ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಮತ ಎಣಿಕೆ ಕಾರ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಚುನಾವಣಾ ಆಯೋಗ ಸಕಲ ಸಿದ್ಧತೆ ನಡೆಸಿಕೊಂಡಿದೆ. ಬೆಳಿಗ್ಗೆ 8ರಿಂದ ಮತ ಎಣಿಕೆ ನಡೆಯಲಿದೆ.
ಮಂಗಳವಾರ ಬೆಳಿಗ್ಗೆ ಮತ ಎಣಿಕೆ ಕೇಂದ್ರಕ್ಕೆ ಬೆಳ್ಳಂಬೆಳಿಗ್ಗೆ ಬಂದಿರುವ ಅಧಿಕಾರಿಗಳು ಮತ ಯಂತ್ರಗಳನ್ನು ಸ್ಟ್ರಾಂಗ್ ರೂಂನಿಂದ ತರುವ ಮತ್ತು ಎಣಿಕೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಮತ ಎಣಿಕೆ ಕೇಂದ್ರಗಳಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಿದ್ದು, ಹೆಚ್ಚಿನ ಭದ್ರತೆ ಒದಗಿಸಲಾಗಿದೆ.
ಜೆಡಿಎಸ್ ರಾಜ್ಯ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ಕುಟುಂಬ ಸಮೇತರಾಗಿ ಕಾಲ ಭೈರವೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ.
ಬಾದಾಮಿ ಮತ್ತು ಮೊಳಕಾಲ್ಮುರು ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದ ಶ್ರೀರಾಮುಲು ಬೆಳಿಗ್ಗೆ ಗೋ ಪೂಜೆ ಸಲ್ಲಿಸಿದ್ದಾರೆ. ಅಲ್ಲಿಂದ ಅವರು ಬಾದಾಮಿಗೆ ತೆರಳಲು ಸಿದ್ಧತೆ ನಡೆಸಿದ್ದಾರೆ.
ಕಲಬುರ್ಗಿಯಲ್ಲಿ ಮತ ಎಣಿಕೆ ಕೇಂದ್ರದಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿಯನ್ನು ಪೊಲೀಸರು ತಪಾಸಣೆ ನಡೆಸಿ ಒಳಗೆ ಬಿಡುತ್ತಿದ್ದಾರೆ.
ಫಲಿತಾಂಶ ಹೊರ ಬೀಳುತ್ತಿದ್ದಂತೆ ಯಾರು ಬಹುಮತ ಪಡೆಯುತ್ತಾರೆ, ಯಾರು ಮುಖ್ಯಮಂತ್ರಿಯಾಗುತ್ತಾರೆ ಎಂಬುದರತ್ತ ಎಲ್ಲರ ಚಿತ್ತ ನೆಟ್ಟಿದೆ. ಬೆಳಿಗ್ಗೆ 11ರ ವೇಳೆಗೆ ಬಹುತೇಕ ಚಿತ್ರಣ ಹೊರಬೀಳಲಿದೆ.
ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ 222 ಕ್ಷೇತ್ರಗಳಿಗೆ ಇದೇ 12ರಂದು ಮತದಾನ ನಡೆದಿತ್ತು. 5.02 ಕೋಟಿ ಮತದಾರರ ಪೈಕಿ ಶೇ 72.36ರಷ್ಟು ಮಂದಿ ತಮ್ಮ ‘ಹಕ್ಕು’ ಚಲಾಯಿಸುವ ಮೂಲಕ ಚಾರಿತ್ರಿಕ ದಾಖಲೆಯನ್ನೇ ನಿರ್ಮಿಸಿದರು. ಒಟ್ಟು 2,622 ಅಭ್ಯರ್ಥಿಗಳ ಪೈಕಿ ಯಾರು ವಿಧಾನಸಭೆಯ ಮೆಟ್ಟಿಲು ಹತ್ತಲಿದ್ದಾರೆ ಎಂಬುದು ಮತ ಎಣಿಕೆಯಲ್ಲಿ ನಿಚ್ಚಳವಾಗಲಿದೆ.
‘ವಿಜಯೋತ್ಸವದಲ್ಲಿ ಪಟಾಕಿ ನಿರ್ಬಂಧ’
ಚುನಾವಣೆಯಲ್ಲಿ ಗೆದ್ದವರು ವಿಜಯೋತ್ಸವ ಆಚರಿಸಬಹುದು. ಆದರೆ, ಪಟಾಕಿ ಸಿಡಿಸಬಾರದು ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಅಲ್ಲದೆ, ಭಾರಿ ಸದ್ದು ಗದ್ದಲ ಮಾಡುವ ಧ್ವನಿ ವರ್ಧಕಗಳನ್ನೂ ಬಳಸುವಂತಿಲ್ಲ. ಪರಿಸರದ ಕಾಳಜಿಯಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ. ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು. ಮದ್ಯ ಮಾರಾಟಕ್ಕೂ ಅವಕಾಶವಿಲ್ಲ ಎಂದೂ ಹೇಳಿದರು.
* ಇವನ್ನೂ ಓದಿ...
* ಪ್ರಜಾ ತೀರ್ಪು ಇಂದು
Security deployed outside a counting center in Kalaburagi ahead of counting of votes for #KarnatakaElections2018 pic.twitter.com/1yUDYL2c28
— ANI (@ANI) May 15, 2018
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.