ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ವೇಷಣಾ ಪ್ರವೃತ್ತಿಗೆ ಪ್ರಯೋಗ ತರಗತಿ

Last Updated 29 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ವಿಜ್ಞಾನದ ವಿಶೇಷವೆಂದರೆ ಅದು ಭೌತಿಕ ಜಗತ್ತಿನ ನಡೆಗಳಿಗೆ ಭೌತಿಕ ವಿವರಣೆಗಳನ್ನೇ ನಿರೀಕ್ಷಿಸುತ್ತದೆ. ವಿಜ್ಞಾನದ ವಿದ್ಯಾರ್ಥಿಗಳಿಗೆ ಮೀನಿಗಿಂತಲೂ ಸ್ವಲ್ಪವಾದರೂ ಹೆಚ್ಚಿಗೆ ‘ದ್ರವಬಲ ವಿಜ್ಞಾನ’ ತಿಳಿದಿರಬೇಕು ಎಂಬ ಮಾತಿದೆ! ಪಿ.ಯು.ಸಿ. ಹಂತದ ವಿಜ್ಞಾನ ಶಿಕ್ಷಣ ಒಂದು ಮಹತ್ತರ ಮಜಲೇ ಹೌದು. ಮುಂದೆ ವೈದ್ಯ, ಪಶುವೈದ್ಯ, ದಂತವೈದ್ಯ, ತಂತ್ರಜ್ಞಾನ, ಕೃಷಿ ಮುಂತಾದ ಕೋರ್ಸ್‌ಗಳಿಗೆ ಸೇರಿ ವೃತ್ತಿಪರರಾಗಬಹುದು. ಹಾಗಾಗಿ ಪಿ.ಯು.ಸಿ. ವಿದ್ಯಾಭ್ಯಾಸದ ಪ್ರತಿಯೊಂದು ತರಗತಿಯನ್ನೂ ಮಕ್ಕಳು ಅಸ್ಥೆಯಿಂದ ಪರಿಗಣಿಸಬೇಕು. ಇಷ್ಟಪಟ್ಟು ಆರಿಸಿಕೊಂಡ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ- ವಿಷಯ ಸಮೂಹದ ಬಗ್ಗೆ ಮುತುವರ್ಜಿ ವಹಿಸಿದಷ್ಟೂ ಭವಿತವ್ಯದಲ್ಲಿ ಯಶಸ್ಸು ಖಚಿತ.

ಈ ನಿಟ್ಟಿನಲ್ಲಿ ಪ್ರಯೋಗ ತರಗತಿಗಳ ಕುರಿತೂ ಹೆಚ್ಚು ಗಮನ ಕೊಡಬೇಕಾಗುತ್ತದೆ. ಪ್ರೌಢಶಾಲೆಯ ಶಿಕ್ಷಣ ತೆಗೆದುಕೊಂಡರೆ ವಿಜ್ಞಾನ ಬೋಧನೆಗೆ ಪೂರಕವಾಗಿ ಶಿಕ್ಷಕರು ತರಗತಿಯಲ್ಲಿ ಸಣ್ಣ ಪುಟ್ಟ ಪ್ರಯೋಗಗಳನ್ನು ಮಾಡಿ ಪ್ರಾತ್ಯಕ್ಷಿಕೆ ನೀಡುತ್ತಾರೆ. ಪ್ರತ್ಯೇಕವಾಗಿ ಪ್ರಾಕ್ಟಿಕಲ್ಸ್ ಅಥವಾ ಪ್ರಯೋಗ ತರಗತಿಗಳು ಇರುವುದಿಲ್ಲ. ಆದರೆ ಪಿ.ಯು.ಸಿ.ಯಿಂದ ಪ್ರಯೋಗ ತರಗತಿಗಳು ಆರಂಭವಾಗುತ್ತವೆ. ಪದವಿ, ಸ್ನಾತಕೋತ್ತರ ಪದವಿ, ಎಂ.ಬಿ.ಬಿ.ಎಸ್., ಬಿ.ಇ., ಬಿ.ವಿ.ಎಸ್.ಸಿ., ಬಿ.ಎಜಿ.ಗಳಲ್ಲಿ ಪ್ರಯೋಗ ತರಗತಿಗಳದ್ದೇ ಕಾರುಬಾರು.

