ಕೊಚ್ಚಿ: ಕೇರಳದ ಟೀ ವ್ಯಾಪಾರಿಯೊಬ್ಬರು ನೋಡ ನೋಡುತ್ತಲೇ ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿಯಾಗಿದ್ದರೆ. ಅದಕ್ಕೆ ಕಾರಣ ಅವರ ಟೀ ಅಲ್ಲ. ಬದಲಾಗಿ ಅವರ ರೂಪ. ನಟ ರಜನಿಕಾಂತ್ಗೆ ಕಾಣುವ ಇವರನ್ನು ಅದೆಷ್ಟೋ ಜನ ತಲೈವಾ ಅಂತ ತಿಳಿದು ಗೊಂದಲಕ್ಕೀಡಾಗಿದ್ದಾರಂತೆ.
ಕೊಚ್ಚಿಯ ಪಟ್ಟಲಮ್ ರಸ್ತೆಯಲ್ಲಿ ಟೀ ಅಂಗಡಿ ನಡೆಸುತ್ತಿರುವ ಸುಧಾಕರ್ ಪ್ರಭು, ನೋಡುವುದಕ್ಕೆ ರಜನಿಕಾಂತ್ ಅವರ ಹಾಗೆಯೇ ಇದ್ದಾರೆ. ರಜನಿಕಾಂತ್ ಅವರು ಮಾರು ವೇಷದಲ್ಲಿ ಹೋಗುವುದು ಎಲ್ಲರಿಗೂ ತಿಳಿದಿರುವ ವಿಚಾರ. ಸುಧಾಕರ್ ಪ್ರಭು ಅವರನ್ನು ಕಂಡು ರಜನಿಕಾಂತ್ ಅವರು ಮಾರುವೇಷದಲ್ಲಿ ಬಂದಿದ್ದಾರೆಂದು ತಿಳಿದು ಜನ ಮಾತನಾಡಿಸುತ್ತಾರಂತೆ...
ಇದೀಗ ಸುಧಾಕರ್ ಪ್ರಭು ಅವರ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಟೀ ಶರ್ಟ್ ಜೊತೆ ಶಾರ್ಟ್ಸ್ ಧರಿಸಿರುವ ಪ್ರಭು ಅವರ ಮ್ಯಾನರಿಸಂ ಕೂಡ ರಜನಿಕಾಂತ್ ಅವರಿಗೆ ಹೋಲಿಕೆಯಾಗಿದೆ. ವಿಡಿಯೊ ನೋಡಿದ ನೆಟ್ಟಿಗರು, ಪ್ರಪಂಚದಲ್ಲಿ ಒಬ್ಬ ವ್ಯಕ್ತಿಯಂತೆ ಏಳು ಜನ ಇರುತ್ತಾರೆ ಎನ್ನುವುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇಡ ಎಂದಿದ್ದಾರೆ.
ಈ ಮೊದಲು ಮಲಯಾಳಂ ನಟ, ನಿರ್ದೇಶಕ ನಾದಿರ್ ಷಾ ಅವರು ಕೂಡ ಸುಧಾಕರ್ ಪ್ರಭು ಅವರನ್ನು ಕಂಡು ಗೊಂದಲಗೊಂಡಿದ್ದರು. ಈ ಬಗ್ಗೆ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದರು. ‘ಫೋರ್ಟ್ ಕೊಚ್ಚಿಗೆ ಶೂಟಿಂಗ್ಗೆ ತೆರಳಿದ ವೇಳೆ ಪ್ರಭು ಅವರನ್ನು ಕಂಡು ರಜನಿಕಾಂತ್ ಎಂದು ತಿಳಿದಿದ್ದೆ. ಅವರ ರೂಪ , ಮಾತು, ನಡವಳಿಕೆ ಕೂಡ ರಜನಿಕಾಂತ್ ಅವರಿಗೆ ಹೋಲಿಕೆಯಾಗುತ್ತದೆ’ ಎಂದು ಹೇಳಿದ್ದರು.