ಯಾದಗಿರಿ: ಜಿಲ್ಲೆಯಲ್ಲಿ ಕೃಷ್ಣಾ–ಭೀಮಾ ನದಿಗಳಿಗೆ ಅಡ್ಡಲಾಗಿ ನಿರ್ಮಾಣಗೊಂಡಿ ರುವ ಬಾಂದಾರಗಳು ಅಂತರ್ಜಲ ವೃದ್ಧಿಗೆ ಹೆಚ್ಚು ಸಹಕಾರಿಯಾಗಿದ್ದರೂ, ಜಿಲ್ಲೆಯಲ್ಲಿ ನೀರಾವರಿಗೆ ನೆರವಾಗುವುದ ರೊಂದಿಗೆ ಜನರ ತಲಾದಾಯವನ್ನೂ ಹೆಚ್ಚಿಸಿವೆ. ಜಿಲ್ಲೆಯ ‘ಶಹಾಪುರ’ ಒಂದಷ್ಟು ವಾಣಿಜ್ಯ ನಗರವಾಗಿ ಗುರುತಿಸಿಕೊಂಡಿ ರುವುದು ಬಿಟ್ಟರೆ, ಸುರಪುರ, ಯಾದಗಿರಿ ತಾಲ್ಲೂಕುಗಳಲ್ಲಿ ಜನರ ಜೀವನಮಟ್ಟ ಸಾಧಾರಣವಾಗಿದೆ.
ಬೇಸಿಗೆಯಲ್ಲಿ ಭೀಮಾ ಮತ್ತು ಕೃಷ್ಣೆಯ ಒಡಲು ಬತ್ತುತ್ತಿದ್ದಂತೆ ಇಲ್ಲಿನ ಜನರ ಜೀವನಾಡಿ ಮಿಡಿತದಲ್ಲೂ ಏರಿಳಿತವಾಗುತ್ತಿತ್ತು. ನದಿಗಳಿದ್ದರೂ, ನೀರಿನ ಹಾಹಾಕಾರ ನಿಂತಿರಲಿಲ್ಲ. ಅಂತರ್ಜಲ ಪಾತಾಳ ಸೇರುತ್ತಿತ್ತು. ಇಂಥ ಸ್ಥಿತಿಯಲ್ಲಿ ಜನರು ಗುಳೆ ಆಯ್ದುಕೊಳ್ಳುತ್ತಾ ಬಂದಿದ್ದಾರೆ. ಹಲವು ವರ್ಷಗಳೆ ಕಳೆದರೂ ಹೊಲಗಳತ್ತ ಹೆಜ್ಜೆ ಹಾಕುತ್ತಿ ರಲಿಲ್ಲ. ಒಂದಷ್ಟು ಮಳೆ ಹನಿದಾಗ ಹೊಲಗಳತ್ತ ಹೆಜ್ಜೆ ಹಾಕಿದರೆ ಹೊಲ ಗಳಲ್ಲಿ ದಟ್ಟಜಾಲಿ ಬೆಳೆದಿರುತ್ತಿತ್ತು. ಅದನ್ನು ಸ್ವಚ್ಛಗೊಳಿಸಿ ಬೆಳೆ ಬೆಳೆಯು ವುದು ಅಸಾಧ್ಯ ಅನಿಸುತ್ತಿತ್ತು. ‘ಗುಳೆ’ ತಪ್ಪಿದ್ದಲ್ಲ ಎಂದುಕೊಂಡು ನಗರಗಳತ್ತ ಮುಖ ಮಾಡುತ್ತಿದ್ದರು.
