ಸೇಡಂ: `ಗಾಂಧೀಜಿಯಂತಹ ಕಾಂತ್ರಿಕಾರಿ ಶಕ್ತಿ, ಶಿವಾಜಿಯಂತಹ ವೀರತನ ಹುಟ್ಟಲು ಅವರ ತಾಯಂದಿರೇ ಕಾರಣರಾಗಿದ್ದಾರೆ. ಹೆಣ್ಣಿಲ್ಲದ ಮನುಕುಲ, ಮಣ್ಣಿಲ್ಲದ ಬರಡು ಭೂಮಿಯಂತೆ' ಎಂದು ಹಾಲಪ್ಪಯ್ಯ ಮಠದ ಪಂಚಾಕ್ಷರಿ ಸ್ವಾಮೀಜಿ ಹೇಳಿದ್ದಾರೆ.
ಇಲ್ಲಿನ ಶ್ರೀ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ, ಶಿವಶರಣೆ ಅಕ್ಕ ಮಹಾದೇವಿ ಕಲಾಮಂಡಳಿ ಆಯೋಜಿಸಿದ್ದ ಜಾನಪದ ಸಂಗೀತ ಸಂಗ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರೊ. ಶೋಭಾದೇವಿ ಚಕ್ಕಿ ಮಾತನಾಡಿ, `ಜಾನಪದ ಹಾಡುಗಳು ಸತ್ವ ಹಾಗೂ ತತ್ವಭರಿತವಾಗಿದ್ದು, ಕೌಟುಂಬಿಕ ಸಂಬಂಧಗಳು ಹಾಗೂ ಇತಿಹಾಸದ ಪುರಾಣಗಳ ಹಾಡುಗಳನ್ನು ಜಾನಪದದಲ್ಲಿ ಕಾಣಬಹುದು' ಎಂದರು.
ಖ್ಯಾತ ಸಂಗೀತ ಕಲಾವಿದೆ ಪದ್ಮಾ ಎಸ್. ಸವಾಯಿ, `ಸಂಗೀತ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ದೇವರ ಭಜನೆ ಮಾಡಲು ವಯಸ್ಸಿನ ನಿರ್ಬಂಧವಿಲ್ಲ' ಎಂದರು. ಮಹಾದೇವಿ ಎಸ್. ನೀಲಂಗಿ, ಸುನಿತಾ ಪಿ. ಕುಲಕರ್ಣಿ ಮಾತನಾಡಿದರು.
ಸನ್ಮಾನ: ಹಿರಿಯ ಸಂಗೀತ ಕಲಾವಿದ ಮಲ್ಲಿಕಾರ್ಜುನ ಸಂಗಾವಿ, ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದ ಸುಗಂಧಾ ಎಸ್. ಕುಕ್ಕುಂದಾ ಅವರನ್ನು ಸನ್ಮಾನಿಸಲಾಯಿತು. ಆಕಾಶವಾಣಿ ಕಲಾವಿದರಾದ ಮನೋಹರ್ ಆರ್. ವಿಶ್ವಕರ್ಮ, ಶ್ರೀಶೈಲ ವಿಶ್ವಕರ್ಮ, ವಿಜಯಲಕ್ಷ್ಮೀ ಕೆಂಗನಾಳ, ಕು. ಅಂಜನಾ ಭೋವಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಸಾಹಿತಿ ವೀರಯ್ಯಸ್ವಾಮಿ ಮಠಪತಿ, ಖ್ಯಾತ ಸಂಗೀತ ಕಲಾವಿದ ಶ್ರೀನಿವಾಸ ಸವಾಯಿ, ಶಾರದಾ ಪಾಟೀಲ, ಶ್ರೀಶೈಲ ರುದನೂರ, ಸಿದ್ದಪ್ಪ ನೀಲಂಗಿ ಇದ್ದರು.