ಸುರಪುರ: ನಾರಾಯಣಪುರ ಎಡದಂಡೆ ಕಾಲುವೆಗೆ ನಿರಂತರ ನೀರು ಹರಿಸಬೇಕು ಹಾಗೂ ರೈತರ ಪಂಪ್ಸೆಟ್ಗಳಿಗೆ ಸಮರ್ಪಕ ವಿದ್ಯುತ್ ಕಲ್ಪಿಸಬೇಕು ಎಂದು ಆಗ್ರಹಿಸಿ ತಾಲ್ಲೂಕಿನ ದೇವಪುರ ಕ್ರಾಸ್ನಲ್ಲಿ ಗುರುವಾರ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ನೂರಾರು ರೈತರು ರಸ್ತೆ ತಡೆ ನಡೆಸಿದರು.
ಎರಡು ಗಂಟೆಗೂ ಅಧಿಕ ಸಮಯ ರಸ್ತ ತಡೆ ನಡೆಸಿದ್ದರಿಂದ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಇದರಿಂದ ದೂರದ ಪ್ರಯಾಣಿಕರು ಪರದಾಡಿದರು. ಸುಡು ಬಿಸಿಲಿನನ್ನು ಲೆಕ್ಕಿಸಿದೆ ರೈತರು ರಸ್ತೆ ಮೇಲೆ ಕುಳಿತು ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು.
ಸಂಘದ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ ಚಿನ್ನಾಕಾರ ಮಾತನಾಡಿ, ‘ಬರಗಾಲದ ಹೊಡೆತಕ್ಕೆ ಸಿಲುಕಿ ರೈತರು ನಲುಗಿ ಹೋಗಿದ್ದಾರೆ.
ಲುವೆಗಳಿಗೆ ಸರಿಯಾಗಿ ನೀರು ಹರಿಸುತ್ತಿಲ್ಲ. ಇತ್ತ ಹಳ್ಳ ಕೊಳ್ಳಗಳಿಂದಾಗಲಿ ಅಥವಾ ಕೊಳವೆಬಾವಿಗಳಿಂದಾಗಲಿ ನೀರು ಪಡೆಯಬೇಕೆಂದರೆ ಸರಿಯಾಗಿ ವಿದ್ಯುತ್ ಸಿಗುತ್ತಿಲ್ಲ’ ಎಂದು ಆರೋಪಿಸಿದರು.
‘ಕಾಲುವೆಗೆ ಮಾರ್ಚ್ 28ರ ವರೆಗೆ ಮಾತ್ರ ನೀರು ಹರಿಸಲು ನೀರಾವರಿ ಸಲಹಾ ಸಮಿತಿ ತೆಗೆದುಕೊಂಡಿರುವ ನಿರ್ಧಾರ ಅವೈಜ್ಞಾನಿಕವಾಗಿದೆ. ಕಾಲುವೆ ನೀರು ಸ್ಥಗಿತಗೊಳಿಸದರೆ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತದೆ. ಭತ್ತ, ಸಜ್ಜಿ ಕಾಳುಕಟ್ಟುವ ಹಂತದಲ್ಲಿದೆ. ಶೇಂಗಾ, ಹತ್ತಿ. ಮೆಣಸಿನಕಾಯಿ ಬಾಡುತ್ತಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಜಲಾಶಯದಲ್ಲಿ ಸಾಕಷ್ಟು ನೀರು ಸಂಗ್ರಹವಿದ್ದರು ಕಾಲುವೆಗಳಿಗೆ ನೀರು ಹರಿಸದಿರುವುದು ಯಾವ ನ್ಯಾಯ, ಎರಡೂ ಬೆಳೆಗೆ ನೀರು ಕೊಡುತ್ತೇವೆ ಎಂದು ನೀಡಿದ್ದ ಭರವಸೆ ಮೇರೆಗೆ ರೈತರು ಲಕ್ಷಾಂತರ ಹಣ ಖರ್ಚು ಮಾಡಿ ಹಿಂಗಾರು ಬೆಳೆ ಬಿತ್ತಿದ್ದಾರೆ. ಆದರೆ ಸರ್ಕಾರ ರೈತರ ಬದುಕಿನೊಂದಿಗೆ ಚಲ್ಲಾಟವಾಡುತ್ತಿದೆ’ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
‘ಹಿಂಗಾರು ಬೆಳೆ ರೈತರ ಕೈಗೆ ಬರಬೇಕಾದರೆ ಏ. 15 ರವರೆಗೆ ನೀರಿನ ಅಗತ್ಯವಿದೆ. ಇತರ ಜಲಮೂಲಗಳಿಂದ ನೀರು ಪಡೆದುಕೊಳ್ಳಲು ರೈತರ ಪಂಪಸೆಟ್ಗಳಿಗೆ ನಿರಂತರವಾಗಿ ತ್ರಿಫೇಸ್ ವಿದ್ಯುತ್ ನೀಡಬೇಕು. ದೇವಪುರ ಜೆಸ್ಕಾಂ ಉಪ ಕಚೇರಿ ಆರಂಭಿಸಬೇಕು. ಹಾನಿಗೊಳಗಾದ ರೈತರಿಗೆ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು. ಸಂಪೂರ್ಣ ಸಾಲ ಮನ್ನಾ ಮಾಡಬೇಕು’ ಎಂದು ಆಗ್ರಹಿಸಿದರು.
ರ್ಭದಲ್ಲಿ ತಹಶೀಲ್ದಾರ್ ಸುರೇಶ ಅಂಕಲಗಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಸಂಘದ ತಾಲೂಕು ಘಟಕದ ಗೌರವಾಧ್ಯಕ್ಷ ನಂದಣ್ಣ ವಾರಿ, ಅಧ್ಯಕ್ಷ ಧರ್ಮಣ್ಣ ದೊರೆ, ಪ್ರಮುಖರಾದ ಸಿದ್ದಲಿಂಗಪ್ಪ ವಗ್ಗಾ, ದೇವಿಂದ್ರಪ್ಪ ಗುತ್ತಿ, ರಾಮಕೃಷ್ಣ, ದೇವಿಂದ್ರ ಬಾಕ್ಲಿ, ಚನ್ನಪ್ಪ ಅರಳಳ್ಳಿ, ಶಿವಲಿಂಗಪ್ಪ ತಿಪ್ಪಣ್ಣ, ರಾಘವೇಂದ್ರ, ಗೋಪಾಲ ಇದ್ದರು.
**
ರಾಜ್ಯ ಸರ್ಕಾರ ಏ. 15 ರವರೆಗೆ ಕಾಲುವೆಗೆ ನೀರು ಹರಿಸಿ ನೆರವಿಗೆ ಬರದಿದ್ದರೆ ರೈತರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ
-ಧರ್ಮಣ್ಣ ದೊರೆ,
ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.