಾರ್ಮಿಕ ಪರಂಪರೆ ಇದೆ. ಗವಿಸಿದ್ಧೇಶ್ವರನ ಕೃಪೆಗೆ ಪಾತ್ರರಾಗಲು ದೀಪಾವಳಿ ಸಂದರ್ಭದಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಭಕ್ತರು ಉಪವಾಸ ವ್ರತಾಚರಣೆ ಕೈಗೊಳ್ಳುವ ರೂಢಿ ಇಲ್ಲಿದೆ.

ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಗವಿಸಿದ್ಧೇಶ್ವರನಲ್ಲಿ ಗ್ರಾಮಸ್ಥರು ಅಪಾರ ನಂಬಿಕೆ ಇಟ್ಟಿರುವ ಕಾರಣ ಅದೊಂದು ಜಾಗೃತ ಸ್ಥಾನವಾಗಿಯೂ ಗುರುತಿಸಿಕೊಂಡಿದೆ.

ಪ್ರತಿ ವರ್ಷ ದೀಪಾವಳಿ ಅಮಾವಾಸ್ಯೆಯಂದು ಗವಿಸಿದ್ಧೇಶ್ವರ ದೇವರ ಮತ್ತು ಮಹಾಲಕ್ಷ್ಮಿ ಜಾತ್ರಾ ಮಹೋತ್ಸವವೂ ನಡೆಯಲಿದ್ದು, ಎರಡೂ ದೇವರ ಜಾತ್ರಾ ಒಟ್ಟಿಗೆ ನಡೆಯುವುದು ವಿಶೇಷ. ದೇವರ ಮೇಲೆ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಭಕ್ತರ ಅಪಾರ ನಂಬಿಕೆ, ಸುತ್ತಮುತ್ತಲಿನ ಗ್ರಾಮಗಳ ಜನರು ಸಹ ದೇವರಿಗೆ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊತ್ತುಕೊಳ್ಳುವುದು ಇಲ್ಲಿನ ವಿಶೇಷ. ಇದಕ್ಕೆ ಜಾತಿ ಮತ್ತು ಧರ್ಮದ ಹಂಗಿಲ್ಲ. ಮಹಾನವಮಿ ಅಮಾವಾಸ್ಯೆಯಿಂದ ದೀಪಾವಳಿ ಅಮಾವಾಸ್ಯೆಯವರೆಗೂ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಭಕ್ತರು ಉಪವಾಸ ವ್ರತಾಚರಣೆ ಮಾಡುತ್ತಾರೆ.

ಗವಿಸಿದ್ಧೇಶ್ವರನ ಸಂಪ್ರೀತಿಗಾಗಿ ಮಹಾನವಮಿ ಅಮಾವಾಸ್ಯೆಯಿಂದ ದೀಪಾವಳಿ ಅಮಾವಾಸ್ಯೆಯವರೆಗೂ ಕಟ್ಟುನಿಟ್ಟಿನಿಂದ ವ್ರತಾಚರಣೆ ನಡೆಸಿದ ಭಕ್ತ ಸಮೂಹ, ದೀಪಾವಳಿ ಅಮಾವಾಸ್ಯೆಯಂದು ಗವಿಸಿದ್ಧೇಶ್ವರನ ಮುಕ್ತಿ ಮಂದಿರದಲ್ಲಿ ದೇವರ ದರ್ಶನ ಪಡೆದು, ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿ ಧನ್ಯತಾಭಾವ ಹೊಂದುತ್ತಾರೆ.

ಗವಿಸಿದ್ಧೇಶ್ವರ ದೇವರ ಮುಕ್ತಿ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಒಂದು ತಿಂಗಳ ಉಪವಾಸ ವ್ರತ ಕೈಬಿಟ್ಟು, ಮುಕ್ತಿ ಮಂದಿರದಲ್ಲಿ ಪ್ರಸಾದ ಸ್ವೀಕರಿಸುತ್ತಾರೆ. ದೇವರ ನಾಮಸ್ಮರಣೆ, ಡೊಳ್ಳು ಕುಣಿತ, ಭಜನೆ ಕಾರ್ಯಕ್ರಮಗಳು ನಡೆಯುತ್ತವೆ.

ಗ್ರಾಮದ ಪ್ರತಿ ಮನೆಯಲ್ಲಿ ಒಬ್ಬರಾದರೂ ಉಪವಾಸ ವೃತ್ತ ಆಚರಿಸುತ್ತಾರೆ. ಮುಸ್ಲಿ ಧರ್ಮದವರು ಸಹ ತಮ್ಮ ಇಷ್ಟಾರ್ಥ ಈಡೇರಿಕೆಗಾಗಿ ಗವಿಸಿದ್ಧೇಶ್ವರ ದೇವರ ಜಾತ್ರಾ ಸಮಯದಲ್ಲಿ ಉಪವಾಸ ವ್ರತ ಕೈಗೊಳ್ಳವುದು ಸಾಮಾನ್ಯವಾಗಿದೆ.

ತಾಂಬಾ ಗ್ರಾಮದ ಪ್ರತಿ ಮನೆಯಲ್ಲಿ ಒಬ್ಬರಾದರೂ ಉಪವಾಸ ವೃತ್ತ ಆಚರಣೆಯಲ್ಲಿ ಪಾಲ್ಗೊಳಲು ದೇವಸ್ಥಾನಕ್ಕೆ ತೆರಳುತ್ತಿರುವುದು (ಸಂಗ್ರಹ ಚಿತ್ರ)
ತಾಂಬಾ ಗ್ರಾಮದ ಪ್ರತಿ ಮನೆಯಲ್ಲಿ ಒಬ್ಬರಾದರೂ ಉಪವಾಸ ವೃತ್ತ ಆಚರಣೆಯಲ್ಲಿ ಪಾಲ್ಗೊಳಲು ದೇವಸ್ಥಾನಕ್ಕೆ ತೆರಳುತ್ತಿರುವುದು (ಸಂಗ್ರಹ ಚಿತ್ರ)
ಜಾತ್ರಾ ಮಹೋತ್ಸವದ ಅಂಗವಾಗಿ ಹಿಂದೂ-ಮುಸ್ಲಿಂ ಬಾಂಧವರಿಂದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿರುವುದು(ಸಂಗ್ರಹ ಚಿತ್ರ)
ಜಾತ್ರಾ ಮಹೋತ್ಸವದ ಅಂಗವಾಗಿ ಹಿಂದೂ-ಮುಸ್ಲಿಂ ಬಾಂಧವರಿಂದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿರುವುದು(ಸಂಗ್ರಹ ಚಿತ್ರ)

ಕಟ್ಟುನಿಟ್ಟಿನ ಆಚರಣೆ ಉಪವಾಸ ವೃತಾಚರಣೆಯನ್ನು ಭಕ್ತರು ಕಟ್ಟುನಿಟ್ಟಿನಿಂದ ಆಚರಿಸುತ್ತಾರೆ. ನಸುಕಿನಲೇ ಚಹಾ ಕುಡಿದರೆ ಮತ್ತೆ ಏನನ್ನೂ ತಿನ್ನುವುದಿಲ್ಲ. ತುಂಬಾ ದಾಹವಾದರೆ ನೀರನ್ನಷ್ಟೇ ಕುಡಿಯುತ್ತಾರೆ. ರಾತ್ರಿಯಷ್ಟೇ ಒಂದು ಹೊತ್ತು ಊಟ ಅಥವಾ ಫಲಾಹಾರ ಸೇವಿಸುತ್ತಾರೆ. ವೃತಾಚರಣೆಯಲ್ಲಿ ತೊಡಗಿದವರು ಪಾದರಕ್ಷೆ ಧರಿಸಲ್ಲ. ಪಾದರಕ್ಷೆ ಹಾಕಿಕೊಂಡವರು ಅಪ್ಪಿತಪ್ಪಿ ಮುಟ್ಟಿದರೆ ಅಂದು ನೀರು ಕುಡಿಯಲ್ಲ. ಮತ್ತೊಮ್ಮೆ ಸ್ನಾನ ಮಾಡಿ ದೇವರಿಗೆ ಪೂಜೆ ಸಲ್ಲಿಸಿ ಉಪವಾಸ ಮುಂದುವರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT