ಹೈದರಾಬಾದ್ : ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್–ಕಾಂಗ್ರೆಸ್ ಮೈತ್ರಿ ಸರ್ಕಾರ ಅವಧಿಗೂ ಮುನ್ನ ಪತನವಾಗಲಿದೆ ಎಂದು ಕರ್ನಾಟಕದ ಬಿಜೆಪಿ ಉಸ್ತುವಾರಿ ಮುರಳೀಧರ ರಾವ್ ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕದಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ಸರ್ಕಾರ ರಚಿಸಬೇಕು ಇಲ್ಲವೇ ಮಧ್ಯಂತರ ಚುನಾವಣೆ ಎದುರಿಸಬೇಕು. ಇವೆರಡನ್ನು ಬಿಟ್ಟರೆ ಬೇರೆ ಆಯ್ಕೆ ಇಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ತೆಲಂಗಾಣ ಬಿಜೆಪಿಯ ಕಾರ್ಯಕಾರಿಣಿ ಉದ್ದೇಶಿಸಿ ಸೋಮವಾರ ಮಾತನಾಡಿದ ಅವರು, ಕೇವಲ 37 ಸ್ಥಾನ ಗೆದ್ದ ಪಕ್ಷವೊಂದು ರಚಿಸಿದ ಸರ್ಕಾರ ದೀರ್ಘ ಕಾಲ ಬಾಳಲು ಸಾಧ್ಯವಿಲ್ಲ ಎಂದರು.
ಜನಾದೇಶ ತಮ್ಮ ವಿರುದ್ಧವಾಗಿದ್ದರೂ ಕಾಂಗ್ರೆಸ್ ಅಧಿಕಾರದ ಲಾಲಸೆಯಿಂದ ಜೆಡಿಎಸ್ ಜತೆ ಕೈಜೋಡಿಸುವ ಮೂಲಕ ಅಪವಿತ್ರ ಮೈತ್ರಿ ಮಾಡಿಕೊಂಡಿದೆ ಎಂದರು.
ಕರ್ನಾಟಕದ ಈ ರಾಜಕೀಯ ಬೆಳವಣಿಗೆಗಳು ದೇಶದ ರಾಜಕೀಯದ ಮೇಲೂ ಪರಿಣಾಮ ಬೀರಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಬಿಜೆಪಿ ವಿರುದ್ಧ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಆರಂಭಿಸಿದ್ದ ಅಪಪ್ರಚಾರ ವಿಫಲವಾಗಿದೆ. ಕರ್ನಾಟಕದ ತೆಲುಗು ಭಾಷಿಕರು ಪ್ರಧಾನಿ ನರೇಂದ್ರ ಮೋದಿ ಪರ ಮತ ಚಲಾಯಿಸಿದ್ದಾರೆ ಎಂದರು.
‘ನಮೋ’ ಆ್ಯಪ್ ಮೂಲಕ ಪಕ್ಷದ ಕಾರ್ಯಕರ್ತರ ಜತೆ ಮೋದಿ ವಿಡಿಯೊ ಸಂವಾದದ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.
* ರಾವಣ, ಸೀತೆಯನ್ನು ಅಪಹರಿಸಿದಂತೆ ಕರ್ನಾಟಕದಲ್ಲಿ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷ ಪ್ರಜಾಪ್ರಭುತ್ವವನ್ನು ಅಪಹರಿಸಿದೆ