ಆಲಮಟ್ಟಿ: ಆಲಮಟ್ಟಿಜಲಾಶಯದ ಸುತ್ತಮುತ್ತಲಿನ ಪ್ರದೇಶದಲ್ಲಿ ಕಲಾತ್ಮಕ ಉದ್ಯಾನ ನಿರ್ಮಿಸಬೇಕೆಂಬ ಹಂಬಲಕ್ಕೆ ಸೃಜನಾತ್ಮಕತೆಯ ರೂಪ ಕೊಟ್ಟವರು ಖ್ಯಾತ ಶಿಲ್ಪಿ ಟಿ.ಬಿ. ಸೊಲಬಕ್ಕನವರ.
ಕೇವಲ ದೇವಸ್ಥಾನಕ್ಕೆ ಸೀಮಿತವಾಗಿದ್ದ ಸಿಮೆಂಟ್ ಮೂರ್ತಿಗಳನ್ನು ಉದ್ಯಾನದಲ್ಲಿ ನಾನಾ ಕಲೆಗಳಲ್ಲಿ ಪ್ರಚುರಪಡಿಸಿದವರು ಸೊಲಬಕ್ಕನವರ. ಆಲಮಟ್ಟಿ ಅವರ ಈ ಸಿಮೆಂಟ್ ಕಲಾಕೃತಿಗಳ ಪ್ರಯೋಗಶಾಲೆಯಾಯಿತು. ಅವಳಿ ಜಿಲ್ಲೆಯ ಮೋಹನ ಬಡಿಗೇರ, ಬಸವರಾಜ ಅನಗವಾಡಿ, ಡಿ.ಎಸ್. ಚವ್ಹಾಣ ಸೇರಿದಂತೆ ಸುಮಾರು 500 ಕ್ಕೂ ಹೆಚ್ಚು ಕಲಾವಿದರ ಉದಯಕ್ಕೆ ಹಾಗೂ ಕಲೆಯಿಂದಲೇ ಅವರ ಬದುಕಿ ಕಟ್ಟಿಕೊಳ್ಳಲು ನೆರವಾದವರು ಸೊಲಬಕ್ಕನವರ.
ಆಲಮಟ್ಟಿಯಲ್ಲಿ ಅರಳಿದ ರಾಕ್ ಗಾರ್ಡನ್ನ ಪ್ರವೇಶದ್ವಾರದಿಂದ ಆರಂಭಗೊಂಡು, ಡೈನೋಸಾರ್, ಆನೆ, ಪಕ್ಷಿ, ಜಾತ್ರೆಯ ದೃಶ್ಯ, ಸರಿಸೃಪಗಳು, ಸಿಲ್ವರ್ ಲೇಕ್, ಜಪಾನಿಸ್ ಪಗೋಡಾ, ಚಿಟ್ಟೆಗಳ ತಾಣ, ದೇಶದ ನಾನಾ ಮಂಗಗಳ ಕಲಾಕೃತಿಗೆ ಅವರು ಜೀವ ತುಂಬಿದರು.
ಎಲೆ ಮರೆ ಕಾಯಿಯಂತಿದ್ದ ಸ್ಥಳೀಯ ಚಿತ್ರ ಕಲಾವಿದರಿಗೆ ಕರೆದು ಅವರಿಂದ ಈ ಕಲಾಕೃತಿಗಳ ನಿರ್ಮಾಣದ ತರಬೇತಿ ನೀಡುತ್ತಲೆ ಕಲಾಕೃತಿಗಳನ್ನು ರಚಿಸಿದರು.
ಸ್ಥಳೀಯವಾಗಿ ಲಭ್ಯವಿದ್ದ ಕಲ್ಲು ಬಂಡೆಗಳಿಂದಲೇ ಕೂೀಹನ ಆಸನ, ಅದಕ್ಕೊಂದು ಮೂರ್ತ ರೂಪ ನೀಡಿದರು. ಗ್ರಾನೈಟ್ ವೇಸ್ಟೇಜನ್ನು ತಂದು ಉದ್ಯಾನಕ್ಕೆ ನೆಲಹಾಸು ಸೇರಿ ವಿವಿಧ ಕಲಾಕೃತಿ ರಚಿಸಿದರು.
ಕೃಷ್ಣಾ ಉದ್ಯಾನದಲ್ಲಿ ಕೃಷ್ಣನ ಬಾಲ್ಯ, ರಾಸಲೀಲೆಯನ್ನು ರೂಪಿಸಿದರು. ಲವಕುಶ ಉದ್ಯಾನದಲ್ಲಿ ಇಡೀ ರಾಮಾಯಣವನ್ನು ಕಲಾಕೃತಿಯ ಮೂಲಕ ತೋರಿಸಿಕೊಟ್ಟರು.
1999 ರಿಂದ 2008 ರವರೆಗೆ ಆಲಮಟ್ಟಿಯಲ್ಲಿಯೇ ಇದ್ದು, ವಿವಿಧ ಉದ್ಯಾನ ನಿರ್ಮಾಣಕ್ಕೆ ಕಾರಣೀಭೂತರಾಗಿದ್ದರು.
ಅವರ ಪರಿಕಲ್ಪನೆಯಲ್ಲಿ ನಿರ್ಮಾಣಗೊಂಡ ಉದ್ಯಾನಗಳಿಗೆ ಕೃಷ್ಣಾ ಭಾಗ್ಯ ಜಲ ನಿಗಮ ಹಾಗೂ ಅಧಿಕಾರಿಗಳಾದ ಡಾ ಎಸ್ ಎಂ ಜಾಮದಾರ, ಕೃಷ್ಣಾ ಉದಪುಡಿ, ಮಹೇಶ ಪಾಟೀಲ ಸೇರಿದಂತೆ ಹಲವರು ಪೂರಕವಾಗಿ ಸ್ಪಂದಿಸಿದ್ದು, ಉದ್ಯಾನ ನಿರ್ಮಾಣಗೊಳ್ಳಲು ಸಾಧ್ಯವಾಯಿತು.