ಕೊಟ್ಟೂರು: ಶುಕ್ರವಾರ ಇಲ್ಲಿ ವಿಜೃಂಭಣೆಯಿಂದ ನಡೆದ ಕೊಟ್ಟೂರೇಶ್ವರ ರಥೋತ್ಸವದಲ್ಲಿ ಲಕ್ಷಾಂತರ ಜನರು ಪಾಲ್ಗೊಂಡಿದ್ದರು.
ಮಠದಿಂದ ಹೊರಟ ಕರಡಿ ಮೇಳ, ನಂದಿಕೋಲು, ಡೊಳ್ಳು ಮೇಳ ಮುಂತಾದ ಕಲಾಮೇಳಗಳು ಪಾಲ್ಗೊಂಡು ಮೆರವಣಿಗೆಗೆ ಮೆರಗು ನೀಡಿದವು. ಅಲಂಕೃತ ಪಲ್ಲಕ್ಕಿಯಲ್ಲಿ ಹೊರಟ ಕೊಟ್ಟೂರೇಶ್ವರ ಸ್ವಾಮಿ, ಸಂಪ್ರದಾಯದಂತೆ ಹರಿಜನ ಕರಿಯಮ್ಮಳ ಆರತಿ ಸ್ವೀಕರಿಸಿ, ನಂತರ ರಥವೇರಿದ.
ಕೊಟ್ಟೂರೇಶ್ವರ ಸ್ವಾಮಿ ರಥ ಏರಿ ಮುಂದೆ ಸಾಗುತ್ತಿದ್ದಂತೆಯೇ ಭಕ್ತರು, ಬಾಳೆಹಣ್ಣು, ಉತ್ತತ್ತಿಯನ್ನು ರಥಕ್ಕೆ ಎಸೆಯುವ ಮೂಲಕ ಭಕ್ತಿಯನ್ನು ಸಮರ್ಪಿಸಿದರೆ, ಸಾವಿರಾರು ಭಕ್ತರು ರಥದ ಗಾಲಿಗೆ ತೆಂಗಿನಕಾಯಿ ಅರ್ಪಿಸಿದರು.
ರಾಜ್ಯದ ವಿವಿಧ ಭಾಗಗಳಿಂದ ಅಲ್ಲದೇ ನೆರೆಯ ರಾಜ್ಯಗಳ ಲಕ್ಷಾಂತರ ಜನರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಕೆಲವರು ಕಾಲ್ನಡಿಗೆಯಲ್ಲಿಯೇ ಕೊಟ್ಟೂರು ತಲುಪಿದ್ದಾರೆ.
`ಕೊಟ್ಟೂರು ದೊರೆಗೆ ಬಹುಪರಾಕ್, ಕೊಟ್ಟೂರೇಶ್ವರ ಮಹಾರಾಜ್ಗೆ ಜೈ....ಮುಂತಾದ ಜಯಘೋಷಗಳು ಮುಗಿಲು ಮುಟ್ಟಿದ್ದವು. ಗುರುವಾರ ಮತ್ತು ಶುಕ್ರವಾರ ನಿರಂತರವಾಗಿ ಪಾದಯಾತ್ರಿಗಳು ಕೊಟ್ಟೂರಿಗೆ ಆಗಮಿಸಿದಾಗ ಅವರನ್ನು ಸ್ವಾಗತಿಸಲಾಯಿತು. ದಾವಣಗೆರೆ ಭಾಗದಿಂದ ಈ ವರ್ಷ 40ರಿಂದ 50 ಸಾವಿರ ಪಾದಯಾತ್ರಿಗಳು ಆಗಮಿಸಿದ್ದರು.