ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೇವು, ನೀರಿಗಾಗಿ ಜಾನುವಾರುಗಳ ಅಲೆದಾಟ

ನಾಮದೇವ ವಾಟ್ಕರ
Published 7 ಏಪ್ರಿಲ್ 2024, 6:43 IST
Last Updated 7 ಏಪ್ರಿಲ್ 2024, 6:43 IST
ಅಕ್ಷರ ಗಾತ್ರ

ವಡಗೇರಾ: ಬಿರುಬೇಸಿಗೆಯಿಂದಾಗಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಎಲ್ಲೆಡೆ ಒಣಹವೆಯಿದ್ದು, ಜಾನುವಾರುಗಳು ಮೇವು ಹಾಗೂ ನೀರಿಗಾಗಿ ಅಲೆಯುವಂತಾಗಿದೆ. ನೆರಳಿಗಾಗಿ ಮರಗಳನ್ನು ಆಶ್ರಯಿಸುವಂತಾಗಿದೆ.

ಬೇಸಿಗೆಯಿಂದಾಗಿ ಜಮೀನುಗಳಲ್ಲಿ ಹಸಿ ಮೇವಾಗಲಿ ಅಥವಾ ಒಣ ಮೇವು ಇಲ್ಲ. ಜತೆಗೆ ಈ ಭಾಗದಲ್ಲಿ ಬಹಳಷ್ಟು ರೈತರು ಹತ್ತಿಯನ್ನು ಬೆಳೆದಿರುವುದರಿಂದ ಜಾನುವಾರುಗಳಿಗೆ ಮೇವು ಇಲ್ಲದಂತಾಗಿದೆ. ಇದರಿಂದಾಗಿ ಮೇವಿಗಾಗಿ ಜಿಲ್ಲಾ ಮುಖ್ಯ ರಸ್ತೆಗಳ ಬದಿಯಲ್ಲಿ ಬಿದ್ದಿರುವ ಕಸಕಡ್ಡಿ ಹಾಗೂ ಜಮೀನುಗಳಲ್ಲಿ ಒಣ ಮೇವಿಗಾಗಿ ಹಾಗೂ ನೀರಿಗಾಗಿ ಅಲೆಯುವಂತಾಗಿದೆ.

ತಾಲ್ಲೂಕಿನ ವ್ಯಾಪ್ತಿಯಲ್ಲಿ ಸತತ ಬರಗಾಲ ಇದ್ದು, ಪಶುಪಾಲನಾ ಇಲಾಖೆಯ ವತಿಯಿಂದ ತಾಲ್ಲೂಕಿನ ಗೋನಾಲ ಹಾಗೂ ನಾಯ್ಕಲ್ ಗ್ರಾಮಗಳಲ್ಲಿ ಜಾನುವಾರುಗಳಿಗಾಗಿ ಮೇವು ಬ್ಯಾಂಕ್‌ಗಳನ್ನು ಸ್ಥಾಪನೆ ಮಾಡಲಾಗಿತ್ತು. ಈ ವರ್ಷ ಸಹ ತಾಲ್ಲೂಕಿನಲ್ಲಿ ಬರಗಾಲ ಆವರಿಸಿದ್ದು, ಸರ್ಕಾರವು ಬರಪಿಡಿತ ತಾಲ್ಲೂಕು ಎಂದು ಘೋಷಣೆ ಮಾಡಿದೆ. ಆದರೆ ಪಶುಪಾಲನಾ ಇಲಾಖೆಯ ವತಿಯಿಂದ ಮೇವು ಬ್ಯಾಂಕ್‌ ಹಾಗೂ ನೀರಿನ ತೊಟ್ಟಿಗಳಲ್ಲಿ ನೀರಿನ ವ್ಯವಸ್ಥೆಯನ್ನು ಈವರೆಗೆ ಮಾಡದಿರುವುದರಿಂದ ಜಾನುವಾರುಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.

 ತಾಲ್ಲೂಕಿನಲ್ಲಿ ಮೇವು ನೀರಿಗೆ ಬಹಳಷ್ಟು ಬರವಿದ್ದು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತಾಲ್ಲೂಕಿನ ವ್ಯಾಪ್ತಿಯಲ್ಲಿ ಜಾನುವಾರುಗಳಿಗಾಗಿ ಮೇವು ಹಾಗೂ ನೀರಿನ ತೊಟ್ಟಿಗಳಲ್ಲಿ ನೀರಿನ ವ್ಯವಸ್ಥೆಯನ್ನು ಮಾಡಲು ಕ್ರಮಗಳನ್ನು ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಬಿಸಿಲಿನ ಪ್ರಖರತೆಯಿಂದಾಗಿ ಹಳ್ಳಕೊಳ್ಳ ಹಾಗೂ ಕೆರೆಗಳಲ್ಲಿ ನೀರು ಬತ್ತಿದ್ದು ಜಾನುವಾರುಗಳಿಗೆ ನೀರಿನ ಸಮಸ್ಯೆಯಾಗಿದೆ. ಆದಷ್ಟು ಬೇಗ ನೀರಿನ ತೊಟ್ಟಿಗಳನ್ನು ತುಂಬಿಸುವ ಕೆಲಸವಾದರೆ ಅನುಕೂಲವಾಗುತ್ತದೆ
ಶರಣಪ್ಪ ಜಡಿ, ಪ್ರಗತಿಪರ ರೈತ
ತಾಲ್ಲೂಕಿನ ವ್ಯಾಪ್ತಿಯಲ್ಲಿ 30 ವಾರಗಳಿಗಾಗುವಷ್ಟು ಮೇವನ್ನು ರೈತರು ಸಂಗ್ರಹಿಸಿದ್ದು ಸದ್ಯಕ್ಕೆ ಕೊರತೆಯಿಲ್ಲ. ಕೊಳವೆ ಬಾವಿಗಳು ಇರುವೆಡೆ ನೀರಿನ ತೊಟ್ಟಿಗಳನ್ನು ನಿರ್ಮಿಸಲು ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ
ರಾಜು ದೇಶಮುಖ, ಉಪನಿರ್ದೇಶಕರು ಪಶುಪಾಲನಾ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT