ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆಯೇ ನಗರದ ಬಹುತೇಕ ಕಡೆ ಸಾರ್ವಜನಿಕ ಸ್ಥಳಗಳಲ್ಲಿರುವ ಫಲಕಗಳಲ್ಲಿ ಜನಪ್ರತಿನಿಧಿಗಳ ಹೆಸರುಗಳನ್ನು ಮರೆ ಮಾಚಲಾಗಿದೆ. ಆದರೆ, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಈ ನಿಯಮ ಪಾಲನೆ ಆಗಿಲ್ಲ.
ಕೆಂಗೇರಿ–ಉತ್ತರಹಳ್ಳಿ ಮುಖ್ಯರಸ್ತೆ, ಉತ್ತರಹಳ್ಳಿ, ಪೂರ್ಣಪ್ರಜ್ಞ ಬಡಾವಣೆ, ಬನಶಂಕರಿ 5ನೇ ಹಂತ, ಅರೇಹಳ್ಳಿ, ಗುಬ್ಬಳಾಲ ಸೇರಿದಂತೆ ಹಲವಾರು ಬಡಾವಣೆಗಳ ರಸ್ತೆಗಳು ಹಾಗೂ ಉದ್ಯಾನವನಗಳ ನಾಮಫಲಕಗಳಲ್ಲಿ ಶಾಸಕ ಎಂ.ಕೃಷ್ಣಪ್ಪ ಹೆಸರು ಈಗಲೂ ರಾರಾಜಿಸುತ್ತಿದೆ.
ಶಾಸಕರು ಪ್ರಭಾವಿಯಾಗಿರುವುದರಿಂದ ನಾಮಫಲಕಗಳಲ್ಲಿರುವ ಅವರ ಹೆಸರನ್ನು ಅಧಿಕಾರಿಗಳು ಹಾಗೇಯೇ ಬಿಟ್ಟಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ. ಅಧಿಕಾರಿಗಳು ನಿಷ್ಪಕ್ಷಪಾತವಾಗಿ ನಡೆದುಕೊಂಡು ಕೂಡಲೇ ನಾಮಫಲಕಗಳಲ್ಲಿರುವ ಜನಪ್ರತಿನಿಧಿಗಳ ಹೆಸರನ್ನು ಮುಚ್ಚಬೇಕು ಎಂದು ಸ್ಥಳೀಯ ನಿವಾಸಿ ರಾಧಾ ಒತ್ತಾಯಿಸಿದರು.
‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾನೂನು ಎಲ್ಲರಿಗೂ ಒಂದೇ. ಎಲ್ಲರೂ ಅದನ್ನು ಗೌರವಿಸಬೇಕು. ಕರ್ತವ್ಯ ಲೋಪ ಎಸಗಿರುವ ಅಧಿಕಾರಿಗಳ ಮೇಲೆ ರಾಜ್ಯ ಮುಖ್ಯ ಚುನಾವಣಾಧಿಕಾರಿಯವರು ಕಾನೂನು ಕ್ರಮ ಕೈಗೊಳ್ಳಬೇಕು’ ಎಂದರು.