ಆದರೆ ಪಿ.ಯು.ಸಿ.ಯಲ್ಲಿ ಪ್ರಯೋಗ ತರಗತಿಗಳು ಎಂದರೆ ಅದೇಕೋ ದಿವ್ಯ ಅನಾದರ! ದಿನದ ವೇಳಾಪಟ್ಟಿಯಲ್ಲಿ ಪ್ರಯೋಗ ತರಗತಿಗಳು ಮೊದಲಿರುತ್ತವೆ, ಇಲ್ಲವೆ ಕೊನೆಯಲ್ಲಿರುತ್ತವೆ. ಇದಕ್ಕೆ ಅಪವಾದಗಳಿಲ್ಲವೆಂದಲ್ಲ. ಅದೆಷ್ಟೊ ಶಾಲಾ ಕಾಲೇಜುಗಳಲ್ಲಿ ಅಗತ್ಯಕ್ಕೂ ಮೀರಿ ಸುಸಜ್ಜಿತವಾದ ಪ್ರಯೋಗಾಲಯಗಳಿರುತ್ತವೆ. ಮಾತ್ರವಲ್ಲ, ಆಗಾಗ ‘ಎಲ್ಲರಿಗೂ ವಿಜ್ಞಾನ’ ಕಾರ್ಯಕ್ರಮದ ಭಾಗವಾಗಿ ನಾಟಕ, ಹಾಡು–ಹಸೆ, ವಸ್ತು ಪ್ರದರ್ಶನಗಳು ಏರ್ಪಡುತ್ತವೆ. ಆದರೂ ‘ಪ್ರ್ಯಾಕ್ಟಿಕಲ್ ಕ್ಲಾಸ್‌ ತಾನೆ, ಬಿಡು’ ಎಂದು ಅಲಕ್ಷಿಸುವುದು ಸಾಮಾನ್ಯ. ಪರೀಕ್ಷೆಗಷ್ಟೇ ಪ್ರಯೋಗ ತರಗತಿಗಳು ಎನ್ನುವ ಇಂಗಿತದಿಂದ ಹೊರಬರದಿದ್ದರೆ ಹೆಸರಿಗಷ್ಟೇ ವಿಜ್ಞಾನ ಶಿಕ್ಷಣವಾದೀತು.

ವೈಜ್ಞಾನಿಕ ಅರಿವು

ಪ್ರಯೋಗ ತರಗತಿಯ ಉದ್ದೇಶ ವಿದ್ಯಾರ್ಥಿಗಳಲ್ಲಿ ಅನ್ವೇಷಣಾ ಪ್ರವೃತ್ತಿಯನ್ನು ಬಿತ್ತುವುದು. ವಿದ್ಯಾರ್ಥಿ ವಿಜ್ಞಾನಿಯಾಗಿ ಅಲ್ಲಿ ಜ್ಞಾನಕ್ರಿಯೆಯಲ್ಲಿ ತೊಡಗಬೇಕು. ನೋಡಿ ಕಲಿಯಬೇಕು, ಮಾಡಿ ಕಲಿಯಬೇಕು. ಈಗಾಗಲೇ ಸಾಬೀತಾಗಿರುವ ವೈಜ್ಞಾನಿಕ ಅರಿವನ್ನು ಖಾತರಿಪಡಿಸಿಕೊಳ್ಳುವುದು, ಯಾವ ವಿಧಾನದಲ್ಲಿ ಅವು ಸಾಧಿತವಾಯಿತೆಂದು ತಿಳಿಯುವುದು ಪ್ರಯೋಗದ ಉದ್ದೇಶ. ವಿಜ್ಞಾನ ಹೇಳಿಕೇಳಿ ಕಾರ್ಯಕಾರಣ ಸಂಬಂಧಿ ತಿಳಿವು. ಏಕೆ, ಹೇಗೆ ಎನ್ನುವುದನ್ನು ಅರಿಯದಿದ್ದರೆ ಅದು ಅಪೂರ್ಣ.

