ಯಾದಗಿರಿ: ನಗರದ ಶಾಸಕರ ಜನಸಂಪರ್ಕ ಕಚೇರಿ ಪಕ್ಕದಲ್ಲಿ ಮಂಗಳವಾರ ಮುದ್ನಾಳ ಅಭಿಮಾನಿ ಬಳಗದಿಂದ ಉಚಿತ ಕುಡಿಯುವ ನೀರಿನ ಅರವಟಿಗೆ ಚಾಲನೆ ನೀಡಲಾಯಿತು.
ಈ ವೇಳೆ ಮಾತನಾಡಿದ ಹೆಡಗಿಮದ್ರಾದ ಪೀಠಾಧಿಪತಿ ಶಾಂತ ಮಲ್ಲಿಕಾರ್ಜುನ ಪಂಡಿತಾರಾಧ್ಯ ಸ್ವಾಮೀಜಿ, ಬೇಸಿಗೆ ಹೆಚ್ಚುತ್ತಿದ್ದು ಬಾಯಾರಿಕೆ ನೀಗಲು ನೀರು ಅವಶ್ಯ. ಸಾರ್ವಜನಿಕರು ವಿವಿಧ ಕೆಲಸ ಕಾರ್ಯಗಳಿಗೆ ನಗರಕ್ಕೆ ಬರುತ್ತಾರೆ. ಅವರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿರುವುದು ಶ್ಲಾಘನೀಯ ಎಂದರು.
ಈ ಬಾರಿ ಬಿಸಿಲಿನ ಪ್ರಖರತೆ ಹೆಚ್ಚಿದ್ದು, ಜನತೆ ತಂಪಾದ ಪಾನೀಯಗಳಿಗೆ ಮೊರೆ ಹೋಗುವಂತಾಗಿದೆ ಎಂದರು.
ಗ್ರಾಮೀಣ ಭಾಗದಿಂದ ನಗರಕ್ಕೆ ಬರುವ ಜನತೆಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಮುದ್ನಾಳ ಅಭಿಮಾನಿಗಳು ಉತ್ತಮ ಕಾರ್ಯ ಮಾಡಿದ್ದಾರೆ. ಜಲದಾನ ಅತ್ಯಂತ ಶ್ರೇಷ್ಠ ಕಾರ್ಯ. ಅರವಟಿಗೆಯಿಂದ ಬಡ ವರ್ಗದ ಜನತೆಗೆ ಸಹಾಯವಾಗಲಿದೆ. ಅಲ್ಲದೆ ಈ ಪ್ರದೇಶದ ಸುತ್ತಮುತ್ತ ಬ್ಯಾಂಕ್, ಆಸ್ಪತ್ರೆ ಮತ್ತು ಸರ್ಕಾರಿ ಕಚೇರಿಗಳು ಇರುವುದರಿಂದ ಸಾಕಷ್ಟು ಪ್ರಯೋಜನವಾಗಲಿದೆ ಎಂದು ಹೇಳಿದರು.