ಎಸ್.ಕೆ.ಎಂ. ಮೂವೀಸ್ ಲಾಂಛನದಲ್ಲಿ ಮೋಹನ್ ಕುಮಾರ್ ಎಸ್.ಕೆ ನಿರ್ಮಿಸುತ್ತಿರುವ ‘ರಾಜಲಕ್ಷ್ಮೀ’ ಚಿತ್ರದ ಚಿತ್ರೀಕರಣ ನಿರಂತರವಾಗಿ ನಡೆದಿದೆ. ಮಂಡ್ಯ, ಮೈಸೂರು, ಬೆಂಗಳೂರು ಸುತ್ತಮುತ್ತ 25ಕ್ಕೂ ಹೆಚ್ಚು ದಿನಗಳ ಚಿತ್ರೀಕರಣ ನಡೆಯಲಿದೆ.
ಶ್ರೀಕಾಂತ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ನಾಗರಾಜ ಮೂರ್ತಿ ಅವರ ಛಾಯಾಗ್ರಹಣ ಇದೆ. ಎ.ಟಿ.ರವೀಶ್ ಅವರು ಇದಕ್ಕೆ ಸಂಗೀತ ನೀಡಿದ್ದಾರೆ. ಚಿತ್ರದ ಹಾಡುಗಳನ್ನು ಕಾಂತರಾಜ್ ಬರೆದಿದ್ದಾರೆ. ಕಿರಣ್-ಅರ್ಜುನ್ ಸಂಕಲನ, ನವೀನ್ ಕನ್ನಡಿಗ ನೃತ್ಯ ನಿರ್ದೇಶನ, ಸಂಕರ್ ಶಾಸ್ತ್ರಿ ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ಮಾಗಡಿ ಯತೀಶ್ ಸಂಭಾಷಣೆ ಬರೆದಿದ್ದಾರೆ.
ಹೊನ್ನವಳ್ಳಿ ಕೃಷ್ಣ, ಟೆನ್ನಿಸ್ ಕೃಷ್ಣ, ನವೀನ್ ತೀರ್ಥಹಳ್ಳಿ, ರಶ್ಮಿಗೌಡ, ಚಂದ್ರಪ್ರಭ (ಮಜಾಭಾರತ), ಸ್ಟೈಲ್ ಶಶಿ, ಸೀತಾರಾಂ, ಮುತ್ತುರಾಜ್, ಸದಾನಂದ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ರಾಮ ರಾಜ್ಯದಂತೆ ಇದ್ದಂತಹ ಒಂದು ಊರು ಕೆಲವು ಕಾರಣಗಳಿಂದಾಗಿ ರಾವಣ ರಾಜ್ಯವಾಗುತ್ತದೆ. ಮತ್ತೆ ಆ ಊರು ರಾಮರಾಜ್ಯ ಹೇಗೆ ಆಗುತ್ತದೆ ಎಂಬುದು ಚಿತ್ರದ ಕಥಾಹಂದರ ಎಂದು ಸಿನಿತಂಡ ಹೇಳಿದೆ. ಇಷ್ಟಿದ್ದ ನಂತರ ಒಂದು ಪ್ರೇಮಕಥೆ ಇಲ್ಲದಿದ್ದರೆ ಸಿನಿಮಾ ಹೇಗೆ ಆಗುತ್ತದೆ?! ಅಲ್ಲವೇ? ‘ಆ ಬಗ್ಗೆ ತಲೆಬಿಸಿ ಬೇಡ. ಇದರಲ್ಲಿ ಒಂದು ಲವ್ ಸ್ಟೋರಿ ಕೂಡ ಖಂಡಿತ ಇದೆ’ ಎಂದು ಹೇಳಿದ್ದಾರೆ ನಿರ್ದೇಶಕರು. ನಾಲ್ಕು ಹಾಡುಗಳು ಹಾಗೂ ನಾಲ್ಕು ಸಾಹಸ ಸನ್ನಿವೇಶಗಳು ಈ ಚಿತ್ರದಲ್ಲಿವೆ.