ಸುರಪುರ: ‘ರಾಜನಹಳ್ಳಿಯಲ್ಲಿ ನಡೆಯುವ ವಾಲ್ಮೀಕಿ ಜಾತ್ರೆಯಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಜಾತ್ರೆಯಿಂದ ಸಮಾಜದ ಸಂಘಟನೆ ಸಾಧ್ಯವಾಗುತ್ತದೆ’ ಎಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದರು.
ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಬುಧವಾರ ನಡೆದ ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
‘ಜಾತ್ರೆಯಲ್ಲಿ ಸಮಾಜದ ಸಚಿವರು, ಅಧಿಕಾರಿಗಳು, ಮುಖಂಡರು ಭಾಗವಹಿಸುವುದರಿಂದ ನಮ್ಮ ಬೇಡಿಕೆಗಳಿಗೆ ಸ್ಪಂದನೆ ಸಿಗುತ್ತದೆ. ಸಮಾಜವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಸಹಕಾರಿಯಾಗುತ್ತದೆ’ ಎಂದರು.
ಜಾತ್ರಾ ಸಮಿತಿಗೆ ಸುರಪುರ ತಾಲ್ಲೂಕು ಘಟಕದ ಅಧ್ಯಕ್ಷರನ್ನಾಗಿ ಅಯ್ಯಣ್ಣ ಹಾಲಭಾವಿ ಅವರನ್ನು ಆಯ್ಕೆ ಮಾಡಿ ಅವರನ್ನು ಸನ್ಮಾನಿಸಲಾಯಿತು.
ಆರ್ಚರಿಯಲ್ಲಿ ಸಾಧನೆ ಮಾಡಿದ ಸಮಾಜದ ಕ್ರೀಡಾಪಟುಗಳನ್ನು ಗೌರವಿಸಲಾಯಿತು. ತಾಲ್ಲೂಕಿನ ಕಕ್ಕೇರಾದಲ್ಲಿ ಡಿ.10ರಂದು ಏರ್ಪಡಿಸಿರುವ ವಾಲ್ಮೀಕಿ ಮೂರ್ತಿ ಅನಾವರಣ ಕಾರ್ಯಕ್ರಮದ ಪೋಸ್ಟರ್ಗಳನ್ನು ಬಿಡುಗಡೆ ಮಾಡಲಾಯಿತು.
ಮುಖಂಡರಾದ ರಾಜಾ ಮುಕುಂದನಾಯಕ, ರಾಜಾ ಪಿಡ್ಡನಾಯಕ ತಾತಾ, ಗಂಗಾಧರನಾಯಕ ತಿಂಥಣಿ, ರಮೇಶ ದೊರೆ ಆಲ್ದಾಳ, ವೆಂಕಟೇಶ ಬೇಟೆಗಾರ, ಅನೀಲ ಇಟ್ಟಂಗಿ, ಚಂದ್ರಶೇಖರ ಬಿಚಗತ್ತಗೇರಿ, ಭೀಮನಗೌಡ ಹೆಮನೂರ, ಶ್ರೀಧರನಾಯಕ, ಶರಣುನಾಯಕ ಭೈರಿಮರಡಿ, ಭೀಮಣ್ಣ ಮಿಲ್ಟ್ರಿ, ವೆಂಕಟೇಶ ಗುಡ್ಡಕಾಯಿ ಇದ್ದರು.