ವಿಜಾಪುರ: `ಪ್ರೇಮ ವಿವಾಹವಾಗಿ ಹೆಣ್ಣು ಮಗುವನ್ನು ಕರುಣಿಸಿ ಹೊರಟು ಹೋಗಿರುವ ನನ್ನ ಗಂಡನನ್ನು ಹುಡುಕಿಕೊಡಿ' ಎಂದು ಮಹಿಳೆಯೊಬ್ಬಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮೊರೆ ಹೋದ ಘಟನೆ ಮಂಗಳವಾರ ಇಲ್ಲಿ ನಡೆಯಿತು.
ಮೂಲತಃ ಗುಲ್ಬರ್ಗದ ಶಹಾಬಾದ್ ನಾಕಾ ನಿವಾಸಿ ಪೂಜಾ ಪಂಚಾಳ (21) ತನ್ನ ಪುಟ್ಟ ಕಂದಮ್ಮನೊಂದಿಗೆ ಇಲ್ಲಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಆಗಮಿಸಿದ್ದರು.
`ಕೆಲ ವರ್ಷಗಳ ಹಿಂದೆ ನಾನು ಬೆಂಗಳೂರಿನಲ್ಲಿ ಟೇಲರಿಂಗ್ ವೃತ್ತಿ ಮಾಡುತ್ತಿದ್ದೆ. ವಿಜಾಪುರ ಜಿಲ್ಲೆ ಕವಲಗಿಯ ಶಿವಾನಂದ (23) ಎಂಬಾತ ಅಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಇಬ್ಬರೂ ಪ್ರೇಮಿಸಿ ವಿವಾಹವಾದೆವು. ನಂತರ ಬೆಂಗಳೂರು ಬಿಟ್ಟು ಬಾಗಲಕೋಟೆ ಜಿಲ್ಲೆ ಹಿರೇಪಡಸಲಗಿ ಗ್ರಾಮದಲ್ಲಿ (ಅಕ್ಕನ ಊರು) ವಾಸವಾಗಿದ್ದೆವು' ಎಂದು ಪೂಜಾ ಹೇಳಿದರು.
`ಬೇರೆ ವಿವಾಹವಾಗುವ ಉದ್ದೇಶದಿಂದ ಶಿವಾನಂದ ನನ್ನನ್ನು ಬಿಟ್ಟು ಹೋಗಲಾರಂಭಿಸಿದ. ಹಿರೇಪಡಸಲಗಿ ಗ್ರಾಮದ ಹಿರಿಯರು ಇಬ್ಬರಿಗೂ ಬುದ್ದಿವಾದ ಹೇಳಿ ಮರು ಮದುವೆ ಮಾಡಿಸಿದರು. ಏತನ್ಮಧ್ಯೆ ನನಗೆ ಹೆಣ್ಣು ಮಗು ಜನಿಸಿತು. ನಾಲ್ಕು ತಿಂಗಳಿನಿಂದ ಆತ ನಾಪತ್ತೆಯಾಗಿದ್ದು, ಆತ ಮೂಲತಃ ವಿಜಾಪುರ ಜಿಲ್ಲೆಯವನಾಗಿರುವುದರಿಂದ ಇಲ್ಲಿಯ ಎಸ್ಪಿ ಅವರಿಗೆ ಮನವಿ ಮಾಡಿಕೊಂಡಿದ್ದೇನೆ' ಎಂದರು.