ರಾಯಚೂರು: ‘ಜೆಡಿಎಸ್ ಹಾಗೂ ಬಿಎಸ್ಪಿ ಮೈತ್ರಿ ರಾಜ್ಯ ರಾಜಕಾರಣದಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ. ಎರಡೂ ಪಕ್ಷಗಳಿಗೆ ಅಷ್ಟೊಂದು ಸಾಮರ್ಥ್ಯವೂ ಇಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
‘ಪ್ರಧಾನಿ ಅವರು ಸಂಸತ್ನಲ್ಲಿ ನನ್ನ ಹೆಸರು ಪ್ರಸ್ತಾಪಿಸುವ ಮೂಲಕ ನನ್ನನ್ನು ರಾಷ್ಟ್ರೀಯ ನಾಯಕನನ್ನಾಗಿ ಮಾಡುತ್ತಿದ್ದಾರೆ’ ಎಂದು ಅವರು ಭಾನುವಾರ ಮಸ್ಕಿಯಲ್ಲಿ ಹೇಳಿದರು.
‘ನರೇಂದ್ರ ಮೋದಿ ಅವರು ಬ್ಯಾಂಕ್ಗಳಲ್ಲಿ ಹಣ ಠೇವಣಿ ಇಡಿ ಎಂದು ಜನರಿಗೆ ಹೇಳುತ್ತಾರೆ. ಹಣ ಹೂಡಿಕೆ ಮಾಡಿದರೆ ನೀರವ್ ಮೋದಿ ಅಂಥವರು ಲೂಟಿ ಮಾಡುತ್ತಾರೆ. ಈ ಹಗರಣದ ಬಗೆಗೆ ಅವರು ಪ್ರತಿಕ್ರಿಯೆ ನೀಡಬೇಕು’ ಎಂದು ಒತ್ತಾಯಿಸಿದರು.
‘ತಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆದಾಗ ಮೋದಿ ಮೌನ ವಹಿಸುತ್ತಾರೆ. ಅವರು ನಮ್ಮಂತೆ ಜನರ ಕೈಗೆ ಸಿಗುತ್ತಾರಾ? ಮಾಧ್ಯಮದವರನ್ನೂ ಹತ್ತಿರ ಬಿಟ್ಟುಕೊಳ್ಳುವುದಿಲ್ಲ’ ಎಂದು ಲೇವಡಿ ಮಾಡಿದರು.
‘ಎಐಸಿಸಿ ವಕ್ತಾರ ಅಭಿಷೇಕ್ ಸಿಂಘ್ವಿ ಹಾಗೂ ವಜ್ರ ವ್ಯಾಪಾರಿ ನೀರವ್ ಮೋದಿಗೂ ಸಂಬಂಧ ಇಲ್ಲ. ಇದರ ವಿರುದ್ಧ ಸಿಂಘ್ವಿ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಲು ಮುಂದಾಗಿದ್ದಾರೆ’ ಎಂದು ಹೇಳಿದರು.
ಶಾಂತಿನಗರ ಶಾಸಕ ಹ್ಯಾರಿಸ್ ಅವರ ಪುತ್ರ ನಡೆಸಿದ ಹಲ್ಲೆ ಕುರಿತು ಕೇಳಿದ ಪ್ರಶ್ನೆಗೆ, ‘ಶಾಸಕರ ಮಗನಾದರೇನು, ಯಾರಾದರೇನು? ತಪ್ಪು ತಪ್ಪೇ. ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು’ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.