ಊರ್ವಶಿ ರೌಟೇಲ ಬಿಟೌನ್ನ ಮಾದಕ ನಟಿ. ದರ್ಶನ್ ನಟನೆಯ ಕನ್ನಡದ ‘ಐರಾವತ’ ಚಿತ್ರದಲ್ಲೂ ಈಕೆ ನಟಿಸಿದ್ದರು. ಇತ್ತೀಚೆಗೆ ಆಕೆ ಬಾತ್ಟಬ್ನಲ್ಲಿ ಹಾಲಿನಲ್ಲಿಯೇ ಸ್ನಾನ ಮಾಡಿದ್ದು ಸುದ್ದಿಯಾಗಿತ್ತು. ತನ್ನ ಮಾದಕ ನೋಟದಿಂದಲೇ ಅಭಿಮಾನಿಗಳ ನಿದ್ದೆಗೆಡಿಸುವ ಛಾತಿ ಆಕೆಯದ್ದು. ಸಮಯ ಸಿಕ್ಕಿದಾಗಲೆಲ್ಲಾ ತನ್ನ ದೇಹಸಿರಿ ಪ್ರದರ್ಶಿಸುವ ಹಾಟ್ ಫೋಟೊಗಳು, ವಿಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ.
ಪರದೆ ಮೇಲೂ ಗ್ಲಾಮರ್ ಲುಕ್ನಲ್ಲಿ ಕಾಣಿಸಿಕೊಳ್ಳಲು ಆಕೆ ಹಿಂಜರಿಕೆಪಡುವುದಿಲ್ಲ. ಹಾಗಾಗಿಯೇ, ಆಕೆಯೇ ತಮ್ಮ ಸಿನಿಮಾಗಳ ಐಟಂ ಸಾಂಗ್ನಲ್ಲಿ ಸೊಂಟ ಬಳುಕಿಸಲಿ ಎಂಬುದು ಹಲವು ನಿರ್ದೇಶಕರ ಆಸೆ. ಆದರೆ, ಆಕೆಯ ದುಬಾರಿ ಸಂಭಾವನೆಯ ಮೊತ್ತ ಕೇಳಿ ಈಗ ತಬ್ಬಿಬ್ಬುಗೊಳ್ಳುವ ಸರದಿ ಟಾಲಿವುಡ್ನ ನಿರ್ದೇಶಕರು ಮತ್ತು ನಿರ್ಮಾಪಕರದ್ದು.
ಕೊರೊನಾ ಲಾಕ್ಡೌನ್ ಪರಿಣಾಮ ದುಂದುವೆಚ್ಚಕ್ಕೆ ಕಡಿವಾಣ ಹಾಕುವ ಸೂತ್ರಕ್ಕೆ ತೆಲುಗು ಚಿತ್ರೋದ್ಯಮ ಜೋತುಬಿದ್ದಿದೆ. ಕಲಾವಿದರು ಮತ್ತು ತಂತ್ರಜ್ಞರಿಗೆ ನೀಡುವ ಸಂಭಾವನೆಯಲ್ಲೂ ಕಡಿತಕ್ಕೆ ನಿರ್ಮಾಪಕರು ಮುಂದಾಗಿದ್ದಾರೆ. ಆದರೆ, ಊರ್ವಶಿಯ ಬೇಡಿಕೆಯು ನಿರ್ದೇಶಕರು ಮತ್ತು ನಿರ್ಮಾಪಕರಿಗೆ ದೊಡ್ಡ ಶಾಕ್ ಕೊಟ್ಟಿದೆ.
ನಟ ಅಲ್ಲು ಅರ್ಜುನ್ ಮತ್ತು ನಿರ್ದೇಶಕ ಸುಕುಮಾರ್ ಕಾಂಬಿನೇಷನ್ನಡಿ ನಿರ್ಮಾಣವಾಗಲಿರುವ ‘ಪುಷ್ಪ’ ಚಿತ್ರ ನಿರೀಕ್ಷೆ ಹೆಚ್ಚಿಸಿದೆ. ಇದರಲ್ಲೊಂದು ಸ್ಪೆಷಲ್ ಡಾನ್ಸ್ ಇದೆಯಂತೆ. ಮಾದಕ ನಟಿಯೇ ಇದಕ್ಕೆ ಸೊಂಟ ಬಳುಕಿಸಿದರೆ ಚೆಂದ ಎನ್ನುವುದು ನಿರ್ದೇಶಕರ ಲೆಕ್ಕಾಚಾರ.
