ಹುಣಸಗಿ: ‘ಕಳೆದ ಎರಡು ದಿನಗಳಿಂದ ತಾಲ್ಲೂಕಿನ ಹಳ್ಳಿಗಳ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಜಲ ಮೂಲಗಳಿಗೆ ಜೀವಕಳೆ ಬಂದಂತಾಗಿದೆ.
ಕಳೆದ ಮೂರು ತಿಂಗಳಿನಿಂದಲೂ ಬಿಸಿಲಿನ ಪ್ರಖರತೆಯಿಂದಾಗಿ ಬತ್ತಿ ಹೋಗಿದ್ದ ಹಳ್ಳಗಳಿಗೆ ಈ ಮಳೆ ಕಳೆ ತಂದಿದ್ದು, ಗ್ರಾಮೀಣ ಭಾಗದ ದನಕರುಗಳಿಗೆ ಆಸರೆಯಾಗಿದೆ.
ತಾಲ್ಲೂಕಿನ ವಜ್ಜಲ ಕಲ್ಲದೇವನಹಳ್ಳಿ, ಹೆಬ್ಬಾಳ ಭಾಗದಲ್ಲಿ ಮಳೆಯಾಗಿದ್ದರಿಂದಾಗಿ ಹುಣಸಗಿ ದೇವಪುರ ಹಿರೇಹಳ್ಳ ತುಂಬಿ ಹರಿಯುತ್ತಿದೆ. ಇದರಿಂದಾಗಿ ಹೆಬ್ಬಾಳ.ಕೆ ಗ್ರಾಮದ ಬಳಿ ರಸ್ತೆ ಮಾರ್ಗದ ಸೇತುವೆ ಮೇಲೆ ನೀರು ನುಗ್ದಿದ್ದು, ಕೆಲ ಕಾಲ ಸಂಚಾರ ಸ್ಥಗಿತವಾಗಿತ್ತು.
‘ಹಳ್ಳದ ಬದಿಯಲ್ಲಿ ಅಳವಡಿಸಲಾಗಿದ್ದ, ಕೃಷಿ ಪಂಪ್ಸೆಟ್ ಮೊಟಾರುಗಳು ನೀರಿನಲ್ಲಿ ಮುಳುಗಿದ್ದು, ಹಳ್ಳದ ಪಕ್ಕದಲ್ಲಿರುವ ಭತ್ತದ ಗದ್ದೆಗಳಿಗೆ ನೀರು ನುಗ್ಗಿವೆ’ ಎಂದು ಗ್ರಾಮದ ನಿಂಗು ಪಾಟೀಲ ತಿಳಿಸಿದರು.
ಮಳೆಯಾಶ್ರಿತ ಪ್ರದೇಶದ ಗ್ರಾಮಗಳಾದ ಬರದೇವನಾಳ, ಬಪ್ಪರಗಿ, ಹೊರಟ್ಟಿ, ಮದಲಿಂಗನಾಳ, ಶ್ರೀನಿವಾಸಪುರ, ಗುಂಡಲಗೇರಾ, ಅಮಲಿಹಾಳ, ಕರಿಬಾವಿ, ಮತ್ತಿತರ ಗ್ರಾಮಗಲ್ಲಿರುವ ರೈತರು ತಮ್ಮ ಕೃಷಿ ಚಟುವಟಿಗಕೆಗಳಲ್ಲಿ ತೊಡಗಿಕೊಂಡಿದ್ದಾರೆ.
ಈಗಾಗಲೇ ಬಹುತೇಕ ರೈತರು ಮುಂಗಾರು ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದರು. ಸಕಾಲಕ್ಕೆ ಮಳೆಯಾಗಿದ್ದರಿಂದಾಗಿ ತೊಗರಿ ಹಾಗೂ ಹತ್ತಿ ಬಿತ್ತನೆಯಲ್ಲಿ ಮುಂದಾಗಿರುವುದಾಗಿ ಗುಂಡಲಗೇರಾ ಗ್ರಾಮದ ರೈತ ಶಾಂತಗೌಡ ಕವಿತಾಳ ಹಾಗೂ ಮಂಜಲಾಪುರ ಹಳ್ಳಿ ಗ್ರಾಮದ ರೈತ ಪರಮಣ್ಣ ನೀಲಗಲ್ಲ ತಿಳಿಸಿದರು.