ಜೈಪುರ: ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಸರ್ಕಾರಿ ಶಾಲೆಯೊಂದರ ಪ್ರಾಚಾರ್ಯರು ಸೇರಿದಂತೆ 15 ಶಿಕ್ಷಕರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಐವರು ವಿದ್ಯಾರ್ಥಿನಿಯರು ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣ ಕುರಿತು ಗ್ರಾಮದಲ್ಲಿ ಪ್ರಾಥಮಿಕ ತನಿಖೆ ನಡೆಸಿರುವ ಪೊಲೀಸರು, ಕಳೆದ ಡಿಸೆಂಬರ್ನಲ್ಲಿ ಮೂವರು ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಬಂಧಿಸಲ್ಪಟ್ಟ ಶಾಲೆಯ ಮಾಜಿ ಶಿಕ್ಷಕನಿಂದ ಸೇಡು ಮತ್ತು ಸಾಕ್ಷಿ ಕಿರುಕುಳದ ಹಿನ್ನೆಲೆಯಲ್ಲಿ ಈ ಪ್ರಕರಣ ದಾಖಲಿಸಲಾಗಿದೆ ಎಂದು ಶಂಕಿಸಿದ್ದಾರೆ.
‘ದೂರು ನೀಡಿದವರು ವೈದ್ಯಕೀಯ ಪರೀಕ್ಷೆಗೆ ಒಳಗಾಗಲು ನಿರಾಕರಿಸಿದ್ದಾರೆ. ಪ್ರಕರಣದ ಸಮಗ್ರ ತನಿಖೆಗೆ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸಲಾಗಿದೆ’ ಎಂದು ಭಿವಾಡಿಯ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಮೂರ್ತಿ ಜೋಷಿ ತಿಳಿಸಿದ್ದಾರೆ.
ಅಲ್ವಾರ್ ಜಿಲ್ಲೆಯ ಭಿವಾಡಿಯ ಮಂಧನ್ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿನಿಯರು ಮಂಗಳವಾರ ರಾತ್ರಿ ಮೂರು ಎಫ್ಐಆರ್ ದಾಖಲಿಸಿದ್ದಾರೆ. ಐವರು ಮಹಿಳೆಯರು ಸೇರಿದಂತೆ ಪ್ರಾಚಾರ್ಯರು ಮತ್ತು 14 ಶಿಕ್ಷಕರ ವಿರುದ್ಧ ಪೋಕ್ಸೊ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು.
‘ಶಾಲೆಯ ಸಂಪೂರ್ಣ ಸಿಬ್ಬಂದಿಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಬಾಲಕಿಯರ ಕುಟುಂಬದವರು ವೈದ್ಯಕೀಯ ಪರೀಕ್ಷೆ ನಡೆಸಲು ನಿರಾಕರಿಸಿದ್ದಾರೆ. ಅವರ ಹೇಳಿಕೆಗಳನ್ನು ನ್ಯಾಯಾಲಯದಲ್ಲಿ ದಾಖಲಿಸಿಕೊಳ್ಳಲಾಗುವುದು ಮತ್ತು ಕೂಲಂಕುಷವಾಗಿ ತನಿಖೆ ನಡೆಸಲಾಗುವುದು’ ಎಂದರು.
‘ನಾನು ಗ್ರಾಮಕ್ಕೆ ಹೋಗಿ ಗ್ರಾಮಸ್ಥರು ಮತ್ತು ಕುಟುಂಬ ಸದಸ್ಯರೊಂದಿಗೆ ಮಾತನಾಡಿದ್ದೇನೆ. ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಇದು ಸಾಕ್ಷಿ ಕಿರುಕುಳದ ಪ್ರಕರಣವಾಗಿ ಕಂಡುಬರುತ್ತದೆ’ ಎಂದು ಹೇಳಿದರು.
‘ಕಳೆದ ಡಿಸೆಂಬರ್ನಲ್ಲಿ, ಮೂವರು ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಅಮಾನತುಗೊಂಡಿರುವ ಶಾಲೆಯ ಮಾಜಿ ಶಿಕ್ಷಕನನ್ನು ಬಂಧಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಕಳೆದ ರಾತ್ರಿ ಎಫ್ಐಆರ್ಗಳಲ್ಲಿ ದಾಖಲಾಗಿರುವ ಎಲ್ಲಾ ಸಿಬ್ಬಂದಿ ಇತ್ತೀಚೆಗೆ ಜಾಮೀನು ಪಡೆದ ತಮ್ಮ ಸಹೋದ್ಯೋಗಿ ವಿರುದ್ಧ ಹೇಳಿಕೆಗಳನ್ನು ನೀಡಿದ್ದರು. ಶಾಲಾ ಶಿಕ್ಷಕರ ವಿರುದ್ಧ ಪ್ರಕರಣ ದಾಖಲಿಸಲು ಅಮಾನತುಗೊಂಡಿರುವ ಶಿಕ್ಷಕರು ಐವರು ಬಾಲಕಿಯರ ಕುಟುಂಬ ಸದಸ್ಯರ ಮನವೊಲಿಸಿ, ಅವರೊಂದಿಗೆ ಪೊಲೀಸ್ ಠಾಣೆ ಸಮೀಪ ಬಂದಿದ್ದರು. ಬಾಲಕಿಯರು ದೂರು ನೀಡುವ ಸಂದರ್ಭದಲ್ಲಿ ಅವರು ಹೊರಗೆ ಕಾಯುತ್ತಿದ್ದರು’ ಎಂದು ಎಸ್ಪಿ ಜೋಷಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.