ಆದರೆ, ಪರಿಸ್ಥಿತಿ ಈಗ ಭಿನ್ನವಾಗಿದೆ. ಬಾಂಬೆ, ಬೆಂಗಳೂರು, ಹೈದರಾಬಾದ್ ಅನ್ನ ನೀಡುವ ನೆಲ ಎಂದುಕೊಂಡವರೆಷ್ಟೋ ಜನ ಈಗ ಬಾಂದಾರಗಳು ನಿರ್ಮಾಣದ ಮೇಲೆ ಹೊಲದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಒಣಬೇಸಾಯ ಪ್ರದೇಶಗಳು ಕೊಳವೆಬಾವಿಗಳಿಂದ ಹಸಿರಾಗಿವೆ. ಇದರಿಂದಾಗಿ ಶಹಾಪುರ ತಾಲ್ಲೂಕಿನ ತಲಾದಾಯ ₹58,599 ಸಾವಿರ ಸುರಪುರ ತಾಲ್ಲೂಕಿನ ತಲಾದಾಯ ₹40,675 ಸಾವಿರ ಹಾಗೂ ಯಾದಗಿರಿ ತಾಲ್ಲೂಕಿನ ತಲಾದಾಯ ₹35,020 ಸಾವಿರದಷ್ಟು ಹೆಚ್ಚಿದೆ ಎಂಬುದಾಗಿ ಜಿಲ್ಲಾ ಮಾನವ ಅಭಿವೃದ್ಧಿ ಸೂಚ್ಯಂಕ ವರದಿ ತಿಳಿಸುತ್ತದೆ.
ನದಿಪಾತ್ರದಿಂದ ದೂರ ಇರುವ ಗುರುಮಠಕಲ್ ಭಾಗದಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟಿತ್ತು. ಕುಡಿಯುವ ಹನಿ ನೀರಿಗೂ ತತ್ವಾರ ಉಂಟಾಗುತ್ತಿತ್ತು. ವರ್ಷಪೂರ್ತಿ ಇಲ್ಲಿನ ಜನರು ಹೈದರಾಬಾದ್ನತ್ತ ಇಲ್ಲಿನ ಜನ ಮುಖ ಮಾಡುತ್ತಿದ್ದರು. ಆದರೆ, ಗುರುಮಠಕಲ್ ಮತಕ್ಷೇತ್ರ ನೀರಾವರಿ ಪ್ರದೇಶವಾಗಿ ಮಾರ್ಪಡದಿದ್ದರೂ, ಬಾಂದಾರಗಳು ಇಲ್ಲಿನ ಜನರ ದಾಹ ನೀಗಿಸಿವೆ. ಸನ್ನತಿ ಬಾಂದಾರದಿನಿಂದ ಈಗಾಗಲೇ 55 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಗೆ ಚಾಲನೆ ಸಿಕ್ಕಿರುವುದು ಜನರಲ್ಲಿ ಮಂದಹಾಸ ಮೂಡಿಸಿದೆ. ಆದರೆ, ತ್ವರಿತಗತಿಯಲ್ಲಿ ಕಾಮಗಾರಿ ಆರಂಭ ಗೊಳ್ಳಬೇಕಿದೆ. ಒಟ್ಟಾರೆ ಬಾಂದಾರ ಗಳಿಂದ ಗುರುಮಠಕಲ್ ಜನರ ಬದುಕಿನ ಚಿತ್ರಣ ಬದಲಾವಣೆಯತ್ತ ಸಾಗಿದೆ.
