ಕೆ. ಪದ್ಮನಾಭನ್ ನಿರ್ಮಾಣದ, ರಂಗನಾಥ ನಿರ್ದೇಶನದ ‘ಕೂಗು’ ಚಿತ್ರಕ್ಕೆ ಗಂಗಾಧರ್ ಅವರು ಸಂಭಾಷಣೆ ಬರೆದಿದ್ದಾರೆ. ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿ, ಚಿತ್ರದ ಬಗ್ಗೆ ಒಂದಿಷ್ಟು ಮಾಹಿತಿ ನೀಡಲು ಪದ್ಮನಾಭನ್, ರಂಗನಾಥ ಅವರು ಇಡೀ ಚಿತ್ರತಂಡದ ಜೊತೆಯಾಗಿ ಒಂದು ಕಾರ್ಯಕ್ರಮ ಆಯೋಜಿಸಿದ್ದರು. ‘ನಮಗೆ ರೈತ ಬೆಳೆದಿದ್ದೆಲ್ಲವೂ ಬೇಕು. ಆದರೆ ರೈತನಿಗೆ ಮಾತ್ರ ತನ್ನ ಬೆಳೆಗೆ ಸೂಕ್ತ ಬೆಲೆ ಸಿಗುವುದೇ ಇಲ್ಲ. ನಾನು, ಪದ್ಮನಾಭನ್, ರಂಗನಾಥ ಮತ್ತು ರವೀಶ್ (ಸಂಗೀತ ನಿರ್ದೇಶಕ ಎ.ಟಿ. ರವೀಶ್) ಒಟ್ಟಾಗಿ ಸೇರಿ ರೈತನ ಬದುಕಿನ ಬಗ್ಗೆ ಇರುವ ಈ ಸಿನಿಮಾದ ಪರಿಕಲ್ಪನೆಯನ್ನು ಸಿದ್ಧಪಡಿಸಿದೆವು’ ಎಂದರು ಗಂಗಾಧರ್.