ಮುದ್ದೇಬಿಹಾಳ: ರಾಜ್ಯ ಸರ್ಕಾರ ತೆರಿಗೆ ಪಾಲನ್ನು ಕೇಳುವ ವಿಷಯದಲ್ಲಿ ಕೇಂದ್ರ ಸರ್ಕಾರದೊಂದಿಗೆ ಸಂಘರ್ಷ ನಡೆಸುವುದು ಸರಿಯಲ್ಲ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್. ಪಾಟೀಲ್ ಕೂಚಬಾಳ ಹೇಳಿದರು.
ಪಟ್ಟಣದ ಸಾಯಿ ನಗರದಲ್ಲಿ ಗುರುವಾರ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದ ಸಂದರ್ಭಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
‘ತೆರಿಗೆ ಪಾಲನ್ನು ನೀಡಲು ಕೇಂದ್ರ ಹಿಂದೇಟು ಹಾಕುತ್ತಿದೆಯಲ್ಲ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪಾಟೀಲ್, ಕುಣಿಯಲು ಬಾರದವಳು ನೆಲ ಡೊಂಕೆಂದಳಂತೆ ಎಂಬ ಮಾತಿನಂತೆ ಸಂಸತ್ತಿನಲ್ಲಿ ಪ್ರಧಾನ ಮಂತ್ರಿ ದಾಖಲೆ ಸಮೇತ ಉತ್ತರ ಕೊಟ್ಟಿದ್ದಾರೆ. ಪದೇ ಪದೇ ಅದಕ್ಕೆ ಉತ್ತರ ನೀಡುವ ಅವಶ್ಯಕತೆಯಿಲ್ಲ. ಆದರೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದೊಂದಿಗೆ ತೆರಿಗೆ ಪಾಲನ್ನು ಕೇಳುವ ಸಮಯದಲ್ಲಿ ಸಂಘರ್ಷಕ್ಕೆ ಇಳಿಯದೇ ಅದರದ್ದೇ ಮಾರ್ಗಗಳಲ್ಲಿ ಸಾಗಿ ತನ್ನ ಪಾಲನ್ನು ಪಡೆದುಕೊಳ್ಳಬೇಕು’ ಎಂದು ಹೇಳಿದರು.
‘ಕಾಂಗ್ರೆಸ್ಸಿಗರು ಅಧಿಕಾರ ದಾಹದಿಂದ ಮೆರೆಯುತ್ತಿದ್ದಾರೆ. ನಾಡಗೀತೆಯನ್ನು ರದ್ದುಪಡಿಸುವ ಕ್ರಮ, ಜ್ಞಾನ ದೇಗುಲವಿದು ಕೈ ಮುಗಿದು ಬಾ ಎನ್ನುವ ಬದಲು ಧೈರ್ಯವಾಗಿ ಪ್ರಶ್ನಿಸು ಘೋಷ ವಾಕ್ಯ ಬದಲಾವಣೆ, ಪ್ರವಾಸ ಭಾಗ್ಯದಲ್ಲೂ ವಿದ್ಯಾರ್ಥಿಗಳಲ್ಲಿ ತಾರತಮ್ಯ ಮಾಡಿದ್ದು ಸೇರಿದಂತೆ ಶಾಲಾ ಮಕ್ಕಳ ಹಂತದಿಂದ ಎಲ್ಲ ವರ್ಗದವರಲ್ಲಿ ಕನ್ನಡ ನಾಡಿನ ಜನರ ಹಿತವನ್ನು ಬಲಿಕೊಡುವ ಕೆಲಸ ಮಾಡುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ’ ಎಂದು ಆರೋಪಿಸಿದರು.
‘ಗ್ಯಾರಂಟಿ ಯೋಜನೆಗಳಿಗಾಗಿ ಜನರ ಹಿತವನ್ನು ಬಲಿ ಕೊಡುವ ಕೆಲಸ ಮಾಡುತ್ತಿದ್ದೀರಿ. ₹ 11,600 ಕೋಟಿ ಎಸ್ಸಿಪಿ, ಟಿಎಸ್ಪಿ ಯೋಜನೆಯ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡು ಎಸ್ಸಿ.,ಎಸ್ಟಿ, ಶೋಷಿತ ಸಮಾಜಕ್ಕೆ ಅನ್ಯಾಯ ಮಾಡುತ್ತಿದ್ದೀರಿ’ ಎಂದು ದೂರಿದರು.
‘ರಾಜ್ಯದಲ್ಲಿ ಪ್ರತಿ ಕ್ಷೇತ್ರದಲ್ಲೂ ಅಭಿವೃದ್ಧಿ ಶೂನ್ಯವಾಗಿದೆ. ನಾಡಿನ ಜನತೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿಗರಿಗೆ ತಕ್ಕ ಉತ್ತರ ನೀಡಲಿದ್ದಾರೆ. ಇದು ಕಾಂಗ್ರೆಸ್ಸಿಗರಿಗೆ ಆತ್ಮಾವಲೋಕನಕ್ಕೆ ಸಕಾಲ’ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸಿದ್ಧು ಹೆಬ್ಬಾಳ, ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ ಇದ್ದರು.