ಅಂತರ್ಜಲಮಟ್ಟ ವೃದ್ಧಿ: ಯಾದಗಿರಿ ತಾಲ್ಲೂಕಿನಲ್ಲಿ ನಿರ್ಮಾಣ ಆಗಿರುವ ಗುರ ಸಣಗಿ ಬ್ಯಾರೇಜ್ನಲ್ಲಿ ಒಟ್ಟು1ಟಿಎಂಸಿ, ಕೌಳೂರು ಬಾಂದಾರದಲ್ಲಿ1/2 ಟಿಎಂಸಿ, ಹಿರೇನೂರು ಬಾಂದಾರದಲ್ಲಿ 1/2 ಟಿಎಂಸಿ, ಗೂಡೂರು ಬಾಂದಾರದಲ್ಲಿ 1 ಟಿಎಂಸಿ ನೀರು ಸಂಗ್ರಹಗೊಳ್ಳುತ್ತದೆ. ತಾಲ್ಲೂಕಿನ ಭೂಭಾಗದಲ್ಲೇ ಒಟ್ಟಾರೆ 3ಟಿಎಂಸಿ ನೀರು ಸಂಗ್ರಹವಾಗುವು ದರಿಂದ ಬೇಸಿಗೆಯಲ್ಲಿ ನೀರಿನ ಹಾಹಾ ಕಾರ ತಪ್ಪಿದೆ. ಕುಸಿದಿದ್ದ ಅಂತರ್ಜಲಮಟ್ಟ ಕೂಡ ವೃದ್ಧಿಸಿದ್ದು, ಈಗ ಬೋರ್ವೆಲ್ ಕೊರೆಯಿಸಿದರೆ 40ರಿಂದ 50 ಅಡಿ ಮೇಲ್ಭಾಗದಲ್ಲಿಯೇ ನೀರು ಸಿಗುತ್ತಿದೆ ಎನ್ನುತ್ತಾರೆ ಇಲ್ಲಿನ ರೈತರಾದ ನಾಗಪ್ಪ ಮಾಲೀಪಾಟೀಲ, ಈಶ್ವರ ನಾಯಕ್.
ಸನ್ನತಿ ಬಾಂದಾರ ವರದಾನ
ಜಿಲ್ಲೆಯ ಹುರಸಗುಂಡಗಿ ಗ್ರಾಮದ ಬಳಿ ಭೀಮಾ ನದಿಗೆ ಅಡ್ಡಲಾಗಿ ಸನ್ನತಿ ಬಾಂದಾರ ನಿರ್ಮಾಣ ಆಗಿದೆ. 2003ರಲ್ಲಿ ಈ ಯೋಜನೆಗೆ ಚಾಲನೆ ನೀಡಲಾಯಿತಾದರೂ, ಕಾಮಗಾರಿ ಮಾತ್ರ 2005ರಿಂದಲೇ ಆರಂಭಗೊಂಡಿತು. ಇದು ಒಟ್ಟು 4 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ₹18.70 ಕೋಟಿ ಅಂದಾಜು ಮೊತ್ತಕ್ಕೆ ನಿಗದಿಯಾಗಿದ್ದ ಕಾಮಗಾರಿ ಈಗ ₹71.13ಕೋಟಿಗೆ ತಲುಪಿದೆ. ಇದರಿಂದ ಒಟ್ಟು 5,400 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಲಭಿಸಲಿದೆ.
ಬಾಂದಾರದ ಹಿನ್ನೀರಿನಿಂದ ತಾಲ್ಲೂಕಿನ ಶಿರವಾಳ 271, ಅಣಬಿ, ರೋಜಾ 169, ನಾಯ್ಕಲ್ 72, ಯಾದಗಿರಿ 10,000 ಸಾವಿರ, ಗುರುಮಠಕಲ್ 9,000 ಎಕರೆ ನೀರಾವರಿಗೆ ಇದರಿಂದ ನೀರು ಹರಿಸಬೇಕಾಗಿದೆ. ಜಿಲ್ಲೆಗೆ ಶಾಶ್ವತ ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಸನ್ನತಿ ಬಾಂದಾರ ಸದುಪಯೋಗದ ಯೋಜನೆಗಾಗಿ ಸರ್ಕಾರಕ್ಕೆ ಪ್ರಸ್ತಾವ ಹೋಗಿದೆ ಎನ್ನುತ್ತಾರೆ ಶಾಸಕ ಡಾ.ಎ.ಬಿ.ಮಾಲಕರೆಡ್ಡಿ.
ಗುರಸಣಗಿ ಬಾಂದಾರ ವಿವರ
* ಬಾಂದಾರದ ಒಟ್ಟು ಉದ್ದ 425 ಮೀಟರ್
* ಯೋಜನೆಯ ಅಂದಾಜು ವೆಚ್ಚ ₹15ಕೋಟಿ
* ಯೋಜನೆಗೆ ಆದ ವೆಚ್ಚ ₹22.81ಕೋಟಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.