ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಪ್ತ ಸಲಹೆಗಳು: ಪ್ರೀತಿಸುತ್ತಿರುವ ಹುಡುಗನನ್ನು ಬಿಟ್ಟು ಇರುವುದು ಹೇಗೆ?

Last Updated 24 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

1. ನಾನು ಒಬ್ಬ ಹುಡುಗನನ್ನು ಪ್ರೀತಿಸುತ್ತಿದ್ದೇನೆ. ನಾನೆಂದರೆ ಅವರಿಗೂ ಇಷ್ಟ. ಪ್ರತಿದಿನ ಮೇಸೆಜ್ ಮತ್ತು ಕರೆ ಮಾಡುತ್ತಾರೆ. ನಾನು ಅವರನ್ನು ಪ್ರೀತಿ ಮಾಡುತ್ತಿರುವ ವಿಷಯ ನನ್ನ ಮನೆಯವರಿಗೂ ಗೊತ್ತು. ಆದರೆ ಈ ವಿಷಯವನ್ನು ಆ ಹುಡುಗನಲ್ಲಿ ಹೇಳಿದರೆ ‘ನನ್ನದು ಬರಿ ಸ್ನೇಹವಷ್ಟೇ, ಪ್ರೀತಿಯಲ್ಲ’ ಎನ್ನುತ್ತಿದ್ದಾರೆ. ನನ್ನ ಪ್ರೀತಿ ಅವರಿಗೆ ಅರ್ಥವಾಗುತ್ತಿಲ್ಲ. ಅವರು ನನಗೆ ಒಂದು ದಿನವೂ ಕರೆ ಮಾಡದೆ ಇರುವುದಿಲ್ಲ. ಆದರೆ ಮದುವೆಯಾಗಲು ಒಪ್ಪುತ್ತಿಲ್ಲ. ನನಗೆ ಏನು ಮಾಡಬೇಕು ತಿಳಿಯುತ್ತಿಲ್ಲ. ಅವರನ್ನು ಬಿಟ್ಟು ಇರಲು ಸಾಧ್ಯವಾಗುತ್ತಿಲ್ಲ. ಆ ವಿಷಯದಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲ. ಇದರಿಂದ ಖಿನ್ನತೆಗೆ ಒಳಗಾಗಿದ್ದೇನೆ. ಯಾವಾಗಲೂ ಆಳುತ್ತಿರುತ್ತೇನೆ. ಯಾರೊಂದಿಗೆ ಮಾತನಾಡಲು ಆಗುತ್ತಿಲ್ಲ.
– ಹೆಸರು, ಊರು ಬೇಡ

ಆ ಹುಡುಗನಿಗೆ ನಿಮ್ಮನ್ನು ಮದುವೆಯಾಗಲು ಇಷ್ಟವಿಲ್ಲ ಎಂಬುದು ತುಂಬಾ ಸ್ಪಷ್ಟವಾಗಿರುವ ವಿಷಯ ಮತ್ತು ಅವರಿಗೆ ನಿಮ್ಮ ಮೇಲೆ ಇರುವುದು ಕೇವಲ ಸ್ನೇಹದ ಭಾವನೆಯಷ್ಟೇ ಎಂಬುದನ್ನೂ ಅವರು ನಿಮ್ಮ ಬಳಿ ಸ್ಪಷ್ಟವಾಗಿಯೇ ಹೇಳಿದ್ದಾರೆ. ಅವರು ನಿಮ್ಮನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಈ ಹುಡುಗ ಎಂದಾದರೂ ನಿಮ್ಮ ಬಳಿ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರಾ? ಅಥವಾ ನೀವೇ ಅವರು ನಿಮ್ಮನ್ನು ಪ್ರೀತಿಸುತ್ತಿದ್ದಾರೆ ಅಂದುಕೊಂಡಿದ್ದಾ? ಈ ಎರಡಕ್ಕೂ ತುಂಬ ವ್ಯತ್ಯಾಸ ಇದೆ. ಅವರ ಬಗ್ಗೆ ಇರುವ ನಿಮ್ಮ ಭಾವನೆಯನ್ನು ಬದಲಾಯಿಸಿಕೊಂಡು ವಾಸ್ತವವನ್ನು ಒಪ್ಪಿಕೊಳ್ಳಿ. ಅವರಿಗೆ ಸಂದೇಶ ಕಳುಹಿಸುವುದು ಹಾಗೂ ಪದೇ ಪದೇ ಕರೆ ಮಾಡಿ ಮಾತನಾಡುವುದನ್ನು ನಿಲ್ಲಿಸಿ. ನೀವು ಆ ಹುಡುಗನನ್ನು ನೇರವಾಗಿ ಭೇಟಿ ಮಾಡಿ, ಮಾತನಾಡಿ. ನಿಮ್ಮಿಬ್ಬರ ಸಂಬಂಧವನ್ನು ನೀವು ಯಾವ ರೀತಿ ತೆಗೆದುಕೊಂಡಿದ್ದೀರಿ ಎಂಬುದನ್ನು ಅವರಿಗೆ ತಿಳಿಸಿ ಮತ್ತು ಅವರನ್ನು ಮದುವೆಯಾಗುವ ಮನಸ್ಸಿದೆ ಎಂಬುದನ್ನೂ ನೇರವಾಗಿ ತಿಳಿಸಿ. ಆಗಲೂ ಅವರು ಒಪ್ಪಿಕೊಳ್ಳದೇ, ನಮ್ಮದು ಕೇವಲ ಸ್ನೇಹ ಎಂದರೆ ಆಗ ನೀವು ಇದೆಲ್ಲವನ್ನೂ ಅಲ್ಲಿಗೇ ನಿಲ್ಲಿಸುವುದು ಉತ್ತಮ. ಅವರ ಬಳಿ ಮತ್ತೆ ಮತ್ತೆ ನೀವು ಅವರನ್ನು ಸಂಪರ್ಕ ಮಾಡಬಾರದೆಂದು ಕೇಳಿಕೊಳ್ಳಿ. ನೀವು ಯಾರೊಂದಿಗೂ ಒತ್ತಾಯಪೂರ್ವಕವಾಗಿ ಸ್ನೇಹವನ್ನಾಗಲೀ ಸಂಬಂಧವನ್ನಾಗಲೀ ಮುಂದುವರಿಸಲು ಸಾಧ್ಯವಿಲ್ಲ. ಆ ಭಾವನೆ ಇಬ್ಬರ ಕಡೆಯಿಂದಲೂ ಇರಬೇಕು. ಇಲ್ಲದಿದ್ದರೆ ಆ ಸಂಬಂಧ ಹೆಚ್ಚು ದಿನಗಳವರೆಗೆ ಮುಂದುವರಿಯುವುದಿಲ್ಲ. ಈ ಸಂದರ್ಭದಿಂದ ಹೊರ ಬರಲು ನಿಮಗೆ ಕೆಲವು ದಿನಗಳು ಬೇಕಾಗಬಹುದು. ಆದರೆ ಸಮಯ ಎಲ್ಲವನ್ನೂ ಮರೆಸುತ್ತದೆ. ಹಾಗಾಗಿ ಸತ್ಯವನ್ನು ಒಪ್ಪಿಕೊಂಡು ಮುಂದೆ ಸಾಗಿ. ಯಾರಿಗೆ ಗೊತ್ತು, ನೀವು ಪ್ರೀತಿಸುವುದಕ್ಕಿಂತ ಹೆಚ್ಚಿಗೆ ನಿಮ್ಮನ್ನು ಪ್ರೀತಿಸುವ ವ್ಯಕ್ತಿಯನ್ನು ನೀವು ಜೊತೆಗಾರನನ್ನಾಗಿ ಪಡೆಯಬಹುದು. ಸದ್ಯದ ಪರಿಸ್ಥಿತಿಯಿಂದ ಹೊರಬರಲು ಉಲ್ಲಾಸದಾಯಕ ಹವ್ಯಾಸಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ.
