ಸಾಹಿಬ್ಗಂಜ್: ವಿಶೇಷ ಪ್ರಕರಣವೊಂದರಲ್ಲಿ, 92 ವರ್ಷದ ಅಂಗವಿಕಲ ವ್ಯಕ್ತಿ ಖಲೀಲ್ ಅನ್ಸಾರಿ ಲೋಕಸಭಾ ಚುನಾವಣೆಯಲ್ಲಿ ಮೊಟ್ಟ ಮೊದಲ ಬಾರಿಗೆ ಮತದಾನ ಮಾಡಲು ಸಿದ್ಧರಾಗಿದ್ದಾರೆ.
ಖಲೀಲ್ ಅವರ ಹೆಸರನ್ನು ತಕ್ಷಣವೇ ಮತದಾರರ ಪಟ್ಟಿಯಲ್ಲಿ ಸೇರಿಸುವಂತೆ ಜಾರ್ಖಂಡ್ ಮುಖ್ಯ ಚುನಾವಣಾ ಆಯುಕ್ತ (ಸಿಇಒ), ಸಾಹಿಬ್ಗಂಜ್ ಜಿಲ್ಲಾ ಚುನಾವಣಾಧಿಕಾರಿಗೆ ಶುಕ್ರವಾರ ನಿರ್ದೇಶನ ನೀಡಿದ್ದಾರೆ.
ರಾಜ್ಯ ರಾಜಧಾನಿ ರಾಂಚಿಯಿಂದ 450 ಕಿ.ಮೀ. ದೂರ ಇರುವ ಸಾಹಿಬ್ಗಂಜ್ ಜಿಲ್ಲೆಯ ಮುಂದ್ರೊ ವಲಯದ ಮತಗಟ್ಟೆಗಳಿಗೆ ಸಿಇಒ ಕೆ.ರವಿಕುಮಾರ್ ಶುಕ್ರವಾರ ದಿಢೀರ್ ಭೇಟಿ ನೀಡಿದ್ದರು. ಈ ವೇಳೆ ಅವರು, ಹಿರಿಯ ನಾಗರಿಕರನ್ನು ಮತ್ತು ಅಂಗವಿಕಲ ಮತದಾರರನ್ನು ಭೇಟಿಯಾಗಿದ್ದರು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಆಗ ಅವರು ಅನ್ಸಾರಿಯವರನ್ನು ‘ನೀವು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿದ್ದೀರಾ’ ಎಂದು ಪ್ರಶ್ನಿಸಿದ್ದಾರೆ. ‘ನನ್ನ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದೇ ಇರುವುದರಿಂದ ಎಂದೂ ಮತದಾನ ಮಾಡಿಯೇ ಇಲ್ಲ’ ಎಂದು ಖಲೀಲ್ ಉತ್ತರಿಸಿದ್ದಾರೆ.
ತಕ್ಷಣವೇ ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಸಿಇಒ ಅಧಿಕಾರಿಗಳಿಗೆ ಸೂಚಿಸಿದರು. ‘ನಾನು ಮೊಟ್ಟ ಮೊದಲ ಬಾರಿಗೆ ಮತದಾನ ಮಾಡಲಿದ್ದೇನೆ’ ಎಂದು ಖಲೀಲ್ ಹರ್ಷ ವ್ಯಕ್ತಪಡಿಸಿದರು.