ಹೊರ್ತಿ:ಆಧ್ಯಾತ್ಮವಾಗಿ ಹೆಸರುವಾಸಿಯಾಗಿರುವಇಂಚಗೇರಿಯು ‘ರಾಷ್ಟ್ರಪಕ್ಷಿ’ ನವಿಲುಗಳ ತಾಣವಾಗಿಯೂ ಜನಪ್ರಿಯವಾಗಿದೆ.
ಇಂಚಗೇರಿ ಮಠವು ಸಪ್ತ ಮಹಾರಾಜರ ಪುಣ್ಯಧಾಮ. ಆಧ್ಯಾತ್ಮಿಕ ನಿತ್ಯ-ನಿಯಮ, ಭಜನೆ, ಸತ್ಸಂಗ, ಪುರಾಣ-ಪ್ರವಚನ, ಚಿಂತನ-ಮಂಥನ ಆಚರಣೆ–ಸಂಪ್ರದಾಯ, ಸರ್ವಧರ್ಮ ಸಮನ್ವಯದ ಶಾಂತಿ ಕೇಂದ್ರವಾಗಿದೆ.
ಶ್ರೀಮಠಕ್ಕೆ ಆಗಮಿಸುವ ಭಕ್ತರು ಮಠದ ಆವರಣ ಹಾಗೂ ಸುತ್ತಲಿನ ಪ್ರದೇಶದಲ್ಲಿ ನವಿಲುಗಳು ಸ್ವಚ್ಛಂದವಾಗಿ ಓಡಾಡುವ ಮತ್ತು ಗರಿ ಬಿಚ್ಚಿ ಕುಣಿಯುವುದನ್ನು ಕಂಡು ಖುಷಿಪಡುತ್ತಿದ್ದಾರೆ.
ಕರ್ನಾಟಕದ ಗಡಿ ಭಾಗದಲ್ಲಿರುವ ಇಂಚಗೇರಿಮಠಕ್ಕೆ ನೆರೆ ಮಹಾರಾಷ್ಟ್ರ ಸೇರಿದಂತೆ ದೇಶ-ವಿದೇಶಗಳಿಂದ ಭಕ್ತರು ಆಗಮಿಸುತ್ತಾರೆ. ಹಾಯಾಗಿ ನಲಿದಾಡುವ ನವಿಲುಗಳನ್ನು ಕಣ್ಮುಂಬಿಕೊಳ್ಳುವುದರೊಂದೊಗೆ ಫೋಟೊ ತೆಗೆದುಕೊಂಡು ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ.
ಶ್ರೀಮಠದಲ್ಲಿ ಬೆಳಿಗ್ಗೆ 4 ಗಂಟೆಗೆ ಕಾಕಡಾರುತಿ ಗಂಟೆ ಬಾರಿಸಿದ ಕೂಡಲೇ ನವಿಲುಗಳ ಸಾಮೂಹಿಕ ಕೂಗು ಕೇಳಿಬರುತ್ತವೆ. ಸಣ್ಣದೊಂದು ಶಬ್ದವಾದರೂ ಬೆಚ್ಚಿ ಬಿದ್ದು ಚೆಂಗನೆ ಹಾರಿ ಮರಗಳ ಕೊಂಬೆ ಮೇಲೆ ಕುಳಿತುಕೊಳ್ಳುತ್ತವೆ. ಮಠದ ಆವರಣದಲ್ಲಿ ಕಾಳುಕಡಿ ಹಸನುಗೊಳಿಸಿದ ನಂತರ ಅಲ್ಲಲ್ಲಿ ಬಿದ್ದ ಕಾಳುಗಳನ್ನು ತಿನ್ನುತ್ತವೆ.
ನವಿಲುಗಳಿಗೆ ಇಲ್ಲಿ ಯಾರ ಉಪದ್ರವವೂ ಇಲ್ಲ. ಹುಳ ಹುಪ್ಪಡಿಗಳನ್ನು ಹೆಕ್ಕಿ ತಿನ್ನುವುದರಿಂದ ಬೆಳೆಗಳಿಗೆ ಕೀಟಬಾಧೆ ಇಲ್ಲದಂತಾಗಿದೆ. 80ರ ದಶಕದಲ್ಲಿ ಬೆರಳೆಣಿಕೆಯಷ್ಟಿದ್ದ ನವಿಲುಗಳ ಸಂತತಿ ವರ್ಷದಿಂದ ವರ್ಷಕ್ಕೆ ವೃದ್ದಿಯಾಗುತ್ತಿದೆ. ಇಂಚಗೇರಿ ಭಾಗದಲ್ಲಿರುವ ಗುಡ್ಡಗಳ ಸಾಲು, ಮಠದ ಪ್ರಶಾಂತವಾದ ಆವರಣ ನವಿಲುಗಳ ವಾಸಕ್ಕೆ ಪ್ರಶಸ್ತವಾಗಿದೆ.
ಅದೇಷ್ಟೋ ನವಿಲುಗಳು ಇಲ್ಲಿ ಸಂತಾನಭಿವೃದ್ಧಿಯಾದ ನಂತರ ಭೀಮಾ ಹಾಗೂ ಕೃಷ್ಣಾ ನದಿ ತೀರದ ಅನೇಕ ಹಳ್ಳಿಗಳಿಗೆ ಮತ್ತು ನೆರೆ ಮಹಾರಾಷ್ಟ್ರಕ್ಕೆ ಒಲಸೆ ಹೋಗಿರುವುದುಂಟು.
ಈ ನವಿಲುಗಳ ತಾಣ ನೋಡಲೂ ಮಳೆಗಾಲ ಮತ್ತು ಚಳಿಗಾಲ ಸೂಕ್ತ ಸಮಯವಾಗಿದೆ.