***

2. ನಾನು ಮಾನಸಿಕ ರೋಗದಿಂದ ಬಳಲುತ್ತಿದ್ದೇನೆ. ಅದೇನೆಂದರೆ ನಾನು ಯಾವಾಗಲೂ ನನ್ನ ಗಂಡನ ಮೇಲೆ ಅನುಮಾನ ಪಡುತ್ತೇನೆ. ಕಾರಣ ಒಮ್ಮೆ ಅವರ ಮೊಬೈಲ್‌ಗೆ ಹುಡುಗಿಯೊಬ್ಬಳಿಂದ ‘ಹಾಯ್’ ಎಂದು ಮೆಸೇಜ್ ಬಂದಿತ್ತು. ರಾತ್ರಿ ಅನೇಕ ಭಾರಿ ಕರೆ ಬಂದಿತ್ತು. ನಾನು ಗಂಡನ ಬಳಿ ‘ಯಾರದು?’ ಎಂದು ಕೇಳಿದರೆ ನನಗೆ ಗೊತ್ತಿಲ್ಲ ಎಂದಿದ್ದರು. ಹಾಗಾಗಿ ಅಂದಿನಿಂದ ನನಗೆ ಅವರ ಬಗ್ಗೆ ಯೋಚಿಸಿ ಯೋಚಿಸಿ ತಲೆ ಚಿಟ್ಟು ಹಿಡಿದಿದೆ. ಯಾವಾಗಲೂ ನೆಗೆಟಿವ್‌ ಯೋಚನೆಗಳೇ ತಲೆಯಲ್ಲಿ ಸುತ್ತುತ್ತಿರುತ್ತವೆ. ಒಮ್ಮೆ ಡಾಕ್ಟರ್‌ ಬಳಿ ತೋರಿಸಿದ್ದೆ. ಅವರು ನಾನು ಖಿನ್ನತೆಗೆ ಒಳಗಾಗಿದ್ದೇನೆ ಎಂದು ಮಾತ್ರೆಗಳನ್ನು ನೀಡಿದ್ದರು. ಆದರೆ ಅದರಿಂದ ಏನೂ ಪ್ರಯೋಜನವಾಗಲಿಲ್ಲ. ಈಗೀಗ ನನ್ನ ಗಂಡನೊಂದಿಗೆ ಗಂಡಸರು–ಹೆಂಗಸರು ಯಾರೇ ಮಾತನಾಡಿದರು ಕೋಪ ಬರುತ್ತದೆ. ಅವರು ನಮ್ಮ ಮಗನ ಮೇಲೆ ಆಣೆ ಮಾಡಿ ಹೇಳುತ್ತಾರೆ ‘ನಾನು ಆ ತರಹ ಇಲ್ಲ’ ಎಂದು. ಆದರೂ ನನಗೆ ಅನುಮಾನ ಕಡಿಮೆಯಾಗುತ್ತಿಲ್ಲ. ನಾನು ಅವಳಿಗೆ ಬೇರೆ ನಂಬರ್‌ನಿಂದ ಕರೆ ಮಾಡಿ ಕೇಳಿದರೆ ನನ್ನ ಗಂಡ ಗೊತ್ತಿಲ್ಲ ಎಂದಿದ್ದಳು. ಆದರೂ ಅನುಮಾನ ತಗ್ಗುತ್ತಿಲ್ಲ. ಏನು ಮಾಡಲಿ?
–ಹೆಸರು, ಊರು ಬೇಡ

ಅನುಮಾನವು ನಮ್ಮ ಜೀವನದಲ್ಲಿ ಅನೇಕ ತೊಂದರೆಗಳಿಗೆ ಕಾರಣವಾಗುತ್ತದೆ. ಅದು ನಿಮ್ಮಲ್ಲಿ ಅಭದ್ರತೆಯ ಭಾವನೆ ಮೂಡುವಂತೆ ಮಾಡುತ್ತದೆ. ಜೊತೆಗೆ, ಆತ್ಮಗೌರವವನ್ನು ಕಡಿಮೆ ಮಾಡಿ, ಹತಾಶೆ ಹಾಗೂ ಖಿನ್ನತೆಗಳು ಆವರಿಸುವಂತೆಯೂ ಮಾಡುತ್ತದೆ. ನೆನೆಪಿಡಿ, ಅನುಮಾನ ಸಹಜವೇ ಮತ್ತು ಅದು ಎಲ್ಲರಲ್ಲೂ ಇರುತ್ತದೆ.