ಸುರಪುರ: ‘ಎಪಿಎಂಸಿ ಪ್ರಾಂಗಣದಲ್ಲಿ ಮಳಿಗೆಗಳನ್ನು ನಿಯಮದ ಅನುಸಾರ ಟೆಂಡರ್ ಕರೆಯದೆ ಅನಧಿಕೃತವಾಗಿ ಬಾಡಿಗೆ ನೀಡಿರುವ ಎಪಿಎಂಸಿ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿ ದಲಿತ ಸೇನೆ ಮುಖಂಡರು ತಹಶೀಲ್ದಾರ್ ಕೆ.ವಿಜಯಕುಮಾರ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ತಾಲ್ಲೂಕು ಸಮಿತಿ ಅಧ್ಯಕ್ಷ ಮರಿಲಿಂಗ ಗುಡಿಮನಿ ಮಾತನಾಡಿ ‘ಖಾನಾಪುರ ಮತ್ತು ಹಸನಾಪುರ ಎಪಿಎಂಸಿ ಪ್ರಾಂಗಣದಲ್ಲಿ ಮಳಿಗೆಗಳನ್ನು ನಿರ್ಮಿಸಲಾಗಿದೆ. ಸರ್ಕಾರದ ಸುತ್ತೋಲೆಯಂತೆ ಟೆಂಡರ್ ಕರೆದು ಬಾಡಿಗೆಗೆ ನೀಡುವ ನಿಯಮವಿದೆ. ಎಪಿಎಂಸಿ ಕಾರ್ಯದರ್ಶಿ ನಿಯಮ ಪಾಲಿಸದೆ ಅನಧಿಕೃತವಾಗಿ ನೀಡಿದ್ದಾರೆ’ ಎಂದು ದೂರಿದರು.
‘ಬಾಡಿಗೆ ನೀಡಿರುವ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ಇಲ್ಲ. ಹುಣಸಗಿ. ಕೆಂಭಾವಿ ಮತ್ತು ಕಕ್ಕೇರಾ ಉಪಮಾರುಕಟ್ಟೆಯಲ್ಲಿ ಕೂಡಾ ಮಳಿಗೆಗಳ ಬಾಡಿಗೆ ಟೆಂಡರ್ ಕರೆದಿಲ್ಲ. ಸುಮಾರು ₹50 ಲಕ್ಷದಿಂದ ₹60 ಲಕ್ಷ ಅವ್ಯವಹಾರವಾಗಿದೆ. ಇದರಲ್ಲಿ ಕೆಲ ಪ್ರಭಾವಿಗಳು ಭಾಗಿಯಾಗಿರುವ ಸಾಧ್ಯತೆ ಇದೆ’ ಎಂದು ಸಂಶಯ ವ್ಯಕ್ತಪಡಿಸಿದರು.
‘ಈ ಕುರಿತು ತನಿಖೆ ಮಾಡಿಸಿ ತಪಿತಸ್ಥರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಮುಖಂಡರು ಆಗ್ರಹಿಸಿದರು.