ಬೆಂಗಳೂರು: ಸೀಟು ಹಂಚಿಕೆಯಲ್ಲಿ 8 ಕ್ಷೇತ್ರಗಳನ್ನು ಪಡೆದುಕೊಂಡ ಜೆಡಿಎಸ್ಗೆ ಬೆಂಗಳೂರು ಉತ್ತರ, ವಿಜಯಪುರ, ಚಿಕ್ಕಮಗಳೂರು–ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಅಭ್ಯರ್ಥಿಗಳೇ ಇಲ್ಲ’ ಎಂದು ಬಿಜೆಪಿ ವಕ್ತಾರ ಗೋ. ಮಧುಸೂದನ್ ಟೀಕಿಸಿದರು.
ತಾನು ಸ್ಪರ್ಧೆ ಮಾಡಬೇಕಾದ ಕ್ಷೇತ್ರಗಳನ್ನು ಕಳೆದುಕೊಂಡಿರುವ ಕಾಂಗ್ರೆಸ್ ದಯನೀಯ ಸ್ಥಿತಿಯಲ್ಲಿದೆ. ಇಬ್ಬರ ನಡುವೆ ಈಗ ಎರವಲು ಸೇವೆಯಲ್ಲಿ ಅಭ್ಯರ್ಥಿಗಳ ಹುಡುಕಾಟ ನಡೆದಿರುವುದು ಹಾಸ್ಯಾಸ್ಪದ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಎರಡು ಪಕ್ಷಗಳ ಮೈತ್ರಿಕೂಟದಲ್ಲಿ ಮೂರನೇ ಗುಂಪು ಹುಟ್ಟಿಕೊಂಡಿದೆ. ಜೆಡಿಎಸ್–ಕಾಂಗ್ರೆಸ್ ಜಂಟಿ ಸುದ್ದಿಗೋಷ್ಠಿಗೆ ಜಿ.ಪರಮೇಶ್ವರ ಗೈರು ಹಾಜರಾಗಿದ್ದರು. ತುಮಕೂರು ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟಿರುವುದಕ್ಕೆ ಅವರು ಸಿಟ್ಟಾಗಿರಬಹುದು ಎಂದರು.
ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿಗೌಡ ಮಾತನಾಡಿ, ಧಾರವಾಡದಲ್ಲಿ ಕಟ್ಟಡ ದುರಂತ ಸ್ಥಳಕ್ಕೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸುವುದಕ್ಕಿಂತ ಮುಖ್ಯಮಂತ್ರಿ ಅವರಿಗೆ ಮಗನ ರಾಜಕೀಯ ಭವಿಷ್ಯ ಮುಖ್ಯವಾಗಿದೆ. ಈ ಬಾರಿ ಜೆಡಿಎಸ್ ಶೂನ್ಯ ಸಂಪಾದನೆ ಮಾಡಲಿದೆ ಎಂದರು.