ನಿಮ್ಮ ಅನುಮಾನವನ್ನು ಹೋಗಲಾಡಿಸಬೇಕೆಂದರೆ ನೀವು ನಿಮ್ಮ ಗಂಡನನ್ನು ಅರ್ಥ ಮಾಡಿಕೊಳ್ಳಬೇಕು. ನಿಮಗೆ ಅವರ ಮೇಲಿರುವ ಭಾವನೆಗಳನ್ನು ಸಕಾರಾತ್ಮಕವಾಗಿಸಿಕೊಳ್ಳಬೇಕು. ಅನುಮಾನಗಳು ಜೀವನವನ್ನು ನೆಮ್ಮದಿಯಾಗಿರಲು ಬಿಡುವುದಿಲ್ಲ. ಅನುಮಾನವನ್ನು ಹೇಗೆ ವ್ಯಕ್ತಪಡಿಸಬೇಕು ಎಂದು ಕಲಿಯುವ ಬದಲು ಅವುಗಳನ್ನು ಹಾಗೇ ಕರಗುವುದಕ್ಕೆ ಬಿಡಿ. ಆಗಷ್ಟೆ ಶಾಂತಿಯನ್ನು ಕಂಡುಕೊಳ್ಳಲು ಸಾಧ್ಯ.ನೀವು ನಕಾರಾತ್ಮಕ ವಿಷಯಗಳ ಮೇಲೆ ಹೆಚ್ಚು ಗಮನವನ್ನು ಕೊಡುತ್ತಿದ್ದೀರಿ. ಅವೆಲ್ಲವನ್ನೂ ನಿರ್ಲಕ್ಷಿಸಿ. ಸುತ್ತಲೂ ನಡೆಯುತ್ತಿರುವ ಸಕಾರಾತ್ಮಕ ವಿಷಯಗಳನ್ನು ಗಮನಿಸಿ. ಆತ್ಮೀಯರೊಂದಿಗೆ ಮಾತನಾಡಿ. ಆಪ್ತಸಮಾಲೋಚಕರನ್ನು ಭೇಟಿಯಾಗಿ. ಧ್ಯಾನ ಮತ್ತು ಯೋಗಾಭ್ಯಾಸ ನಿಮ್ಮ ಆತಂಕ ಕಡಿಮೆ ಮಾಡಿ, ಮನಸ್ಸನ್ನು ಶಾಂತವಾಗಿರಿಸಲು ಸಹಾಯಮಾಡುತ್ತದೆ.
**

3. ನಾನು ಸಿಂಗಲ್ ಪೇರೆಂಟ್‌. ನನ್ನ ಮಗ 8ನೇ ತರಗತಿಯಲ್ಲಿ ಓದುತ್ತಿದ್ದಾನೆ. ನಾನು ಜೀವನದಲ್ಲಿ ತುಂಬಾ ನೊಂದಿದ್ದೇನೆ. ಇತ್ತೀಚೆಗೆ ತುಂಬಾ ಒಂಟಿ ಎನ್ನಿಸುತ್ತಿದೆ. ನನ್ನನ್ನು ಅರ್ಥ ಮಾಡಿಕೊಳ್ಳುವವರು ಯಾರೂ ಇಲ್ಲ ಅನ್ನಿಸುತ್ತದೆ. ನೋವು, ಅವಮಾನ, ಅ‍ಪಮಾನ ಇವೆಲ್ಲವನ್ನೂ ಸಹಿಸಲು ಆಗುತ್ತಿಲ್ಲ. ಒಮ್ಮೊಮ್ಮೆ ಸಾಯುವ ಯೋಚನೆ ಬರುತ್ತದೆ. ಆದರೆ ಮಗನ ಕಾರಣಕ್ಕೆ ಅದು ಸಾಧ್ಯವಾಗುತ್ತಿಲ್ಲ. ಅವನಿಗೆ ಆರೋಗ್ಯವೂ ಸರಿಯಿಲ್ಲ. ನನಗೆ ಮನಃಶಾಂತಿ ಬೇಕು. ಏನು ಮಾಡಲಿ?
–ಹೆಸರು, ಊರು ಬೇಡ

ಸಿಂಗಲ್ ಪೇರೆಂಟ್ ಆಗಿ ಬದುಕುವುದು ಹಾಗೂ ಮಗುವನ್ನು ಬೆಳೆಸುವುದು ಎಷ್ಟು ಕಷ್ಟ ಎಂಬುದು ನನಗೆ ಅರ್ಥವಾಗುತ್ತದೆ. ಆದರೂ, ನೀವೇ ತಿಳಿಸಿದಂತೆ ಈಗ ನೀವು ಮೊದಲು ಆದ್ಯತೆ ನೀಡಬೇಕಾಗಿರುವುದು ನಿಮ್ಮ ಮಗನ ಓದು ಹಾಗೂ ಆರೋಗ್ಯದ ಮೇಲೆ.ಅದನ್ನು ನಿಮ್ಮ ಮನಸಿನಲ್ಲಿಟ್ಟುಕೊಂಡು ಜೀವನವನ್ನು ಹೇಗಿದೆಯೋ ಹಾಗೆ ಒಪ್ಪಿಕೊಂಡು, ಹೇಗೆ ಬರುತ್ತದೋ ಹಾಗೆ ಸ್ವೀಕರಿಸಿ. ಈಗ ನೀವು ಮಾಡಬೇಕಿರುವುದು ಏನೆಂದರೆ, ನಿಮ್ಮ ಮನಸ್ಸಿಗೆ ಇಷ್ಟವಾಗುವ ಕೆಲಸಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವುದು. ನಿಮಗೆ ಒಲವಿರುವ, ಆದರೆ ಎಂದೂ ಪ್ರಯತ್ನಿಸದ ಹವ್ಯಾಸಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ನೀವು ನೌಕರಿಯಲ್ಲಿ ಇಲ್ಲ ಎಂದಾದರೆ ಕೆಲವರಾದರೂ ಸ್ನೇಹಿತರನ್ನು ಸಂಪಾದಿಸಿಕೊಳ್ಳಿ. ಅವರೊಂದಿಗೆ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಬಹುದು; ಮುಕ್ತವಾಗಿ ಮಾತನಾಡಬಹುದು, ನೋವು–ನಲಿವುಗಳನ್ನು ಹಂಚಿಕೊಳ್ಳಬಹುದು. ಸಾಧ್ಯವಾದರೆ ಸಾಮಾಜಿಕ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳಿ. ಆಗ ನಿಮಗೆ ಹೊರಗಿನ ಪ್ರಪಂಚವನ್ನು ನೋಡಲು ಸಹಾಯ ಮಾಡುತ್ತದೆ; ನಿಮಗಿಂತಲೂ ಹೆಚ್ಚು ಕಷ್ಟದಲ್ಲಿರುವವರು ನಿಮ್ಮ ಸುತ್ತಲೂ ಇದ್ದಾರೆ ಎಂಬುದೂ ತಿಳಿಯುತ್ತದೆ. ದೇವರ ಪ್ರಾರ್ಥನೆ, ಸ್ತೋತ್ರಪಠಣಗಳನ್ನು ಮಾಡುವುದರಿಂದ ಮನಸ್ಸು ಶಾಂತವಾಗುತ್ತದೆ. ಧ್ಯಾನ ಮಾಡುವುದನ್ನೂ ಅಭ್ಯಾಸ ಮಾಡಿಕೊಳ್ಳಿ. ಸಂಗೀತವನ್ನು ಕೇಳಿ. ಮಗನೊಂದಿಗೆ ಕುಳಿತು ಒಳ್ಳೆಯ ಪುಸ್ತಕಗಳನ್ನು ಓದಿ, ಅದರ ಬಗ್ಗೆ ಚರ್ಚಿಸಿ. ಇಂಥ ಹವ್ಯಾಸಗಳಿಂದ ನೀವು ಖಿನ್ನತೆಯಿಂದ ಹೊರಬರಲು ಸಹಾಯವಾಗುತ್ತದೆ. ಪ್ರತಿದಿನ ವಾಕಿಂಗ್ ಮಾಡಿ; ಇ‌ದರಿಂದ ಆರೋಗ್ಯವೂ ಸುಧಾರಿಸುತ್ತದೆ.
**
ಏನಾದ್ರೂ ಕೇಳ್ಬೋದು
ಕೌಟುಂಬಿಕ ಸಮಸ್ಯೆ, ವೈಯಕ್ತಿಕ ಹಾಗೂ ಮಾನಸಿಕ ಸಮಸ್ಯೆಗಳ ಕುರಿತು ಪ್ರಶ್ನೆಗಳನ್ನು ನಮಗೆ ಕಳುಹಿಸಿ. ನಿಮ್ಮ ಪ್ರಶ್ನೆಗಳಿಗೆ ಆಪ್ತ ಸಮಾಲೋಚಕಿ ಸುನೀತಾ ರಾವ್ ಉತ್ತರಿಸಲಿದ್ದಾರೆ.
ಇಮೇಲ್ ವಿಳಾಸ: bhoomika@prajavani.co.inವಾಟ್ಸ್ಯಾಪ್: 9482006746

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT