ವಿಜಯಪುರ: ‘ಯುವ ಸಮುದಾಯ ಆಧುನಿಕ ಜೀವನ ಶೈಲಿಗೆ ಮಾರುಹೋಗದೆ ಸೇವಾ ಮನೋಭಾವವನ್ನು ರೂಢಿಸಿಕೊಳ್ಳಬೇಕು. ವಿದ್ಯಾರ್ಥಿಗಳು ನಾಯಕತ್ವದ ಗುಣಗಳನ್ನು ಅಳವಡಿಸಿಕೊಂಡು ಸಮಾಜದ ಉನ್ನತಿಗೆ ಶ್ರಮಿಸಬೇಕು’ ಎಂದು ರಾಜ್ಯ ಎನ್.ಎಸ್.ಎಸ್. ಸಲಹಾ ಸಮಿತಿ ಸದಸ್ಯ ಜಾವಿದ್ ಜಮಾದಾರ ಹೇಳಿದರು.
ನಗರದ ರಾಮಕೃಷ್ಣ ಪರಮಹಂಸ ಆಶ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ಎನ್.ಎಸ್.ಎಸ್. ಕೋಶ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಹಾಗೂ ಬಿ.ಎಲ್.ಡಿ.ಇ. ಸಂಸ್ಥೆಯ ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡ ಏಳು ದಿನಗಳ ಪೌರತ್ವ ತರಬೇತಿ ಶಿಬಿರ ಹಾಗೂ ಎನ್.ಎಸ್.ಎಸ್. ವಾರ್ಷಿಕ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಯುವಕರಲ್ಲಿ ತ್ಯಾಗ, ಸೇವೆ, ಸಹಕಾರ ಭಾವಗಳು ಬೆಳೆದಾಗ ಮಾತ್ರ ರಾಷ್ಟ್ರದ ಘನತೆ ಎತ್ತಿ ಹಿಡಿಯಲು ಸಾಧ್ಯ. ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳಬೇಕಾದರೆ ಗೊಂದಲದಿಂದ ಹೊರಬರಬೇಕು. ಅತಿಯಾದ ಆತ್ಮವಿಶ್ವಾಸ ತೊರೆದು ಜೀವನ ಕೌಶಲಗಳನ್ನು ರೂಢಿಸಿಕೊಳ್ಳಬೇಕು’ ಎಂದರು.
ಬಿ.ಎಲ್.ಡಿ.ಇ. ಸಂಸ್ಥೆಯ ಮುಖ್ಯ ಆಡಳಿತ ಅಧಿಕಾರಿ ಆರ್.ಬಿ. ಕೊಟ್ನಾಳ, ‘ವಿದ್ಯಾರ್ಥಿಗಳು ಯಾವಾಗಲೂ ಪುಸ್ತಕ ಪ್ರೇಮಿಯಾಗಬೇಕು. ದುಶ್ಚಟಗಳ ದಾಸರಾಗದೆ, ಸಮಾಜದ ಅನಿಷ್ಟ ಪದ್ಧತಿಗಳ ನಿರ್ಮೂಲನೆಗಾಗಿ ಶ್ರಮಿಸಬೇಕು’ ಎಂದರು.
ಬಿ.ಎಲ್.ಡಿ.ಇ. ಆಡಳಿತಾಧಿಕಾರಿ ಐ.ಎಸ್. ಕಾಳಪ್ಪನವರ, ಜಿಲ್ಲಾ ಎನ್.ಎಸ್.ಎಸ್. ನೋಡಲ್ ಅಧಿಕಾರಿ ಪ್ರಕಾಶ ರಾಠೋಡ, ಬಿ.ವೈ. ಕಾಸನೀಸ, ಬಿ.ಎಸ್.ಹಿರೇಮಠ, ಎಂ.ಬಿ. ಕೋರಿ, ಎಂ.ಎಸ್. ಹಿರೇಮಠ, ಎಸ್.ಎಸ್.ಪಾಟೀಲ, ಜೆ.ಎಸ್.ಪಟ್ಟಣಶೆಟ್ಟಿ, ಎ.ಎಸ್.ಮಸಳಿ, ಎಸ್.ಪಿ.ಶೇಗುಣಸಿ, ಪಿ.ಡಿ. ಮುಲ್ತಾನಿ ಇದ್ದರು.