ಹೃತಿಕ್ ರೋಷನ್ ನಟಿಸಿದ್ದ ‘ಕಾಬಿಲ್’ ಚಿತ್ರದ ‘ಹಂಸೀನೋ ಕಾ ದಿವಾನ’ ಹಾಡಿಗೆ ಊರ್ವಶಿ ಬಿಂದಾಸ್ ಆಗಿ ಹೆಜ್ಜೆ ಹಾಕಿದ್ದರು. ಆಕೆಯ ಮಾದಕ ಕುಣಿತಕ್ಕೆ ಅಮಿತಾಭ್ ಬಚ್ಚನ್ ಕೂಡ ಮೆಚ್ಚುಗೆ ಸೂಚಿಸಿದ್ದು ಉಂಟು. ಹಾಗಾಗಿಯೇ, ಸುಕುಮಾರ್ ಮತ್ತು ನಿರ್ಮಾಪಕರು ಆಕೆಯನ್ನು ‘ಪುಷ್ಪ’ದಲ್ಲಿ ಕುಣಿಸಲು ಆಲೋಚಿಸಿದ್ದಾರಂತೆ. ಇದಕ್ಕೆ ಆಕೆ ₹1 ಕೋಟಿ ಸಂಭಾವನೆ ಕೇಳಿದ್ದಾಳೆ. ಈ ದುಬಾರಿ ಮೊತ್ತ ಕೇಳಿ ಚಿತ್ರತಂಡ ಹಿಂದಡಿ ಇಟ್ಟಿದೆ.
ಗೋಪಿಚಂದ್ ನಾಯಕರಾಗಿರುವ ತೆಲುಗಿನ ‘ಸಿಟಿಮಾರ್’ ಚಿತ್ರದ ಐಟಂ ಸಾಂಗ್ನಲ್ಲಿ ಕುಣಿಯಲು ನಿರ್ದೇಶಕ ಸಂಪತ್ ನಂದಿ ಅವರು, ಊರ್ವಶಿ ಅವರನ್ನು ಸಂಪರ್ಕಿಸಿದ್ದರಂತೆ. ಅವರಿಗೂ ಆಕೆ ₹1 ಕೋಟಿಯ ಬೇಡಿಕೆ ಮುಂದಿಟ್ಟಿದ್ದಾಳೆ. ಹಾಗಾಗಿ, ಆಕೆಯನ್ನು ನಿರ್ದೇಶಕರು ಕೈಬಿಟ್ಟಿದ್ದಾರೆ.
ಅಂದಹಾಗೆ ಊರ್ವಶಿ ಐಟಂ ಸಾಂಗ್ನಲ್ಲಿ ಕುಣಿಯಲು ಬರೋಬ್ಬರಿ ₹1 ಕೋಟಿ ನಿಗದಿಪಡಿಸುವುದು ಸರ್ವೇ ಸಾಮಾನ್ಯ ಎನ್ನುವುದು ಬಾಲಿವುಡ್ ಅಂಗಳದ ಮಾತು. ಸಾಮಾನ್ಯವಾಗಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ನಟಿಯರ ಸಂಭಾವನೆಯೇ ಅರ್ಧ ಕೋಟಿ ದಾಟುವುದೇ ಅಪರೂಪ. ಅಂಥದ್ದರಲ್ಲಿ ಒಂದು ಐಟಂ ಸಾಂಗ್ಗೆ ಒಂದು ಕೋಟಿ ಬೇಡಿಕೆ ಇಟ್ಟಿರುವುದು ಬಣ್ಣದ ಜಗತ್ತಿನಲ್ಲಿ ಚರ್ಚೆಗೆ ಗ್ರಾಸವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.