ಕನೌಜ್ (ಉತ್ತರ ಪ್ರದೇಶ): ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಚುನಾವಣಾ ಬಾಂಡ್ಗಳಿಗೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಕೇಸರಿ ಪಕ್ಷವು ಯಾರಿಂದಲೂ 'ದೇಣಿಗೆ' ಪಡೆದಿಲ್ಲ. ಬದಲಾಗಿ 'ಸುಲಿಗೆ' ಮಾಡಿದೆ ಎಂದು ಆರೋಪಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಯಾದವ್, 'ದೇಣಿಗೆ ಪಡೆಯುವ ಬದಲು ಸುಲಿಗೆ ಮಾಡುವುದಕ್ಕಾಗಿ ಬಿಜೆಪಿಯು, ಕೇಂದ್ರೀಯ ತನಿಖಾ ದಳ (ಸಿಬಿಐ), ಜಾರಿ ನಿರ್ದೇಶನಾಲಯ (ಇಡಿ), ಆದಾಯ ತೆರಿಗೆ (ಐಟಿ) ಇಲಾಖೆ ಮತ್ತು ಇತರ ಸಂಸ್ಥೆಗಳನ್ನು ಹೇಗೆ ಬಳಸಿಕೊಂಡಿದೆ ಎಂಬುದು ಜನರಿಗೆ ಗೊತ್ತಿದೆ' ಎಂದು ಹೇಳಿದ್ದಾರೆ.
'ಈ ಇಲಾಖೆಗಳ ಮೂಲಕ ನೋಟಿಸ್ ಜಾರಿಗೊಳಿಸಿ ಒತ್ತಡ ಹೇರಿದಾಗೆಲ್ಲ ಬಿಜೆಪಿ ಖಾತೆಗೆ ಹಣ ಜಮೆಯಾಗಿರುವುದು ಬಹಿರಂಗಗೊಂಡಿದೆ. ಅಧಿಕಾರದಲ್ಲಿ ಇರುವವರು ದೇಣಿಗೆ ಪಡೆದಿಲ್ಲ. ಬದಲಾಗಿ ಸುಲಿಗೆ ಮಾಡಿದ್ದಾರೆ' ಎಂದು ಒತ್ತಿ ಹೇಳಿದ್ದಾರೆ.
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಅವರು, ಚುನಾವಣಾ ಬಾಂಡ್ಗಳು ಬಿಜೆಪಿ ಹೆಸರಿಗೆ ಚ್ಯುತಿ ತಂದಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
'ತಮ್ಮದು ರಾಷ್ಟ್ರೀಯವಾದಿ ಪಕ್ಷ ಎನ್ನುವವರು ಹೇಳಿಕೊಳ್ಳುವವರು (ಬಿಜೆಪಿಯವರು), ತಾವು ಇತರರಿಗಿಂತ ಭಿನ್ನ ಎಂದು ಹೇಳಿಕೊಳ್ಳುವವರ ವಿರುದ್ಧವೇ ಚುನಾವಣಾ ಬಾಂಡ್ ಆರೋಪಗಳು ಕೇಳಿಬಂದಿವೆ. ಹೀಗಾಗಿ, ಜನರ ಗಮನವನ್ನು ಬೇರೆಡೆಗೆ ಸೆಳೆಯುವುದಕ್ಕಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೇರಿದಂತೆ ವಿರೋಧ ಪಕ್ಷಗಳ ನಾಯಕರನ್ನು ಬಂಧಿಸಲಾಗುತ್ತಿದೆ' ಎಂದು ದೂರಿದ್ದಾರೆ.
ದೆಹಲಿ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಹಣ ಅಕ್ರಮ ವರ್ಗಾವಣೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೊಪಿಸಿ, ಜಾರಿ ನಿರ್ದೇಶನಾಲಯವು ಕೇಜ್ರಿವಾಲ್ ಅವರನ್ನು ಬಂಧಿಸಿದೆ.