ರೆಕಾರ್ಡ್‌ಗಳು ಅಂದ–ಚಂದವಾಗಿರಬೇಕು ಎನ್ನುವುದು, ಅವುಗಳ ನಾಜೂಕಿಗೆ ಒಂದಷ್ಟು ಅಂಕಗಳು ಮೀಸಲಿಟ್ಟರುವುದು ಪ್ರಯೋಗ ತರಗತಿಯ ಪ್ರಾಮುಖ್ಯ ವಿದ್ಯಾರ್ಥಿಗಳಿಗೆ ಮನವರಿಕೆಯಾಗಲೆಂಬ ಉದ್ದೇಶದಿಂದಲೇ. ಅಂದಹಾಗೆ ಇಲ್ಲೊಂದು ಸೂಕ್ಷ್ಮವಿದೆ. ಕಾಲೇಜಿನ ಪ್ರಯೋಗಾಲಯ, ಸಂಶೋಧನಾತ್ಮಕ ಪ್ರಯೋಗಾಲಯ ಒಂದೇ ಅಲ್ಲ, ಕಾಲೇಜಿನ ಪ್ರಯೋಗಾಲಯದಲ್ಲಿ ವಿದ್ಯಾರ್ಥಿಗಳು ಈಗಾಗಲೇ ತಿಳಿದಿರುವುದನ್ನು ಮರುಪರೀಕ್ಷಿಸುತ್ತಾರೆ. ಆದರೆ ಸಂಶೋಧನಾ ಸಂಸ್ಥೆಯ ಪ್ರಯೋಗಾಲಯದಲ್ಲಿ ವಿಜ್ಞಾನಿಗಳ ಚಿತ್ತ ಹೊಸದರತ್ತ. ಭೌತಶಾಸ್ತ್ರದ ಉಪನ್ಯಾಸಕರು ವಿದ್ಯಾರ್ಥಿಗಳನ್ನು ‘ನೀವು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದೀರಿ ಎಂದುಕೊಳ್ಳಿ. ಬಸ್‌ ಸಾಗುವುದು ನಿಮ್ಮ ಗಮನಕ್ಕೆ ಬರುತ್ತದೆ. ಆದರೆ ಭೂಮಿ ಸೂರ್ಯನ ಸುತ್ತ ಸುತ್ತುತ್ತಿದ್ದರೂ ಏಕೆ ನಿಮ್ಮ ಅನುಭವಕ್ಕೆ ಬರದು?’ ಎಂದು ಪ್ರಶ್ನಿಸುತ್ತಾರೆ. ವಿದ್ಯಾರ್ಥಿಗಳು ನ್ಯೂಟನ್‌ ಚಲನಾ ನಿಯಮಗಳನ್ನು ನೆನಪಿನಲ್ಲಿಟ್ಟಿರುತ್ತಾರೆಯೇ ವಿನಾ ಅವುಗಳ ನಿಜಾರ್ಥ ಅರಿತಿರುವುದು ಅಪರೂಪ. ಆಗ ಉಪನ್ಯಾಸಕರು ಪ್ರಯೋಗಾಲಯದಲ್ಲಿ ಲಭ್ಯವಿರುವ ಸರಳ ಪರಿಕರಗಳನ್ನೇ ಬಳಸಿ ವಿವರಿಸಬಹುದು.

ಮನಸ್ಸಿಗೆ ನಾಟುವ ಉತ್ತರಗಳು

ಹಾಗೆಯೇ ತೂಕ, ದ್ರವ್ಯರಾಶಿ – ಇವೆರಡರ ವ್ಯತ್ಯಾಸವೇನು? ನೀರಿನಲ್ಲಿ ಕರಗುವ ಸಕ್ಕರೆ ಎಣ್ಣೆಯಲ್ಲೇಕೆ ಕರಗದು? ಕರಿದಾಗ ಪೂರಿ ಏಕೆ ಉಬ್ಬುವುದು? ಮಡಕೆಯಲ್ಲಿರಿಸಿದ ನೀರು ಏಕೆ ತಂಪು?... ಇತ್ಯಾದಿ ಪ್ರಶ್ನೆಗಳಿಗೆ ಪರಿಣಾಮಕಾರಿಯಾಗಿ ಮತ್ತು ಗಾಢವಾಗಿ ಮನಸ್ಸಿಗೆ ನಾಟುವ ಉತ್ತರಗಳು ಪ್ರಯೋಗಗಳ ಮೂಲಕವೇ. ಪ್ರತ್ಯಕ್ಷವಾದರೂ ಪ್ರಮಾಣಿಸಿ ನೋಡುವುದೇ ಜಾಣತನ.

