ಮೈಸೂರು: ‘ರಾಜಕಾರಣದಲ್ಲಿ ಸ್ವಂತ ಶಕ್ತಿಯ ಮೇಲೆ ಬೆಳೆದು ಅಧಿಕಾರ ಹಿಡಿಯುವವರ ಪೀಳಿಗೆ ಮುಗಿಯುತ್ತಾ ಬರುತ್ತಿದೆ. ಈಗಿನವರು ಒಂದಿಲ್ಲೊಂದು ಶಕ್ತಿಯನ್ನು ಪಡೆದುಕೊಂಡೇ ಬರುತ್ತಿದ್ದಾರೆ’ ಎಂದು ಸಂಸದ ಪ್ರತಾಪ ಸಿಂಹ ಮಾರ್ಮಿಕವಾಗಿ ಹೇಳುವ ಮೂಲಕ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪಿದ್ದಕ್ಕೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು.
ಶನಿವಾರ ನಡೆದ ವಿ.ಶ್ರೀನಿವಾಸ ಪ್ರಸಾದ್ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಿದ್ದರಾಮಯ್ಯ, ಯಡಿಯೂರಪ್ಪ, ಎಚ್.ಡಿ.ದೇವೇಗೌಡ, ಶ್ರೀನಿವಾಸ ಪ್ರಸಾದ್, ಮಲ್ಲಿಕಾರ್ಜುನ ಖರ್ಗೆ ನೆಲದಿಂದ ಎದ್ದು ಬಂದವರು. ಸ್ವಂತ ಶಕ್ತಿಯ ಮೇಲೆ ಹೋರಾಟದ ಬಲದಿಂದ ಬಂದು ರಾಜಕಾರಣದಲ್ಲಿ ಪ್ರಭುತ್ವವನ್ನು ಸಾಧಿಸಿದವರು. ಸ್ವಂತ ಶಕ್ತಿಯಿಂದ ಅಧಿಕಾರ ಹಿಡಿದು ಜನರಿಗೆ ನೆರವಾಗುವ ಕೆಲಸ ಮಾಡಿದ ಪೀಳಿಗೆ ಬಹುಶಃ ನಿಮಗೇ ಕೊನೆಯಾಗಲಿದೆ. ನೀವೆಲ್ಲರೂ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ ಹಾಗೂ ದಾರಿದೀಪವಾಗಿದ್ದಾರೆ’ ಎಂದರು.
ಸಿದ್ದರಾಮಯ್ಯ ಅವರು ಶ್ರೀನಿವಾಸ ಪ್ರಸಾದ್ ಅವರನ್ನು ಭೇಟಿಯಾಗಿದ್ದಕ್ಕೂ ಮೆಚ್ಚುಗೆ ವ್ಯಕ್ತಪಡಿಸಿದರು.
ಯಡಿಯೂರಪ್ಪ ಸಮ್ಮುಖದಲ್ಲೇ ಸಿದ್ದರಾಮಯ್ಯ ಹಾಗೂ ಸಚಿವ ಮಹದೇವಪ್ಪ ಅವರನ್ನು ಪ್ರತಾಪ ಸಿಂಹ ಹೊಗಳಿದ್ದಲ್ಲದೇ ವೇದಿಕೆಗೆ ಸಿದ್ದರಾಮಯ್ಯ ಬರುತ್ತಿದ್ದಂತೆಯೇ ಕಾಲಿಗೆರಗಿ ನಮಸ್ಕರಿಸಿದರು. ಸಿದ್ದರಾಮಯ್ಯ ಕೂಡ ಬೆನ್ನು ತಟ್ಟಿದರು.