ಒಂದು ಸಂದರ್ಭ ಉಲ್ಲೇಖನೀಯ. ವಿದ್ಯಾರ್ಥಿಯೊಬ್ಬ ತನ್ನ ನೋಟ್‌ಬುಕ್‌ನಲ್ಲಿ ವೃತ್ತ ರಚಿಸಲು ಹೆಣಗಾಡುತ್ತಿದ್ದ. ಅವನಿಗೊಂದು ಉಪಾಯ ಹೊಳೆಯಿತು. ಲೇಖನಿಯನ್ನು ಸ್ಥಿರವಾಗಿ ಹಿಡಿದು ನೋಟ್‌ಬುಕ್ಕನ್ನೇ ವೃತ್ತಾಕಾರದಲ್ಲಿ ತಿರುಗಿಸಿ ಅಂತೂ ವೃತ್ತವನ್ನು ಮೂಡಿಸಿದ್ದ. ಗಣಿತ ಉಪನ್ಯಾಸಕರು ಬೆನ್ನು ತಟ್ಟುವ ಬದಲು ಮಾಡಿದ್ದೇನು ಗೊತ್ತೇ? ‘ನಿನಗೆ ವೃತ್ತದ ಪರಿಕಲ್ಪನೆಯೆ ತಿಳಿಯದು. ಚಲಿಸಬೇಕಾದ್ದು ನಿನ್ನ ಲೇಖನಿಯ ತುದಿ. ಅದು ಕೇಂದ್ರ ಎಂದು ಕರೆಯಲಾಗುವ ಒಂದು ಸ್ಥಿರ ಬಿಂದುವಿನಿಂದ ಒಂದೇ ಅಂತರದಲ್ಲಿರುವಂತೆ ಶಿಸ್ತು ಪಾಲಿಸಬೇಕು’ ಎಂದರಂತೆ. ಮನೆಯ ಅಡುಗೆಮನೆಯೇ ಒಂದು ಪ್ರಯೋಗಾಲಯ. ಒಂದು ಹೊಸ ಪಾಕ ಮೊದಲಿಗೆ ಕೆಡಬಹುದಾದರೂ ಮರಳಿ ಮರಳಿ ಯತ್ನಿಸುವುದರಿಂದ ಹದ ಕೈಗೂಡುವುದು. ದವಸ, ಧಾನ್ಯಾದಿಗಳು, ತರಕಾರಿ ಎಷ್ಟು ತಾಪದಲ್ಲಿ, ಎಷ್ಟು ಸಮಯ ಬೇಯಿಸಬೇಕು/ ಹುರಿಯಬೇಕು ಎಂಬುದು ಅನುಭವದಿಂದ ವೇದ್ಯವಾಗುತ್ತದೆ. ಕುಕ್ಕರ್ ನಮ್ಮ ಕಣ್ಣ ಮುಂದೆಯೇ ಇರುವ ಮಾಯಾ ಪಾತ್ರೆ! ಅದು ಏನೆಲ್ಲ ವಿಜ್ಞಾನವನ್ನು ಒಳಗೊಂಡಿದೆ.

ಕಾಟಾಚಾರಕ್ಕೆ ಪ್ರಯೋಗ ತರಗತಿಗಳಿಗೆ ಹಾಜರಾದರೆ ಸ್ವಯಂ ಅನ್ವೇಷಣಾ ಪ್ರವೃತ್ತಿ ಹೇಗೆ ತಾನೆ ಮೈಗೂಡುತ್ತದೆ? ಓದು ಬದುಕಿಗೆ ಸಮೀಪವಾಗುವುದು ಪ್ರಯೋಗಗಳ ಮೂಲಕವೇ. ಅರ್ಕಿಮಿಡೀಸ್ ಪಾಲಿಗೆ ‘ಯಾವುದೇ ಪದಾರ್ಥ ದ್ರವದಲ್ಲಿ ಮುಳುಗಿದಾಗ ಅದು ಕಳೆದುಕೊಂಡಂತೆ ತೋರುವ ತೂಕವು ಅದು ಪಲ್ಲಟಗೊಳಿಸಿದ ದ್ರವದ ತೂಕಕ್ಕೆ ಸಮ’ ಎಂಬ ಮಹತ್ತರ ಶೋಧಕ್ಕೆ ಸ್ನಾನಗೃಹವೇ ಪ್ರಯೋಗಶಾಲೆಯಾಗಿತ್ತು. ದೊಡ್ಡ ಕೋಲೊಂದನ್ನು ಕೊಟ್ಟರೆ ಜಗತ್ತನ್ನೇ ಆವಿಷ್ಕರಿಸುತ್ತೇನೆಂಬ ಆತ್ಮವಿಶಾಸವಿತ್ತು ಅರ್ಕಿಮಿಡೀಸ್‌ಗೆ. ಹೀಗಾಗಿ ಪರೀಕ್ಷೆ, ಫಲಿತಾಂಶ, ಅಂಕಗಳನ್ನೂ ಮೀರಿ ಪ್ರಯೋಗಾಲಯದ ಅನುಭವಗಳು ಮೌಲಿಕ. ಹಾಗೆ ನೋಡಿದರೆ ಉಳಿದವಕ್ಕಿಂತಲೂ ಪ್ರಯೋಗ ತರಗತಿಗಳಿಗೇ ಹೆಚ್ಚು ಆಸಕ್ತಿ, ಲವಲವಿಕೆಯಿಂದ ವಿದ್ಯಾರ್ಥಿಗಳು ಹಾಜರಾಗಬೇಕು. ಅದರಿಂದಾಗಿ ವಿಜ್ಞಾನದ ಪರಿಕಲ್ಪನೆಗಳು ಆಸ್ವಾದಿಸಲು ದಕ್ಕುತ್ತವೆ. ವೈಜ್ಞಾನಿಕ ಉಪಕರಣಗಳನ್ನು ಸುರಕ್ಷಿತವಾಗಿ, ಸಮರ್ಪಕವಾಗಿ ಬಳಸುವ ಕೌಶಲ ಮೈಗೂಡುತ್ತದೆ. ಒಪ್ಪ, ಓರಣದ ಬದುಕಿಗೂ ಪ್ರೇರಣೆಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT